ಮುಂಬೈ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಆಲದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಯುವಕರು ಸಾವನ್ನಪ್ಪಿರುವ ಘಟನೆ ಇಂದು ಬೆಳಗಿನ ಜಾವ ಸುಮಾರು 3ಗಂಟೆಗೆ ಪಲ್ಘಢ ಎಂಬಲ್ಲಿ ನಡೆದಿದೆ. ಅಪಘಾತ ನಡೆದ ಸ್ಥಳ ಪಲಘಡ್ ಮುಂಬೈ ನಗರದಿಂದ 110 ಕಿ.ಮೀ. ದೂರದಲ್ಲಿದೆ.
ತಾರಾಪುರ ನಿವಾಸಿ ನಿಲೇಶ್ ತಾಮೋರ್ (25), ವಾದರೈ ನಿವಾಸಿ ಕಿರಣ್ ಪಗ್ದಾರೆ (30), ಸತ್ಪತಿ ನಿವಾಸಿ ದಿಪೇಶ್ ಪಗ್ದಾರೆ (24), ಪಲಘಡ್ ನಿವಾಸಿ ವಿರಾಜ್ ವೆಟಲ್ (25) ಮತ್ತು ಖಂಪಡಾ ನಿವಾಸಿ ಸಂತೋಷ್ (37) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ಮೃತ ಗೆಳಯರೆಲ್ಲಾ ವಾದ್ರೈ ನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಿಂದುರುಗುತ್ತಿದ್ದರು.
ವಿರಾಜ್ ವೆಟಲ್ ಅವರ ಸಿಲ್ವರ್ ವೊಕ್ಸ್ ವ್ಯಾಗನ್ ಕಾರಿನಲ್ಲಿ ಐವರು ಗೆಳೆಯರು ಮದುವೆಗೆ ತೆರಳಿದ್ದರು. ಪಲ್ಘಟ್ ಕಾರ್ ತಿರುವು ತೆಗದುಕೊಳ್ಳುವಾಗ ವಿರಾಜ್ನ ನಿಯಂತ್ರಣ ತಪ್ಪಿದ ಕಾರ್ ರಸ್ತೆ ಬದಿಯಲ್ಲಿದ್ದ ಆಲದ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ.
ಕಾರ್ ಆಲದ ಮರಕ್ಕೆ ಡಿಕ್ಕಿ ಹೊಡೆದಿದ್ದನ್ನು ನಾನು ನೋಡಿದೆ. ಕಾರಿನಲ್ಲಿ ಸಿಲುಕಿದ್ದವರನ್ನು ಹೊರ ಎಳೆಯಲು ಸಾಕಷ್ಟು ಪ್ರಯತ್ನ ಮಾಡಿದ್ರೂ ಸಾಧ್ಯವಾಗಲಿಲ್ಲ. ವೇಗವಾಗಿ ಬಂದ ಕಾರ್ ಮರಕ್ಕೆ ಡಿಕ್ಕಿ ಆಗಿದ್ದರಿಂದ ಅಪ್ಪಚ್ಚಿಯಾಗಿತ್ತು. ಕಾರಿನಲ್ಲಿದ್ದ ಎಲ್ಲ ಯುವಕರು ಇಕ್ಕಾಟದ ಸ್ಥಳದಲ್ಲಿ ಸಿಲುಕಿಕೊಂಡಿದ್ದರು ಎಂದು ಅಪಘಾತ ನಡೆದ ಸ್ಥಳದ ಪಕ್ಕದಲ್ಲಿಯೇ ವಾಸವಾಗಿದ್ದ ದಾನೀಶ್ ಖಾನ್ ಹೇಳುತ್ತಾರೆ.
ಅಪಘಾತದ ವಿಷಯ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಸತ್ಪತಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಐವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದರು. ಆಸ್ಪತ್ರೆಯಲ್ಲಿ ಐವರು ಮೃತಪಟ್ಟಿದ್ದಾರೆಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮರಣೋತ್ತರ ಶವ ಪರೀಕ್ಷೆ ನಡೆಸಿದ್ದು, ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಸತ್ಪತಿ ಠಾಣೆಯ ಪೊಲೀಸ್ ಇನ್ಸ್ ಪೆಕ್ಸರ್ ಮನ್ ಸಿನ್ಹಾ ಪಾಟೀಲ್ ತಿಳಿಸಿದ್ದಾರೆ.