ಬೆಂಗಳೂರು: ಉಪೇಂದ್ರ ಅವರು ಪಕ್ಷ ಸ್ಥಾಪನೆಯ ದಿನವೇ ಪ್ರಧಾನಿ ಮೋದಿಯವರನ್ನ ಅವಹೇಳನ ಮಾಡಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಹೇಳಿದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಉಪ್ಪಿ ಇಂದು ಉತ್ತರ ನೀಡಿದ್ದಾರೆ.
ಬಿಜೆಪಿ ವಿರುದ್ಧ ಕರ್ನಾಟಕದ ಕಾಂಗ್ರೆಸ್ ಉಪೇಂದ್ರ ಅವರ ಚಿತ್ರದ ಹಾಡನ್ನು ಬಳಸಿ ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಿದೆ ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿತ್ತು. ಈ ಸುದ್ದಿಯ ಲಿಂಕ್ ಹಾಕಿ ನಟ ಉಪೇಂದ್ರ ಶೋಭಾ ಕರಂದ್ಲಾಜೆ ಅವರಿಗೆ ಗಮನವಿಟ್ಟು ನೋಡಿ ಎಂದು ಟ್ವೀಟ್ ಮಾಡಿದ್ದಾರೆ.
ಉಪ್ಪಿ ನಟಿಸಿದ್ದ `ಉಪೇಂದ್ರ’ ಸಿನಿಮಾದ ಎಂಟಿವಿ ಸುಬ್ಬಲಕ್ಷ್ಮಿ ಗೆ ಬರಿ ಓಳು ಎಂಬ ಹಾಡು ಸೂಪರ್ ಹಿಟ್ ಆಗಿತ್ತು. ಆದರೆ ಸೋಮವಾರ ಉಪೇಂದ್ರ ಅವರು ತಮ್ಮ ಪಕ್ಷವನ್ನು ಪ್ರಕಟಿಸುತ್ತಿದ್ದಂತೆ `ಬರಿ ಓಳು’ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕರಂದ್ಲಾಜೆ ಆರೋಪ ಏನು?
ಉಪೇಂದ್ರ ಅವರು ಪಕ್ಷ ಸ್ಥಾಪನೆಯ ದಿನವೇ ಪ್ರಧಾನಿ ಮೋದಿಯವರನ್ನ ಅವಹೇಳನ ಮಾಡಿದ್ದು, ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದರು.
ಚಿತ್ರರಂಗದಲ್ಲಿ ಉಪೇಂದ್ರ ಅವರು ನಟರಾಗಿ ಯಶಸ್ವಿಯಾಗಿದ್ದಾರೆ. ಆದರೆ ರಾಜಕೀಯವಾಗಿ ಮೊದಲ ದಿನವೇ ಎಡವಿದ್ದಾರೆ. ಉಪೇಂದ್ರ ಅವರ `ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ ಉದಯದ ಬೆನ್ನಲ್ಲೇ ಉಪೇಂದ್ರ ಚಿತ್ರದ ಹಾಡು ಬಳಸಿ ಮೋದಿ ಬಗ್ಗೆ ಸಿದ್ದಪಡಿಸಿದ ವಿಡಿಯೋ ವೈರಲ್ ಆಗಿದೆ ಇದನ್ನು ಬಿಜೆಪಿ ಒಪ್ಪಲ್ಲ, ಇದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪಕ್ಷ ಕಟ್ಟಲು ರಾಜಕಾರಣ ಮಾಡಲು ಅವಕಾಶ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಕಾನೂನಾತ್ಮಕ ಹೋರಾಟಕ್ಕೂ ಸಿದ್ಧವಾಗಬೇಕಾಗುತ್ತೆ. ಹೊಸ ಪಕ್ಷ ಕಟ್ಟಿದ ಮೊದಲ ದಿನವೇ ಉಪೇಂದ್ರ ಎಡವಿರುವುದು ವಿಪರ್ಯಾಸಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದ್ದರು.
Kind attention Ms shoba karandlaje https://t.co/MjHQkyhPpq
— Upendra (@nimmaupendra) November 2, 2017