ಮುಂಬೈ: ಮದ್ಯದ ದೊರೆ ವಿಜಯ್ ಮಲ್ಯ ಬಿಜೆಪಿ ಅಭಿವೃದ್ಧಿಯ ರಾಯಭಾರಿ ಎಂದು ಶಿವಸೇನೆ ಟೀಕಿಸಿದೆ.
ಕೆಲವು ದಿನಗಳ ಹಿಂದೆ ಕೇಂದ್ರ ಸಚಿವರಾದ ಜುವಾಲ್ ಒರಾಮ್ ನವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡುವಾಗ ವಿಜಯ್ ಮಲ್ಯ ಓರ್ವ ಚತುರ, ಜಾಣ್ಮೆಯ ಉದ್ಯಮಿ. ಅವರಲ್ಲಿರುವ ಕೌಶಲ್ಯಗಳನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಶಿವಸೇನೆ ಸಾಮ್ನಾ ಪತ್ರಿಕೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಲೇಖನದಲ್ಲಿ ಬಿಜೆಪಿ ತನ್ನ ನಾಯಕರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದು, ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ಈ ವಿಚಾರದಲ್ಲಿ ಮೌನವಹಿಸಿದ್ದಾರೆ ಎಂದು ಹೇಳಿದೆ.
ಸಚಿವರ ಪ್ರಕಾರ ಕಷ್ಟಪಟ್ಟು ದುಡಿಯೋದು ತಪ್ಪು ಎಂದು ಅರ್ಥವಾಗುತ್ತದೆ. ಬಿಜೆಪಿಯ ‘ಸ್ಟಾರ್ಟ್ ಅಪ್ ಇಂಡಿಯಾ’ ಮತ್ತು ‘ಮೇಕ್ ಇನ್ ಇಂಡಿಯಾ’ದ ರಾಯಭಾರಿಯಾಗಿ ವಿಜಯ್ ಮಲ್ಯರನ್ನು ನೇಮಿಸಬಹುದು. ಕಾರಣ ಸಚಿವರ ಯಶಸ್ವಿ ಉದ್ಯಮಿಯಾಗಲು ಸ್ಮಾರ್ಟ್ ಇದ್ರೆ ಸಾಕು ಅಂತಾ ಹೇಳಿದ್ದಾರೆ. ಮುಂದೊಂದು ದಿನ ಬಿಜೆಪಿ ನಾಯಕರು ದಾವೂದ್ ಇಬ್ರಾಹಿಂ ಓರ್ವ ಧೈರ್ಯವಂತ ವ್ಯಕ್ತಿ ಎಂದು ಹೇಳಿದ್ರೂ ಅಚ್ಚರಿಪಡಬೇಕಿಲ್ಲ ಎಂದು ಕಟು ಪದಗಳಿಂದ ಟೀಕಿಸಿದೆ. ಇದನ್ನೂ ಓದಿ: ಕಷ್ಟಪಟ್ಟು ದುಡಿದ್ರೆ ಸಾಲಲ್ಲ, ಮಲ್ಯನ ರೀತಿ ಸ್ಮಾರ್ಟ್ ಆಗಿ: ನವ ಉದ್ಯಮಿಗಳಿಗೆ ಕೇಂದ್ರ ಸಚಿವರ ಉಪದೇಶ
ಕೇಂದ್ರ ಸಚಿವ ಜುವಾಲ್ ಒರಾಮ್, 2018ರ ರಾಷ್ಟ್ರೀಯ ಆದಿವಾಸಿಗಳ ಉದ್ಯಮ ಸಮ್ಮೇಳನದಲ್ಲಿ ಮಾತನಾಡುತ್ತಾ, ನೀವೆಲ್ಲರೂ ವಿಜಯ್ ಮಲ್ಯರನ್ನು ಬೈಯುತ್ತೀರಿ. ವಿಜಯ್ ಮಲ್ಯ ಓರ್ವ ಸ್ಮಾರ್ಟ್ ಉದ್ಯಮಿಯಾಗಿದ್ದು, ಕೆಲವು ಜಾಣರನ್ನು ತನ್ನ ಬಳಿ ಕೆಲಸಕ್ಕೆ ನೇಮಿಸಿಕೊಂಡು ಸರ್ಕಾರ, ರಾಜಕಾರಣಿ ಮತ್ತು ಬ್ಯಾಂಕ್ ಗ ವಿಶ್ವಾಸ ಪಡೆದುಕೊಂಡು ಸಾಲ ಮಾಡಿದ್ದರು. ವಿಜಯ್ ಮಲ್ಯರ ಉದ್ಯಮ ಕೌಶಲ್ಯತೆ, ವ್ಯವಹಾರದ ಜ್ಞಾನ, ಮಾರುಕಟ್ಟೆಯ ಯೋಜನೆಯನ್ನು ಕಲಿಯಬೇಕಿದೆ ಎಂದು ಹೇಳಿದ್ದರು.
ಇತ್ತ ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಲೇ, ಸಮ್ಮೇಳನದಲ್ಲಿ ನಾನು ವಿಜಯ್ ಮಲ್ಯರ ಹೆಸರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಾರದಿತ್ತು ಎಂದು ಜುವಾಲ್ ಒರಾಮ್ ಸ್ಪಷ್ಟನೆ ನೀಡಿದ್ದರು.