ಕೋಲ್ಕತ್ತಾ: ಜೂನ್ 07 ರಂದು ನಾಗ್ಪುರದಲ್ಲಿ ನಡೆದ ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ ಬಳಿಕ ಆರ್ ಎಸ್ಎಸ್ ಸೇರುವವರ ಸಂಖ್ಯೆ 4 ಹೆಚ್ಚಳವಾಗಿದೆ.
ಈ ಕುರಿತು ಆರ್ ಎಸ್ಎಸ್ ಮಾಹಿತಿ ನೀಡಿದ್ದು, ಆರ್ ಎಸ್ಎಸ್ ಸೇರಲು ಜೂನ್ 1 ರಿಂದ 6 ಅವಧಿಯಲ್ಲಿ ಸಂಸ್ಥೆಯ ವೆಬ್ ಸೈಟ್ನಿಂದ ಸರಾಸರಿ 378 ಅರ್ಜಿಗಳು ಸಲ್ಲಿಕೆಯಾಗುತ್ತಿತ್ತು, ಆದರೆ ಜೂನ್ 7 ರಂದು 1,779 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಬಂಗಾಳದ ಆರ್ ಎಸ್ಎಸ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.
ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸಹ ಭಾಗಿಯಾಗಿದಕ್ಕಾಗಿ ಕೃತಜ್ಞತೆ ತಿಳಿಸಿ ಆರ್ ಎಸ್ಎಸ್ ಪತ್ರ ಬರೆದಿದೆ. ಸೋಮವಾರ ಈ ಕುರಿತು ಪತ್ರ ಬರೆದಿರುವ ಸಂಘದ ಮನಮೋಹನ್ ವೈದ್ಯ ಅವರು ಪ್ರಣಬ್ ಅವರ `ಒಂದು ಭಾರತ’ ಮತ್ತು `ಒಂದು ಸಂಸ್ಕೃತಿ’ ಅಭಿಪ್ರಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಣಬ್ ಅವರಿಗೆ ಪತ್ರ ರವಾನಿಸುವ ಮುನ್ನ ವೈದ್ಯ ಅವರು ಬಂಗಾಳದ ಆರ್ ಎಸ್ಎಸ್ ಕಾರ್ಯಕರ್ತರನ್ನ ಕುರಿತು ಮಾತನಾಡಿ, ಪ್ರಣಬ್ ಅವರಿಗೆ ವಿರೋಧ ವ್ಯಕ್ತಪಡಿಸಿದ ಬಳಿಕ ದೇಶದ್ಯಾಂತ ಆರ್ ಎಸ್ಎಸ್ ಕಾರ್ಯಕ್ರಮ ಪ್ರಸಾರವಾಗಿದೆ ಎಂದು ಹೇಳಿದ್ದಾರೆ. ಪ್ರಮುಖವಾಗಿ ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್ ಪಕ್ಷದ ಹಲವು ಹಿರಿಯ ನಾಯಕರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರಣಬ್ ಅವರ ಪುತ್ರಿ ಕಾಂಗ್ರೆಸ್ ನಾಯಕಿ ಶರ್ಮಿಷ್ಠ ಮುಖರ್ಜಿ ಸಹ ತಮ್ಮ ವಿರೋಧ ತಿಳಿಸಿ ಟ್ವೀಟ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು.
ಸದ್ಯ ಆರ್ ಎಸ್ಎಸ್ ಪ್ರಣಬ್ ಅವರಿಗೆ ಬರೆದಿರುವ ಪತ್ರದ ಕುರಿತು ಪ್ರತಿಕ್ರಿಯೆ ನೀಡಲು ಶರ್ಮಿಷ್ಠ ಅವರು ನಿರಾಕರಿಸಿದ್ದಾರೆ. ಆರ್ ಎಸ್ಎಸ್ ಪ್ರಣಬ್ ಅವರಿಗೆ ಬರೆದಿರುವ ಪತ್ರದಲ್ಲಿ ಅವರನ್ನು ಪ್ರಣಬ್ಬಾಬು ಎಂದು ಸಂಬೋಧಿಸಲಾಗಿದೆ ಎನ್ನಲಾಗಿದ್ದು, ಕಾರ್ಯಕ್ರಮದಲ್ಲಿ ಪ್ರಣಬ್ ಅವರು ಭಾಗವಹಿಸುವ ಮೂಲಕ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ. ಅವರ ಭಾಷಣ ಎಲ್ಲರ ಮನಸ್ಸು ತಟ್ಟಿದೆ ಎಂದಿದ್ದಾರೆ. ಅಲ್ಲದೇ ಮೋಹನ್ ಭಾಗವತ್ ಹಾಗೂ ಮುಖರ್ಜಿ ಅವರ ದೃಷ್ಟಿಕೋನ ಒಂದೇ ರೀತಿ ಇದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಪತ್ರದ ಕೊನೆಯಲ್ಲಿ ಆರ್ ಎಸ್ಎಸ್ಗೆ ವ್ಯಕ್ತವಾಗುತ್ತಿರುವ ಜನ ಬೆಂಬಲದ ಕುರಿತು ಕೂಡ ಉಲ್ಲೇಖಿಸಿದ್ದಾರೆ.