ಬೆಂಗಳೂರು: ನನ್ನ ಮತ್ತು ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ(ಕೆಪಿಜೆಪಿ) ನಾಯಕರ ಮಧ್ಯೆ ಗೊಂದಲ ಇರುವುದು ನಿಜ ಎಂದು ರಿಯಲ್ ಸ್ಟಾರ್ ಉಪೇಂದ್ರ ಒಪ್ಪಿಕೊಂಡಿದ್ದಾರೆ.
ಮಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಆರಂಭದಲ್ಲೇ ನಮಗೆ ನಾಯಕರು ಬೇಡ, ಕಾರ್ಮಿಕರು ಬೇಕು ಎಂದು ಹೇಳಿದ್ದೆ. ಹೀಗಾಗಿ ಬಹಳಷ್ಟು ಜನ ಅಭ್ಯರ್ಥಿಗಳು ಕ್ಷೇತ್ರದ ಬಗ್ಗೆ ತಿಳಿದುಕೊಂಡು ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ ಈ ಮಧ್ಯೆ ಪಕ್ಷದ ಹಿರಿಯು ಕೆಲ ಮಂದಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೀಡಿದರು. ಈ ವಿಚಾರ ನನಗೆ ಸರಿ ಕಾಣಲಿಲ್ಲ ಎಂದು ತಿಳಿಸಿದರು.
ಕೆಲವರಿಗೆ ಲೆಟರ್ ನೀಡಿದ್ದ ವಿಚಾರ ತಿಳಿದು ಸಂದರ್ಶನಕ್ಕೆ ಹಾಜರಾದ ವ್ಯಕ್ತಿಗಳು ಇದು ಏನು ಎಂದು ನನ್ನಲ್ಲಿ ಪ್ರಶ್ನಿಸಿದರು. ಅಷ್ಟೇ ಅಲ್ಲದೇ ಮುಂದೆ ಚುನಾವಣೆ ವೇಳೆ ಸಂದರ್ಶನದಲ್ಲಿ ಆಯ್ಕೆಯಾಗದ ವ್ಯಕ್ತಿಗಳನ್ನು ಹೊರತು ಪಡಿಸಿ ಬೇರೆಯವರಿಗೆ ಬಿ ಫಾರಂ ನೀಡಿದರೆ ಏನು ಎನ್ನುವ ಪ್ರಶ್ನೆಯೂ ಮೂಡಿತು. ಎಲ್ಲರಿಗೂ ನಾನು ಉತ್ತರ ನೀಡಬೇಕಾದ ವ್ಯಕ್ತಿಯಾದ ಕಾರಣ ಈ ನಿರ್ಧಾರಕ್ಕೆ ಆಕ್ಷೇಪಿಸಿದ್ದಕ್ಕೆ ನಮ್ಮ ನಡುವೆ ಸಣ್ಣ ಗೊಂದಲ ಇದೆ ಎಂದು ವಿವರಿಸಿದರು.
ಈಗ ಭಿನ್ನಮತ ಸ್ಫೋಟಗೊಂಡಿದ್ದು ಹೇಗೆ ಎನ್ನುವ ಪ್ರಶ್ನೆಗೆ, ಆರಂಭದ ಎರಡು ತಿಂಗಳು ಚೆನ್ನಾಗಿಯೇ ನಡೆದಿತ್ತು. ಆದರೆ ನಂತರದ ದಿನಗಳಲ್ಲಿ ಈ ಬೆಳವಣಿಗೆ ಆಯ್ತು. ಮುಂದೆ ಇದೆಲ್ಲ ಸರಿ ಹೋಗಬಹುದು ಎನ್ನುವ ಆಶಾವಾದವನ್ನು ನಾನು ಇಟ್ಟುಕೊಂಡಿದ್ದೆ. ಆದರೆ ನಮ್ಮ ನಾಯಕರು ದಿಢೀರ್ ಆಗಿ ಮಾಧ್ಯಮಗಳ ಮುಂದೆ ಹೋಗಿದ್ದರಿಂದ ವಿಚಾರ ಇವತ್ತು ಬಹಿರಂಗವಾಗಿದೆ ಎಂದು ತಿಳಿಸಿದರು.
ಪಕ್ಷದಲ್ಲಿನ ಗೊಂದಲದ ವಿಚಾರದ ಬಗ್ಗೆ ಭಾನುವಾರ ಸಭೆ ನಡೆದಿತ್ತು. ಈ ವೇಳೆ ನಮ್ಮ ಪರವಾಗಿ ನಾಲ್ಕು ಮಂದಿ ಭಾಗವಹಿಸಿದ್ದರು. ಇಲ್ಲೂ ಸರಿಯಾದ ನಿರ್ಧಾರಕ್ಕೆ ಬರಲಾಗಲಿಲ್ಲ. ಹೀಗಾಗಿ ಮಂಗಳವಾರ ಮತ್ತೊಂದು ಸಭೆ ನಡೆಸಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೀವು ಬಿಜೆಪಿ ಸೇರುತ್ತೀರಾ ಎಂದು ಕೇಳಿದ್ದಕ್ಕೆ, ಅಯ್ಯಯ್ಯೋ ಅಂಥಹದ್ದು ಏನಿಲ್ಲ ಎಂದು ಹೇಳಿ ಕೈ ಮುಗಿದು ಸುದ್ದಿಗೋಷ್ಠಿಯಿಂದ ಎದ್ದು ಹೋದರು. ಇದನ್ನೂ ಓದಿ:ಪಕ್ಷ ಕಟ್ಟಿದ ಉಪ್ಪಿಗೆ ಕೆಪಿಜೆಪಿಯಿಂದ ಗೇಟ್ಪಾಸ್?