ಬೆಂಗಳೂರು: ಕೊನೆಗೂ ಸಂಪುಟ ವಿಸ್ತರಣೆಯ ಭಾಗ್ಯ ಕೂಡಿ ಬಂದಿದ್ದು, ಮುಂದಿನ ವಾರವೇ ಸಿಎಂ ಕ್ಯಾಬಿನೆಟ್ ವಿಸ್ತರಣೆ ಮಾಡುವ ಸಾಧ್ಯತೆಯಿದೆ.
ಆಗಸ್ಟ್ 21 ರಂದು ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದ್ದು, ಹೆಚ್ ವೈ ಮೇಟಿ, ಮಹಾದೇವಪ್ರಸಾದ್, ಪರಮೇಶ್ವರ್ರಿಂದ ತೆರವಾಗಿರುವ ಸ್ಥಾನಗಳ ಭರ್ತಿಗೆ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ನೀಡಿದೆ.
ಎಚ್.ಎಂ ರೇವಣ್ಣ, ಆರ್.ಬಿ ತಿಮ್ಮಾಪುರ ಹಾಗೂ ಷಡಕ್ಷರಿ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಹಿಂದುಳಿದ ವರ್ಗ ಕೋಟಾದಡಿ ಹೆಚ್.ಎಂ. ರೇವಣ್ಣ, ಎಸ್ಸಿ ಲೆಫ್ಟ್ ಕೋಟಾದಡಿ ಆರ್.ಬಿ. ತಿಮ್ಮಾಪುರ್, ಲಿಂಗಾಯತ ಕೋಟಾದಡಿ ಷಡಕ್ಷರಿ ಅವರಿಗೆ ಸ್ಥಾನ ಸಿಗಲಿದೆ ಎಂದು ಸಿಎಂ ಆಪ್ತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಹೆಚ್ಎಂ ರೇವಣ್ಣ ಅವರಿಗೆ ಅರಣ್ಯ ಖಾತೆ, ಆರ್ಬಿ ತಿಮ್ಮಾಪುರ ಅವರಿಗೆ ಅಬಕಾರಿ ಖಾತೆ, ಕೆ ಷಡಕ್ಷರಿ ಅವರಿಗೆ ಸಹಕಾರ ಖಾತೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಕನ್ನಡ ಉಸ್ತುವಾರಿ ಹಾಗೂ ಅರಣ್ಯ ಸಚಿವರಾಗಿರುವ ರಾಮನಾಥ ರೈ ಅವರಿಗೆ ಗೃಹ ಖಾತೆ ಸಿಗುವ ಸಾಧ್ಯತೆಯಿದೆ.
ತಮ್ಮ ಆಪ್ತರಾಗಿರುವ ಸಿಎಂ ಇಬ್ರಾಹಿಂ ಅವರನ್ನು ಪರಿಷತ್ಗೆ ನಾಮ ನಿರ್ದೇಶನ ಮಾಡಲು ಸಿಎಂ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.