ಬೆಂಗಳೂರು: ಕಾವೇರಿ ವಿಚಾರದಲ್ಲಿ ಕನ್ನಡಿಗರನ್ನ ಕೆಣಕಿರುವ ನಟ ರಜನಿಕಾಂತ್ ಭಾರೀ ದಂಡವನ್ನೇ ತೆರುವಂತಾಗಿದೆ. ರಜನಿ ನಟನೆಯ ಬಹುನಿರೀಕ್ಷಿತ ಕಾಳ ಚಿತ್ರ ಪ್ರದರ್ಶನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಷೇಧ ಹೇರಿದೆ.
ಜೂನ್ 7ಕ್ಕೆ ಕಾಳ ಸಿನಿಮಾ ರಿಲೀಸ್ ಆಗಲಿರುವ ಹಿನ್ನೆಲೆಯಲ್ಲಿ ಇವತ್ತು ಫಿಲ್ಮ್ ಚೇಂಬರ್ ತುರ್ತಾಗಿ ಪ್ರದರ್ಶನಕರು ಮತ್ತು ವಿತರಕರ ಸಭೆ ನಡೆಸಿತು.
ಸಭೆ ಬಳಿಕ ಪ್ರತಿಕ್ರಿಯಿಸಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದ್, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಳ ಸಿನಿಮಾ ಬಿಡುಗಡೆಯಾಗಲು ಬಿಡುವುದಿಲ್ಲ. ರಾಜ್ಯದ ಹಿತದೃಷ್ಟಿಯಿಂದ ವಿತರಕರಾದ ಸೌರಬ್ ಅವರೇ ವಿತರಣೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿಸಿದರು.
ರಜನಿ ಜೊತೆಗೆ ಕಮಲ್ ಹಾಸನ್ ಚಿತ್ರಗಳಿಗೂ ಮುಂದೆ ನಿಷೇಧ ಹೇರುತ್ತೇವೆ. ಆದರೆ ಉಳಿದ ನಾಯಕರ ಚಿತ್ರಗಳಿಗೆ ವಿರೋಧ ಇಲ್ಲ ಎಂದು ತಿಳಿಸಿದರು.
ಕಾಳ ಚಿತ್ರವು ತಮಿಳಿನ ಬಹು ನಿರೀಕ್ಷಿತ ಚಿತ್ರವಾಗಿದ್ದು, ಸ್ವತಃ ರಜನಿಕಾಂತ್ ರವರ ಅಳಿಯ ಧನುಷ್ರವರು ನಿರ್ಮಿಸಿದ್ದಾರೆ. ಕಬಾಲಿ ಚಿತ್ರದ ನಿರ್ದೇಶಕರಾದ ಪ.ರಂಜಿತ್ರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂತೋಷ್ ನಾರಾಯಣ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾನಾ ಪಾಟೇಕರ್, ಹುಮಾ ಕ್ವಿರೇಷಿ, ಈಶ್ವರಿ ರಾವ್ ಸೇರಿದಂತೆ ಬಹು ತಾರಾಗಣವನ್ನು ಹೊಂದಿದೆ.