ಸಾಗರ ತಾಲೂಕಿನ ಅಂಬಾರಗೋಡ್ಲು, ಕಳಸವಳ್ಳಿ ಕಡವು ಮಾರ್ಗದಲ್ಲಿ ನಮ್ಮನ್ನು ಪುಷ್ಪಕ ವಿಮಾನದಂತೆ ಹೊತ್ತು ಸಾಗುತ್ತಿದ್ದ ಲಾಂಚ್ಗಳು ಸ್ಥಭ್ಧವಾಗಿ ಒಂದು ವರ್ಷ ಸಮೀಪಿಸುತ್ತಿದೆ. ಈ ಲಾಂಚ್ಗೂ ಅದರ ಕೆಲಸಗಾರರಿಗೂ ಅಲ್ಲಿನ ಸ್ಥಳೀಯರು, ಬರುವ ಪ್ರವಾಸಿಗರಿಗೂ ಅವಿನಾಭಾವ ಸಂಬಂಧ. ಈಗ ಅವು ನಿಂತು ಅದರ ಕೆಲಸಗಾರರು ಬೇರೆ ಕೆಲಸಗಳಲ್ಲಿ ತೊಡಗಿದ್ದಾರೆ. ಲಾಂಚ್ ಮೇಲೆ ನಿತ್ಯ ಪ್ರಯಾಣಿಸುತ್ತಿದ್ದ ಸಾವಿರಾರು ಜನ ಹೊಸ ಸೇತುವೆ ಮೇಲೆ ಸಾಗುವಾಗ ಸಣ್ಣ ಕುಡಿನೋಟ ಬೀರಿ ಸಾಗುತ್ತಿದ್ದಾರೆ. ಇನ್ನೆಲ್ಲೋ ನೂರಕ್ಕೆ ಒಂದಿಬ್ಬರು ಅದರ ಬಳಿ ಬಂದು ಫೋಟೋ ಹಿಡಿದು, ವಿವಿಧ ಭಂಗಿಯ ಪೋಸ್ ಕೊಟ್ಟು ಸೋಶಿಯಲ್ ಮೀಡಿಯಾ ಪೋಸ್ಟ್ಗೆ ಏರಿಸುತ್ತಿದ್ದಾರೆ. ಹೀಗೆ ಸ್ಥಭ್ದವಾಗಿ ನಿಂತ ಲಾಂಚ್ನ ಇತಿಹಾಸ, ಅದರ ಕೆಲಸಗಾರರ ಈಗಿನ ಪರಿಸ್ಥಿತಿ ಹಾಗೂ ಅವುಗಳ ಮುಂದಿನ ಗತಿ ಏನು ಎಂಬ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಒಟ್ಟು 4 ಲಾಂಚ್ಗಳ ಪೈಕಿ 1 ಲಾಂಚ್ ಸೇತುವೆ ನಿರ್ಮಾಣ ಕಂಪನಿಗೆ ಹಸ್ತಾಂತರ ಮಾಡಲಾಗಿದೆ. ಆದರೆ ಸೇತುವೆ ಲೋಕಾರ್ಪಣೆ ನಂತರ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಉಳಿದ ಮೂರು ಲಾಂಚ್ ಸೇವೆಯನ್ನು 2025ರ ಜುಲೈ 15ರಿಂದ ಸ್ಥಗಿತಗೊಳಿಸಿದೆ. 