ಚೆನ್ನೈ: ಗುರುಗಳು ತಮ್ಮ ವಿದ್ಯಾರ್ಥಿಗಳು ಕಲಿತು ದೇಶದಲ್ಲಿ ಉತ್ತಮ ಪ್ರಜೆಯಾಗಬೇಕೆಂದು ಅವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಶಿಕ್ಷಕರೊಬ್ಬರು ಪ್ರತಿದಿನ ತಮ್ಮ ಸ್ವಂತ ಹಣದಲ್ಲಿ 120 ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರವನ್ನು ಒದಗಿಸುತ್ತಿದ್ದಾರೆ.
ಕೊಡುಂಗಾಯೂರಿನಲ್ಲಿರುವ ಚೆನ್ನೈ ಹೈಸ್ಕೂಲಿನ ಶಿಕ್ಷಕ ಪಿ.ಕೆ. ಇಲಾಮಾರನ್ ಅವರು ಪ್ರತಿದಿನ 120 ಮಕ್ಕಳಿಗೆ ಬೆಳಗ್ಗಿನ ಉಪಹಾರವನ್ನು ನೀಡುತ್ತಿದ್ದಾರೆ. ಮುಂಜಾನೆ ಶಾಲೆಗೆ ಬರುವ ಆತುರದಲ್ಲಿ ವಿದ್ಯಾರ್ಥಿಗಳು ತಿಂಡಿ ತಿನ್ನದೇ ಬರುವುದು ಅಥವಾ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದೇ ಬೆಳಗ್ಗೆ ಖಾಲಿ ಹೊಟ್ಟೆಯಿಂದ ಬರೋದನ್ನು ಕಂಡು ಇಲಾಮಾರನ್ ಈ ಕೆಲಸಕ್ಕೆ ಮುಂದಾಗಿದ್ದಾರೆ. ಇಲಾಮಾರನ್ ಅವರು ಸುಮಾರು 2 ವರ್ಷದಿಂದ ವಿದ್ಯಾರ್ಥಿಗಳಿಗೆ ಉಪಹಾರ ನೀಡುತ್ತಿದ್ದಾರೆ.
ಮುಂಜಾನೆ ವಿದ್ಯಾರ್ಥಿಗಳಿಗೆ ತಿಂಡಿ ಬಡಿಸುವಾಗ ಅವರ ಜೊತೆ ಇದ್ದು ಸ್ವಲ್ಪ ಸಮಯ ಕಳೆಯುತ್ತೇನೆ. ಇದು ನನಗೆ ತುಂಬಾ ಖುಷಿ ತಂದಿದೆ. ಶಾಲೆಯ ಸಮೀಪದ ಅಂಗಡಿಯಿಂದ ಪ್ರತಿದಿನ ಇಡ್ಲಿ ಮತ್ತು ಪೊಂಗಲ್ ತಿಂಡಿಯನ್ನು ತಂದು ಬಡಿಸುತ್ತೇವೆ ಎಂದು ಇಲಾಮಾರನ್ ಹೇಳಿದ್ದಾರೆ.
ಶಿಕ್ಷಕ ಇಲಾಮಾರನ್ 7 ಮತ್ತು 9ನೇ ತರಗತಿಗೆ ಪಾಠ ಮಾಡುತ್ತಿದ್ದು, ಇವರು ಶಿಕ್ಷಕರ ಸಂಘದ ಅಧ್ಯಕ್ಷರು ಆಗಿದ್ದಾರೆ. ಆದರೆ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಮಕ್ಕಳಿಗೆ ಉಚಿತ ಉಪಹಾರ ನೀಡುತ್ತಾರೆ. ಬೆಳಗ್ಗೆ 7.30 ರಿಂದ 8 ಗಂಟೆಯವರೆಗೆ 10 ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಉಪಹಾರ ನೀಡಿದರೆ, ಉಳಿದ ವಿದ್ಯಾರ್ಥಿಗಳಿಗೆ 8.20 ರಿಂದ 8.50 ರ ವರೆಗೂ ನೀಡುತ್ತಾರೆ. ಇದು ಶಾಲೆ ಮತ್ತು ಅಲ್ಲಿನ ಶಿಕ್ಷಕರು ಅನುಸರಿಸುವ ಅನೇಕ ಉಪಕ್ರಮಗಳಲ್ಲಿ ಒಂದಾಗಿದೆ.
ನಾನು ಈ ಶಾಲೆಗೆ ಸೇರಿಕೊಂಡಾಗ ಕೇವಲ 370 ವಿದ್ಯಾರ್ಥಿಗಳು ಮಾತ್ರ ಇದ್ದರು. ಆದರೆ ನಾಲ್ಕು ವರ್ಷದಲ್ಲಿ ಈ ಸಂಖ್ಯೆ 270 ರಿಂದ 980ಕ್ಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರ ಸಂಖ್ಯೆಯೂ ಅಧಿಕವಾಗಿದ್ದು, 11 ರಿಂದ 35ಕ್ಕೆ ಏರಿದೆ ಎಂದು ಶಾಲೆಯ ಪ್ರಿನ್ಸಿಪಾಲ್ ಮುನಿರಾಮಯ್ಯ ಹೇಳಿದ್ದಾರೆ.
ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಪ್ಲಾನ್ ಹಾಕಿಕೊಂಡಿರುವ ಇವರು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ನೀಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ಆಡಳಿತ ಮಂಡಳಿ ಸಹಾಯದಿಂದ ಶಾಲೆಯ ಎಂಟು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶಿಕ್ಷಕ ಮತ್ತು ವಿದ್ಯಾರ್ಥಿ ಹಾಜರಾತಿಗಳನ್ನು ಮೇಲ್ವಿಚಾರಣೆ ಮಾಡಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಬಳಸುವ ಏಕೈಕ ಸರ್ಕಾರಿ ಶಾಲೆ ನಮ್ಮದಾಗಿದೆ ಎಂದ ಮುನಿರಾಮಯ್ಯ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv