ಲಕ್ನೋ: ಹರಿದ್ವಾರದ ಶಿವ ನನ್ನಿಂದ ಜಲಾಭಿಷೇಕ ಮಾಡಿಸಿಕೊಳ್ಳಲು ಬಯಸಿದ್ದಾನೆ, ಹೀಗಾಗಿ ನನಗೆ ರಜೆ ನೀಡಬೇಕು ಎಂದು ಉತ್ತರ ಪ್ರದೇಶ ಪೇದೆಯೊಬ್ಬ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬುಲಂದ್ಶಹರದ ಸಿಯಾನಾ ಪೊಲೀಸ್ ಠಾಣೆಯ ವಿನೋದ್ ಕುಮಾರ್ ಹೀಗೆ ಪತ್ರ ಬರೆದ ಪೇದೆ. ಆಗಸ್ಟ್ 5 ರಂದು ವಿನೋದ್ ಕುಮಾರ್ ಡೆಪ್ಯುಟಿ ಎಸ್ಪಿಗೆ 6 ದಿನಗಳ ರಜೆ ಕೋರಿ, ಪತ್ರ ಬರೆದಿದ್ದರು. ಇದು ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಕಮೆಂಟ್ ಹರಿದಾಡುತ್ತಿವೆ.
ಪತ್ರದಲ್ಲಿ ಏನಿದೆ?
ನನ್ನ ಕನಸಿನಲ್ಲಿ ಶಿವ ಕನಸಿನಲ್ಲಿ ಬಂದಿದ್ದನು. ಶ್ರಾವಣ ಮಾಸದಲ್ಲಿ ನಡೆಯುವ ಕನ್ವರ್ ತೀರ್ಥಯಾತ್ರೆ ಪಾಲ್ಗೊಂಡು, ಹರಿದ್ವಾರದಲ್ಲಿ ತನಗೆ ಜಲಾಭಿಷೇಕ ಮಾಡುವಂತೆ ಸೂಚಿಸಿದ್ದಾನೆ. ಹೀಗಾಗಿ ದಯವಿಟ್ಟು ನನಗೆ 6 ದಿನಗಳ ರಜೆಯನ್ನು ನೀಡಿ ಎಂದು ವಿನೋದ್ ಕುಮಾರ್ ಬರೆದು ಡೆಪ್ಯುಟಿ ಎಸ್ಪಿಗೆ ನೀಡಿದ್ದರು.
ರಜೆ ಕೇಳಿ ಇದೇ ಮೊದಲ ಬಾರಿಗೆ ಇಂತಹ ಅರ್ಜಿಯೊಂದು ಬಂದಿದ್ದು, ಅರ್ಜಿ ಪರಿಗಣಿಸಿರುವ ಮೇಲಾಧಿಕಾರಿಗಳು ವಿನೋದ್ಗೆ 6 ದಿನಗಳ ರಜೆ ಮಂಜೂರು ಮಾಡಿದ್ದಾರೆ ಎಂದು ಸಿಯಾನಾ ಠಾಣೆಯ ಎಎಸ್ಪಿ ಪ್ರಮೋದ್ ಕುಮಾರ್ ಹೇಳಿದ್ದಾಗಿ ವರದಿಯಾಗಿದೆ.