1969ರಿಂದ ನಡೆಯುತ್ತಿದ್ದ ಲಾಂಚ್ ಪ್ರಯಾಣ, ದ್ವೀಪವಾಸಿಗಳ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಸೇತುವೆಯಿಂದಾಗಿ 55 ವರ್ಷಗಳ ಇತಿಹಾಸವಿರುವ ಲಾಂಚ್ ಸಂಚಾರ ನಿಂತು, ಅದನ್ನೇ ನಂಬಿ ಬದುಕುತ್ತಿದ್ದ ನೌಕರರು ಮತ್ತು ಜೀಪ್ ಚಾಲಕರು ಅತಂತ್ರರಾಗಿದ್ದಾರೆ. ಇದನ್ನೂ ಓದಿ: ಶರಾವತಿ ಹಿನ್ನೀರಲ್ಲಿ ವಾಟರ್ ಏರೊಡ್ರೋಮ್ ಯೋಜನೆ – ಸಿಗಂದೂರು ಬಳಿ ಇಳಿಯಲಿದೆ ವಿಮಾನ
ಈ ಸೇತುವೆ ನಿರ್ಮಾಣದಿಂದ ಜನರ ಪ್ರಯಾಣದ ಸಮಯ ಉಳಿತಾಯವಾಗಿದ್ದರೂ, ಲಾಂಚ್ ಅವಲಂಬಿತರ ಬದುಕು ಕಷ್ಟಕ್ಕೆ ಸಿಲುಕಿದೆ. ಲಾಂಚ್ ಸೇವೆ ನಂಬಿದ್ದ 8 ಹೊರಗುತ್ತಿಗೆ ನೌಕರರು ಪ್ರವಾಸಿ ಜೀಪ್ ಚಾಲಕರು ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೇ ಲಾಂಚ್ಗಾಗಿ ಕಾಯುವಾಗ ನಿಲ್ಲುತ್ತಿದ್ದ ಪ್ರಯಾಣಿಕಲರನ್ನೇ ನಂಬಿ ತೆರೆದಿದ್ದ ಅಂಗಡಿಗಳು ಬಂದ್ ಆಗಿವೆ.
ಸ್ಥಳೀಯರು ಹೇಳೋದೇನು?
ಸಿಗಂದೂರು ಸೇತುವೆ ಉದ್ಘಾಟನೆಗೊಂಡು ಲಾಂಚ್ ಸೇವೆ ಸ್ಥಗಿತಗೊಂಡಿದೆ. ಸೇತುವೆ ಉದ್ಘಾಟನೆ ಸಂದರ್ಭದಲ್ಲಿ ಲಾಂಚ್ಗಳನ್ನು ಪ್ರವಾಸೋದ್ಯಮಕ್ಕೆ ಬಳಸಲಾಗುವುದು ಎಂದು ಸರ್ಕಾರ ಹೇಳಿತ್ತು. ಅಲ್ಲದೇ ಅದನ್ನು ತೇಲುವ ಹೋಟೆಲ್ ಮಾಡಲು ಯೋಜಿಸಿದ್ದೇವೆ ಎಂದು ಸ್ಥಳೀಯ ಶಾಸಕರು ಸಹ ಹೇಳಿದ್ದರು. ಆದರೆ ಈ ಪ್ಲ್ಯಾನ್ ಈಗ ಕೈಬಿಡಲಾಗಿದೆ ಎನ್ನಲಾಗುತ್ತಿದೆ.

ನಮಗೆ ಲಾಂಚ್ಗಿಂತ ಸೇತುವೆ ಉತ್ತಮ ಎಂದೇ ಎನ್ನಿಸಿದೆ. ಯಾರೋ ದೂರದಿಂದ ಪ್ರವಾಸಕ್ಕೆ ಬಂದವರಿಗೆ ಲಾಂಚ್ ಪ್ರಯಾಣ ಖುಷಿ ಕೊಡಬಹುದು. ಆದರೆ ನಮಗೆ ಲಾಂಚ್ ನಿಂತಿರೋದರ ಬಗ್ಗೆ ಬೇಜಾರೇನಿಲ್ಲ. ಪ್ರವಾಸೋದ್ಯಮಕ್ಕಾಗಿ ಬೇಕಾದರೆ ಸರ್ಕಾರ ಲಾಂಚ್ ಸೇವೆಯನ್ನು ಸರ್ಕಾರ ಮಾಡಲಿ.
