ರಾಯಚೂರು: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸಾಕಷ್ಟು ಜನ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಟಿಕೆಟ್ ವಂಚಿತರಿದ್ದಾರೆ. ಆದರೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಿದ್ದಿಗೆ ಬಿದ್ದಿರುವ ಮಹಿಳಾ ಟಿಕೆಟ್ ಆಕಾಂಕ್ಷಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ತಮ್ಮದೇ ಆದ ಓಟ್ ಬ್ಯಾಂಕ್ ಹೊಂದಿರುವ ಈ ಮಹಿಳೆಯರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದಾರೆ.
ನಾರಿ ಮುನಿದರೆ ಮಾರಿ ಅನ್ನೋ ಹಾಗೇ ರಾಯಚೂರು ಜಿಲ್ಲೆಯ ದೇವದುರ್ಗ ಹಾಗೂ ಮಾನ್ವಿ ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತ ಮಹಿಳಾ ಅಭ್ಯರ್ಥಿಗಳೇ ಇಲ್ಲಿ ನಿರ್ಣಾಯಕರಾಗಿದ್ದಾರೆ. ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಡಾ.ಪ್ರೀತಿ ಮೇತ್ರಿ, ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಎಂ.ಈರಣ್ಣ ಸೊಸೆ. ತಮ್ಮ ಸೊಸೆಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಎಂ.ಈರಣ್ಣ ಎಷ್ಟೇ ಪ್ರಯತ್ನ ಮಾಡಿದರೂ ಟಿಕೆಟ್ ಸಿಗಲಿಲ್ಲ.
ಸತತ 2 ಬಾರಿ ಶಾಸಕರಾಗಿರುವ ಹಂಪಯ್ಯ ನಾಯಕ್ ಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಹೀಗಾಗಿ ನಾನು ಪಕ್ಷೇತರರಾಗಿ ಕಣಕ್ಕಿಳಿದಿದ್ದೇನೆ. ಕುರುಬ ಸಮಾಜದ ಬೆಂಬಲ ಜೊತೆಗೆ 2,38,598 ಮತದಾರರಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿರುವುದು ನನಗೆ ವರದಾನವಾಗಿದೆ. ಅಲ್ಲದೆ ಕಾಂಗ್ರೆಸ್ ಮತಗಳು ಹೊಡೆಯುವುದರಿಂದ ಕಾಂಗ್ರೆಸ್ಗೂ ಹೊಡೆತ ಬೀಳಲಿದೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಡಾ.ಪ್ರೀತಿ ಮೇತ್ರಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ದೇವದುರ್ಗ ಕ್ಷೇತ್ರದಲ್ಲಿ ನಿರಂತರ ಓಡಾಟದಲ್ಲಿರುವ ಕರೆಮ್ಮ ನಾಯಕ್ ಜೆಡಿಎಸ್ ಟಿಕೆಟ್ ವಂಚಿತರು. ಇವರು ಕಳೆದ ದೇವದುರ್ಗ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ 9156 ಮತಗಳನ್ನ ಪಡೆದು ಮೂರನೇ ಸ್ಥಾನ ಪಡೆದಿದ್ದರು. ಆದರೆ ಈಗ ತಮ್ಮದೇ ಆದ ಓಟ್ ಬ್ಯಾಂಕ್ ಹೊಂದಿರುವ ಕರೆಮ್ಮ ನಾಯಕ್ಗೆ ಜೆಡಿಎಸ್ ವರಿಷ್ಠರು ಕೊನೆ ಗಳಿಗೆಯಲ್ಲಿ ಟಿಕೆಟ್ ನೀಡದೆ ಬಿಜೆಪಿಯಿಂದ ಬಂದ ವೆಂಕಟೇಶ್ ಪೂಜಾರಿಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ ಕರೆಮ್ಮ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿರುವುದು ಕರೆಮ್ಮ ನಾಯಕ್ ಗೆ ಪ್ಲಸ್ ಪಾಯಿಂಟ್ ಆಗಬಹುದು. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೆಗೌಡ ಅವರು ಕರೆಮ್ಮ ನಾಯಕ್ ತಮ್ಮ ಉಮೇದುವಾರಿಕೆ ಹಿಂಪಡೆಯಲು ಮನವೊಲಿಸಲು ಜಿಲ್ಲಾ ಮುಖಂಡರಿಗೆ ಸೂಚಿಸಿದ್ದರು. ಆದರೆ ಕರೆಮ್ಮ ಪಕ್ಷ ಸಂಘಟನೆಗೆ ಬೆಲೆ ಸಿಕ್ಕಲ್ಲ ಅಂತ ಪಕ್ಷೇತರರಾಗಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷಿ ತಿಳಿಸಿದ್ದಾರೆ.
ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿಯ ಶಿವನಗೌಡ ನಾಯಕ್, ಕಾಂಗ್ರೆಸ್ ನ ರಾಜಶೇಕರ್ ನಾಯಕ್ ಗೂ ಕರೆಮ್ಮ ನಾಯಕ್ ಸವಾಲಾಗಿದ್ದಾರೆ. ಇನ್ನೂ ಮಾನ್ವಿ ಕ್ಷೇತ್ರದಲ್ಲಿ ಪ್ರೀತಿ ಮೇತ್ರಿ ಪಕ್ಷೇತರರಾದರೂ ಸಾಕಷ್ಟು ಜನ ಬೆಂಬಲ ಹೊಂದಿದ್ದಾರೆ.