ಬೆಂಗಳೂರು: ಸಾಂದರ್ಭಿಕ ಶಿಶು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಆಪರೇಷನ್ ಕಮಲದ ಭಯ ಶುರವಾಗಿದೆ.
ಕಾಂಗ್ರೆಸ್ಸಿನ ಕೆಲ ಶಾಸಕರಿಂದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಶೀಘ್ರವಾಗಿ ಸಚಿವ ಸಂಪುಟ ವಿಸ್ತರಣೆಗೆ ಕೆಲ ಕಾಂಗ್ರೆಸ್ ಶಾಸಕರ ಬಿಗಿ ಪಟ್ಟು ಹಿಡಿದಿದ್ದು, ಸಂಪುಟದಲ್ಲಿ ಸ್ಥಾನ ಕೊಡಿ, ಇಲ್ಲದಿದ್ದರೇ ಬಿಜೆಪಿ ಕಡೆ ನಮ್ ನಡೆ ಎಂದು ಕೆಲ ಶಾಸಕರು ಹೇಳಿದ್ದಾರೆ ಅಂತ ತಿಳಿದು ಬಂದಿದೆ.
ಕಾಂಗ್ರೆಸ್ಸಿನ 10ರಿಂದ 12 ಶಾಸಕರಿಂದ ಬಿಜೆಪಿಗೆ ಹೋಗುವ ಬೆದರಿಕೆ ಒಡ್ಡಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ನೆಪದಲ್ಲಿ ಕಾಂಗ್ರೆಸ್ಸಿನವರು ಬ್ಲ್ಯಾಕ್ ಮೇಲ್ ತಂತ್ರವನ್ನು ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಸಚಿವ ಸಂಪುಟ ರಚನೆಯಾಗಿದ್ದು, 6 ಸ್ಥಾನಗಳು ಮಾತ್ರ ಉಳಿದಿದ್ದು, ಆ ಸ್ಥಾನವನ್ನು ಯಾರಿಗೆ ಕೊಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಕೆಲ ಕಾಂಗ್ರೆಸ್ ಶಾಸಕರು ನೀಡಿದ ಶಾಕ್ಗೆ ಕಾಂಗ್ರೆಸ್ನಲ್ಲಿಯೇ ಆತಂಕ ಶುರುವಾಗಿದೆ. ಇದರಿಂದ ಅತೃಪ್ತರನ್ನು ಸೆಳೆದು ಆಪರೇಷನ್ ಕಮಲ ನಡೆಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ಒಂದು ವೇಳೆ ಶಾಸಕರ ಬೇಡಿಕೆಗೆ ಸಮ್ಮಿಶ್ರ ಸರ್ಕಾರ ಮಣಿಯದಿದ್ದರೇ ಆಷಾಢದ ಬಳಿಕ ಸರ್ಕಾರಕ್ಕೆ ಕಂಟಕ ಎದುರಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. 15 ಶಾಸಕರು ಕೈಕೊಟ್ಟರೆ ವಿಧಾನಸಭೆಯ ಒಟ್ಟು ಶಾಸಕರ ಸಂಖ್ಯೆ 207ಕ್ಕೆ ಕುಸಿಯಲಿದೆ. ಈ ಬೆಳವಣಿಗೆ ನಡೆದರೆ ಬಿಜೆಪಿಗೆ ಸರಳ ಬಹುಮತದ ಲೆಕ್ಕಾಚಾರ ಸುಲಭವಾಗುತ್ತದೆ. ಆದ್ದರಿಂದ ಕಾಂಗ್ರೆಸ್ 15 ಶಾಸಕರ ಮೇಲೆ ಬಿಜೆಪಿಯಿಂದ ಹದ್ದಿನ ಕಣ್ಣು ಬಿದ್ದಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ನಮಗೂ ಗೊತ್ತಿದೆ ಯಾರ್ ಯಾರು ಏನೇನು ಪ್ರಯತ್ನ ಮಾಡುತ್ತಿದ್ದಾರೆ. ಕೆಲವರಿಗೆ ಕೆಲಸವಿಲ್ಲದೆ ನಮ್ಮವರ ಬಳಿ ಬಂದು ಆಮಿಷ ಒಡ್ಡಿ ಮಾತನಾಡುತ್ತಿದ್ದಾರೆ. ಆದರೆ ನಾವು ಈಗ ಅದರ ಬಗ್ಗೆ ಮಾತನಾಡುವುದಿಲ್ಲ. ಸೂಕ್ತ ಸಮಯ ಸಂದರ್ಭದಲ್ಲಿ ಮಾತನಾಡುತ್ತೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.