ಶರಾವತಿ ಹಿನ್ನೀರಿನ ಪ್ರದೇಶವಾದ ಮುಪ್ಪಾನೆಯಲ್ಲಿ ಫ್ಲಾಟ್ ಫಾರಂ ಸಿದ್ದಪಡಿಸಿದರೆ ಒಂದು ಲಾಂಚ್ನ್ನು ಅಲ್ಲಿ ಬಿಡಬಹುದು. ಜನರ ಹಿತದೃಷ್ಟಿಯಿಂದ ಅಲ್ಲಿ ಇದರ ಅಗತ್ಯವಿದೆ. ಬರುವೆಯಲ್ಲೊಂದು ಫ್ಲಾಟ್ ಫಾರಂ ಮಾಡಿದರೆ ಅಲ್ಲೂ ಒಂದು ಲಾಂಚ್ ವ್ಯವಸ್ಥೆ ಮಾಡಬಹುದು. ಹಾಗೇನಾದರು ಆದರೆ ಬರುವೆಯ ಜನರು ಪಡಿತರಕ್ಕೆ 40 ಕಿ.ಮೀ. ಸುತ್ತುವರಿದು ಬರುವುದು ತಪ್ಪಲಿದೆ ಎಂಬುದು ಸ್ಥಳೀಯರ ಮಾತು.
ನೌಕರರು ಹೇಳೊದೇನು?
ಲಾಂಚ್ ಸ್ಥಗಿತದ ಬಳಿಕ ಮೂವರು ಗುತ್ತಿಗೆ ನೌಕರರನ್ನು ಕೆಲಸದಿಂದ ಕೈಬಿಸಲಾಗಿದೆ. ಇನ್ನಿಬ್ಬರನ್ನು ಲಾಂಚ್ಗಳನ್ನು ಸುಸ್ಥಿತಿಯಲ್ಲಿ ಇಡಲು ಅಲ್ಲೇ ಬಿಟ್ಟುಕೊಳ್ಳಲಾಗಿದೆ. ಇನ್ನು ಮೂವರನ್ನು ಮುಪ್ಪಾನೆ ಲಾಂಚ್ನಲ್ಲಿ ಕೆಲಸಕ್ಕೆ ನೇಮಿಸಲಾಗಿದೆ. ಕೆಲಸ ಕಳೆದುಕೊಂಡ ಮೂವರಲ್ಲಿ ಒಬ್ಬರು ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ಇನ್ನುಳಿದ ಇಬ್ಬರು ನಿರುದ್ಯೋಗಿಗಳಾಗಿದ್ದಾರೆ ಎಂದು ನೌಕರರು ಹೇಳಿಕೊಂಡಿದ್ದಾರೆ.
ಗಂಗೊಳ್ಳಿ-ಕುಂದಾಪುರಕ್ಕೆ ಸಾಗಾಟವೇ ಕಷ್ಟ
ಕುಂದಾಪುರಕ್ಕೆ ಲಾಂಚ್ ಬೇಡಿಕೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ-ಕುಂದಾಪುರ ನಡುವೆ ಹರಿಯುತ್ತಿರುವ ಪಂಚಗಂಗಾವಳಿ ನದಿಯ ಗಂಗೊಳ್ಳಿಯಿಂದ ಕೋಡಿ ಹಾಗೂ ಕುಂದಾಪುರಕ್ಕೆ ಪ್ರಯಾಣಿಸಲು ಸಿಗಂದೂರು ಲಾಂಚ್ ನೀಡಬೇಕು ಎಂಬ ಕೂಗು ಸಹ ಕೇಳಿ ಬಂದಿತ್ತು. ಆದರೆ ಭಾರಿ ಗಾತ್ರ ತೂಕ ಹೊಂದಿರುವ ಲಾಂಚ್ ಸ್ಥಳಾಂತರ ಸಾಧ್ಯವಿಲ್ಲ ಎನ್ನುತ್ತಾರೆ ಕರ್ನಾಟಕ ಜಲ ಸಾರಿಗೆ ಮಂಡಳಿಯ ಹಿರಿಯ ಅಧಿಕಾರಿಗಳು.
