ಅಹ್ಮದಾಬಾದ್: ಸಂಘಟಿತ ಬೌಲಿಂಗ್ ಹಾಗೂ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 4 ವಿಕೆಟ್ಗಳಿಂದ ಗೆಲವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 19.2 ಓವರ್ನಲ್ಲಿ ಆಲೌಟ್ ಆಗಿ 155 ರನ್ ಗಳಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಗುಜರಾತ್ 25 ಎಸೆತಗಳಿರುವಾಗಲೇ 6 ವಿಕೆಟ್ ನಷ್ಟಕ್ಕೆ 158 ರನ್ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ.

ಚೇಸಿಂಗ್ ಆರಂಭಿಸಿದ ಗುಜರಾತ್ ಟೈಟನ್ಸ್ ಪರ ಶುಭ್ಮನ್ ಗಿಲ್ ಉತ್ತಮ ಆರಂಭವನ್ನೇ ನೀಡಿದರು. 18 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸ್ ಬಾರಿಸಿ 43 ರನ್ ಗಳಿಸಿದರು. ವಿಕೆಟ್ ಕಳೆದುಕೊಂಡರೂ ಹುಮ್ಮಸ್ಸು ಕಳೆದುಕೊಳ್ಳದೇ ಗುಜರಾತ್ ಬಾಯ್ಸ್ ಏಳು-ಬೀಳಿನ ಆಟವಾಡಿ ಭರ್ಜರಿ ಜಯ ಸಾಧಿಸಿದರು. ಜೋಶ್ ಬಟ್ಲರ್ 19 ಎಸೆತಗಳಲ್ಲಿ 39 ರನ್, ವಾಷಿಂಗ್ಟನ್ ಸುಂದರ್ 12 ಎಸೆತಗಳಲ್ಲಿ 12 ರನ್, ಜೇಸನ್ ಹೋಲ್ಡರ್ 10 ಎಸೆತಗಳಲ್ಲಿ 12 ರನ್, ರಾಹುಲ್ ತೆವಾಟಿಯಾ 17 ಎಸೆತಗಳಲ್ಲಿ 27 ರನ್ ಬಾರಿಸಿದರು.
ಆರ್ಸಿಬಿ ಪರ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ 3 ವಿಕೆಟ್, ರೊಮಾ ರಿಯೋ ಶೆಫರ್ಡ್ 2 ವಿಕೆಟ್, ಸುಯೇಶ್ ಶರ್ಮಾ 1 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆರ್ಸಿಬಿ ಆಟಗಾರರು ಜಿಟಿ ಬೌಲಿಂಗ್ಗೆ ಬೆಂಡಾದರು. 2.4 ಓವರ್ನಲ್ಲಿ 34 ರನ್ ಬಾರಿಸಿ ಮುಂದೆ ಸಾಗುತ್ತಿದ್ದ ಆರ್ಸಿಬಿ ಮೊದಲ ವಿಕೆಟ್ ಕಳೆದುಕೊಂಡು ಜಾಕೋಬ್ ಬೆಥೆಲ್ ಪೆವಿಲಿಯನ್ಗೆ ಮರಳಿದರು. ಬಳಿಕ ಕ್ರೀಸ್ಗೆ ಬಂದ ದೇವದತ್ ಪಡಿಕ್ಕಲ್ ಉತ್ತಮ ಪ್ರದರ್ಶನ ನೀಡಿ ತಂಡವನ್ನು ಮುನ್ನಡೆಸಿದರು. 3.2 ಓವರ್ನಲ್ಲಿ ರಬಾಡ ಬೌಲಿಂಗ್ಗೆ ಬ್ಯಾಟ್ ಬೀಸಿದ ಕೊಹ್ಲಿ ರಶೀದ್ ಖಾನ್ಗೆ ಕ್ಯಾಚ್ ನೀಡಿದರು.

ವಿವಾದಕ್ಕೆ ಕಾರಣವಾದ ಹೋಲ್ಡರ್ ಕ್ಯಾಚ್:
ಆರ್ಸಿಬಿ 7.3 ಓವರ್ಗಳಲ್ಲಿ 79 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದ್ರೆ 8ನೇ ಓವರ್ನಲ್ಲಿ ಟೈಟಾನ್ಸ್ ಬೌಲರ್ ಅರ್ಶದ್ ಖಾನ್ ಎಸೆದ 4ನೇ ಎಸೆತವನ್ನು ಆರ್ಸಿಬಿ ನಾಯಕ ರಜತ್ ಪಾಟಿದಾರ್ ಸಿಕ್ಸರ್ ಸಿಡಿಸಲು ಯತ್ನಿಸಿದ್ರು. ಈ ವೇಳೆ ಬೌಂಡರಿ ಲೈನ್ ಬಳಿಯಿದ್ದ ಜೇಸನ್ ಹೋಲ್ಡರ್ ಡೈ ಹೊಡೆದು ಕ್ಯಾಚ್ ಹಿಡಿದರು. ಕ್ಯಾಚ್ ಹಿಡಿದ 2-3 ಸೆಕೆಂಡುಗಳಲ್ಲೇ ಚೆಂಡನ್ನು ನೆಲಕ್ಕೆ ತಾಕಿಸಿದ್ರು, ಇದು ಸ್ಪಷ್ಟವಾಗಿ ಗೋಚರಿಸಿತ್ತು. ಏನಾಯ್ತು ಅಂತ ಪಾಟಿದಾರ್ ತಿಳಿಯೋದ್ರೊಳಗೆ 3ನೇ ಅಂಪೈರ್ ಔಟ್ ತೀರ್ಪು ನೀಡಿದ್ದರು. ಅಲ್ಲಿಂದ ಆರ್ಸಿಬಿ ವಿಕೆಟ್ಗಳು ತರಗೆಲೆಗಳಂತೆ ಉದುರಿಹೋದವು.

ವಿರಾಟ್ ಕೊಹ್ಲಿ 13 ಎಸೆತಗಳಲ್ಲಿ 24 ರನ್, ದೇವದತ್ ಪಡಿಕ್ಕಲ್ 24 ಎಸೆತಗಳಲ್ಲಿ 40 ರನ್, ರಜತ್ ಪಾಟಿದಾರ್ 15 ಎಸೆತಗಳಲ್ಲಿ 19 ರನ್, ರೊಮಾರಿಯೋ ಶೆಫರ್ಡ್ 15 ಎಸೆತಗಳಲ್ಲಿ 17 ರನ್, ವೆಂಕಟೇಶ್ ಅಯ್ಯರ್ 15 ಎಸೆಗಳಲ್ಲಿ 12 ರನ್ ಹಾಗೂ ಭುವನೇಶ್ವರ್ ಕುಮಾರ್ 15 ಎಸೆತಗಳಲ್ಲಿ 15 ರನ್ ಗಳಿಸಿದರು. ಗುಜರಾತ್ ಪರ ಬೌಲಿಂಗ್ ಮಾಡಿದ ಅರ್ಶದ್ ಖಾನ್ 3 ವಿಕೆಟ್ ಕಿತ್ತರು. ಜೇಶನ್ ಹೋಲ್ಡರ್, ರಶೀದ್ ಖಾನ್ ತಲಾ 2 ವಿಕೆಟ್ ಹಾಗೂ ಮೊಹಮ್ಮದ್ ಸಿರಾಜ್, ರಬಾಡ ತಲಾ ಒಂದೊಂದು ವಿಕೆಟ್ ಪಡೆದರು.

