ರಾಮನಗರ: ವಾಹನವನ್ನು ಹಿಂದಿಕ್ಕುವ ಭರದಲ್ಲಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ ಡಿವೈಡರ್ಗೆ ಡಿಕ್ಕಿಯಾಗಿ ಪಕ್ಕದ ರಸ್ತೆಯ ಅಂಗಡಿ ಬದಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಮನಗರ ಹೊರವಲಯದ ವಡೇರಹಳ್ಳಿ ಸಮೀಪ ನಡೆದಿದೆ.
ವಡೇರಹಳ್ಳಿ ಗ್ರಾಮದ ಕೃಷ್ಣಪ್ಪ ಮೃತ ದುರ್ದೈವಿ. ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೊರಟಿದ್ದ ಖಾಸಗಿ ಬಸ್ ಉದಯರಂಗ ವಡೇರಹಳ್ಳಿ ಸಮೀಪ ಗೂಡ್ಸ್ ಟೆಂಪೋ ಹಿಂದಿಕ್ಕಲು ಯತ್ನಿಸಿದೆ.
ಆದ್ರೆ ಟೆಂಪೋಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿದ ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಪಕ್ಕದ ರಸ್ತೆಗೆ ನುಗ್ಗಿದ ಬಸ್ ಅಂಗಡಿ ಬದಿ ನಿಂತಿದ್ದ ಕೃಷ್ಣಪ್ಪಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೃಷ್ಣಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ದೊಣ್ಣೆಯಿಂದ ಬಸ್ ನ ಕಿಟಕಿ ಹಾಗೂ ಗ್ಲಾಸ್ ಗಳನ್ನ ಪುಡಿಪುಡಿ ಮಾಡಿದ್ದಾರೆ. ಅಲ್ಲದೇ ಕಲ್ಲು ತೂರಾಟ ಕೂಡ ನಡೆಸಿದ್ದಾರೆ. ಬಳಿಕ ರಾಮನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಪಘಾತ ಸ್ಥಳವನ್ನು ಪರಿಶೀಲಿಸಿದ್ದಾರೆ. ನಂತರ ಕಿಲೋಮೀಟರ್ ದೂರ ಉಂಟಾಗಿದ್ದ ಟ್ರಾಫಿಕ್ ಜಾಮ್ ನ್ನು ತೆರವು ಗೊಳಿಸಿದ್ದಾರೆ.