ಇಲ್ಲಿ ಲಾಂಚ್ ಸೇವೆ ಆರಂಭಿಸುವಾಗ ಎಲ್ಲಾ ಬಿಡಿಭಾಗಗಗಳನ್ನು ಇಲ್ಲಿಯೇ ತಂದು ನಿರ್ಮಿಸಲಾಗಿದೆ. ಅವುಗಳನ್ನು ಈಗ ಬೇರ್ಪಡಿಸಿ ಸಾಗಿಸುವುದು ಕಷ್ಟ ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.

ಕೆಲವೇ ದಿನಗಳಲ್ಲಿ ಸ್ಥಗಿತಗೊಳ್ಳಲಿದೆ ಹಸಿರುಮಕ್ಕಿ ಲಾಂಚ್
ಹಸಿರು ಮಕ್ಕಿ ಕಡವು ಮಾರ್ಗದಲ್ಲಿ ಈಗಾಗಲೇ ಒಂದು ಲಾಂಚ್ ಸೇವೆ ನೀಡುತ್ತಿದೆ. ಹಸಿರು ಮಕ್ಕಿ ಸೇತುವೆ ಕಾಮಗಾರಿಯೂ ಸಂಚಾರಕ್ಕೆ ಮುಕ್ತವಾದರೇ ಇಲ್ಲಿನ ಲಾಂಚ್ ಸಹ ನಿರುಪಯುಕ್ತವಾಗಲಿದೆ. ಅಲ್ಲದೇ ಮುಪ್ಪಾನೆ ಕಡವು ಮಾರ್ಗದಲ್ಲಿ ಈ ರೀತಿಯ ಬೃಹತ್ ಲಾಂಚ್ ನಿರ್ವಹಣೆ ಸಾಧ್ಯವಿಲ್ಲದೇ ಇರುವುದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಲಾಂಚ್ ತುಕ್ಕು ಹಿಡಿಯುವುದು ನಿಶ್ಚಿತವಾಗಿದೆ.
ಪ್ರವಾಸೋದ್ಯಮಕ್ಕೆ ಬಳಕೆಯಾಗಲಿ
ಕೆಲವು ತಿಂಗಳಿಂದ ಒಂದೇ ಪ್ರದೇಶದಲ್ಲಿ ಲಾಂಚ್ಗಳು ನಿಂತಿದ್ದರಿಂದ ಹಲವು ಭಾಗಗಳು ಕಂದುಬಣ್ಣಕ್ಕೆ ತಿರುಗಿದ್ದು, ತುಕ್ಕು ಹಿಡಿದಿವೆ. ಜನರ ಬಳಕೆಗೆ ಬಾರದೆ ಇದು ಹೀಗೆ ಮುಂದುವರಿದರೆ ಲಾಂಚ್ಗಳು ಸಂಪೂರ್ಣ ಹಾಳಾಗಲಿವೆ. ಇಲ್ಲಿಯ ಪ್ರವಾಸೋದ್ಯಮದ ದೃಷ್ಟಿಯಿಂದ ಲಾಂಚ್ ಸೇವೆಯನ್ನು ಪುನಾರಂಭ ಮಾಡಬೇಕು. ಸಮೀಪದಲ್ಲೇ ಇರುವ ಮುಪ್ಪಾನೆ ಪ್ರಕೃತಿ ಬಳಸಿಕೊಂಡು ಶರಾವತಿ ಜಲಾನಯನ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕು. ಈ ಮೂಲಕ ಈ ಭಾಗದ ನಿರುದ್ಯೋಗಿ ಯುವಜನರಿಗೆ ಸರ್ಕಾರ ನೆರವಾಗಬೇಕು ಎನ್ನುವುದು ಈ ಭಾಗದ ಜನರ ಒತ್ತಾಯವಾಗಿದೆ. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

