ಶಿವಮೊಗ್ಗ: ಭದ್ರಾವತಿಯ (Bhadravathi) ವಿಐಎಸ್ಎಲ್ನಲ್ಲಿ (VISL) ಕಬ್ಬಿಣದ ಬಿಲ್ಲೆಟ್ ಬಿದ್ದು ಸಾವನ್ನಪ್ಪಿದ ಕಾರ್ಮಿಕ ವಿನೋದ್ ಕುಮಾರ್ ಕುಟುಂಬಕ್ಕೆ 8 ಲಕ್ಷ ರೂ. ಪರಿಹಾರ ವಿತರಣೆಗೆ ಕಾರ್ಖಾನೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೇ ಮೃತರ ಪತ್ನಿಗೆ ಖಾಯಂ ಉದ್ಯೋಗ ಭರವಸೆ ನೀಡಿದ್ದು, ಈ ಸಂಬಂಧ ಸಮ್ಮತಿ ಪತ್ರವನ್ನು ಸಹ ಅಧಿಕಾರಿಗಳು ನೀಡಿದ್ದಾರೆ.
ಮೃತ ವಿನೋದ್ ಅವರ ಪತ್ನಿ ಚೈತ್ರಾ ಅವರಿಗೆ ಖಾಯಂ ಉದ್ಯೋಗ ಪತ್ರವನ್ನು ಅಧಿಕಾರಿಗಳು ವಿತರಿಸಿದ್ದಾರೆ. 15 ದಿನದಲ್ಲಿ ಈ ಸಂಬಂಧ ಅಧಿಕೃತ ಆದೇಶ ನೀಡುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಿನೋದ್ ಅಂತ್ಯಸಂಸ್ಕಾರಕ್ಕೂ ಮುನ್ನವೇ ಕೆಲಸ ನೀಡುವ ಭರವಸೆ ಪತ್ರವನ್ನು ಅಧಿಕಾರಿಗಳು ಕುಟುಂಬಸ್ಥರಿಗೆ ವಿತರಿಸಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ‘ಪಹಲ್ಗಾಮ್’ ಮಾದರಿಯ ದಾಳಿ – ಕಲ್ಮಾ ಪಠಿಸದ ಇಬ್ಬರು ಹಿಂದೂಗಳಿಗೆ ಚಾಕು ಇರಿದ ದುಷ್ಕರ್ಮಿ
ಏ.27 ರಂದು ವಿಐಎಸ್ಎಲ್ನಲ್ಲಿ ಕ್ರೇನ್ ಕಟ್ ಆಗಿ ಕಾರ್ಮಿಕ ವಿನೋದ್ ಅವರ ಕಾಲಿನ ಮೇಲೆ ಕಬ್ಬಿಣದ ಬಿಲ್ಲೆಟ್ ಬಿದ್ದಿತ್ತು. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರು ಸಾವನ್ನಪ್ಪಿದ್ದರು. ನೌಕರನಾಗಿ ಕಳೆದ 15 ವರ್ಷಗಳಿಂದ ಅವರು ಅಲ್ಲಿ ಕೆಲಸ ಮಾಡುತ್ತಿದ್ದರು. ವಿಐಎಸ್ಎಲ್ ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: ಮತ್ತೊಂದು `ಮಹಾʼ ಲೈಂಗಿಕ ದೌರ್ಜನ್ಯ ಪ್ರಕರಣ – 350 ಅಶ್ಲೀಲ ವಿಡಿಯೋ ಪತ್ತೆ, ಕಾಮುಕ ಅಂದರ್

