ಚಿಕ್ಕಬಳ್ಳಾಪುರ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Airport) ಲಿಮಿಟೆಡ್, ಇಂಡಿಗೋ ವಿಮಾನಯಾನ ಸಂಸ್ಥೆ, ʻಡಿಜಿ ಯಾತ್ರಾʼ ಪ್ರತಿಷ್ಠಾನ ಹಾಗೂ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆ ಸಹಭಾಗಿತ್ವದಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಟಿಕೆಟ್ ಬುಕ್ಕಿಂಗ್ನಿಂದ ಹಿಡಿದು ಪ್ರಯಾಣ ನಿರ್ವಹಣೆ ಹಾಗೂ ಬಯೋಮೆಟ್ರಿಕ್ ಆಧಾರಿತ ಸ್ಪರ್ಶರಹಿತ ಪ್ರಯಾಣದವರೆಗೆ ಸಮಗ್ರ ಅಂತಾರಾಷ್ಟ್ರೀಯ ಪ್ರಯಾಣ ಪ್ರಕ್ರಿಯೆಯನ್ನು ತಾಂತ್ರಿಕ ಪ್ರಯೋಗಗಳ ಮೂಲಕ ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆದ ಈ ವಿನೂತನ ಪ್ರಯೋಗವು ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಗಳ ಸಾಧ್ಯತೆ ಪರಿಶೀಲನೆಗಾಗಿ ಕೈಗೊಳ್ಳಲಾಗುತ್ತಿರುವ ಮಹತ್ವದ ಹಂತವಾಗಿದೆ. ಈ ವರ್ಷ ಆರಂಭದಲ್ಲಿ ಇಂಡಿಗೋ ಹಾಗೂ ಡಿಜಿ ಯಾತ್ರಾ ಪ್ರತಿಷ್ಠಾನವು ಬಯೋಮೆಟ್ರಿಕ್ ತಂತ್ರಜ್ಞಾನ ಆಧಾರಿತ ಸ್ವಯಂ-ಗುರುತು ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತಂದು, ಪ್ರಯಾಣಿಕರ ಮಾಹಿತಿಯನ್ನು ಅಪ್ಲಿಕೇಶನ್ಗಳ ನಡುವೆ ಸುಗಮವಾಗಿ ಹಂಚಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಿತ್ತು. ಈ ಯಶಸ್ಸಿನ ಮುಂದುವರಿದ ಹಂತವಾಗಿ, ಬಿಐಎಎಲ್ ಸಹಯೋಗದಲ್ಲಿ ಇದೇ ತಂತ್ರಜ್ಞಾನವನ್ನು ಅಂತಾರಾಷ್ಟ್ರೀಯ ಪ್ರಯಾಣಕ್ಕೂ ವಿಸ್ತರಿಸುವ ಸಾಧ್ಯತೆಯನ್ನು ಈ ಪ್ರಯೋಗ ತೋರಿಸಿವೆ. ಇದು ಸಂಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ವಿದೇಶಿ ಪ್ರಯಾಣಿಕರಿಗೂ ಡಿಜಿ ಯಾತ್ರಾ
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದೇಶೀಯ ಪ್ರಯಾಣಿಕರಿಗಾಗಿ ಡಿಜಿ ಯಾತ್ರಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದು, ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕೆ ಮಾನದಂಡಗಳನ್ನು ನಿರ್ಮಿಸಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯು ಹೆಚ್ಚುತ್ತಿರುವ ಹಿನ್ನೆಲೆ, ಇದೀಗ ಈ ಬಯೋಮೆಟ್ರಿಕ್ ಆಧಾರಿತ ಸ್ಪರ್ಶರಹಿತ ವ್ಯವಸ್ಥೆಯನ್ನ ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸುವತ್ತ ಮುಂದಾಗಿದೆ. ಇದರೊಂದಿಗೆ ಜಾಗತಿಕ ಮಟ್ಟದ ಈ ಯೋಜನೆಯಲ್ಲಿ ಭಾಗವಹಿಸುತ್ತಿರುವ ಭಾರತದ ಏಕೈಕ ವಿಮಾನ ನಿಲ್ದಾಣವಾಗಿ ಇದು ಗುರುತಿಸಿಕೊಂಡಿದೆ. ಈ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ನ ಮುಖ್ಯ ತಾಂತ್ರಿಕ ಅಧಿಕಾರಿ ಜಾರ್ಜ್ ಫಾಂಥೋಮ್ ಅವರು, ʻಬಯೋಮೆಟ್ರಿಕ್ ಆಧಾರಿತ ಪ್ರಯಾಣ ವ್ಯವಸ್ಥೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ಪ್ರಯಾಣಿಕರಿಗೆ ಸುಗಮ, ಸುರಕ್ಷಿತ ಹಾಗೂ ತಂತ್ರಜ್ಞಾನ ಆಧಾರಿತ ಅನುಭವ ಒದಗಿಸುವುದು ನಮ್ಮ ಗುರಿಯಾಗಿದೆ. ಈ ತಾಂತ್ರಿಕ ಪ್ರಯೋಗಗಳು ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯನ್ನು ವ್ಯಾಪಕವಾಗಿ ಜಾರಿಗೆ ತರಲು ನೆರವಾಗಲಿವೆʼ, ಎಂದು ಹೇಳಿದರು.
ಇಂಡಿಗೋ ಸಂಸ್ಥೆಯ ಡಿಜಿಟಲ್ ಮತ್ತು ಮಾಹಿತಿ ವಿಭಾಗದ ಮುಖ್ಯಸ್ಥ ನೀತನ್ ಚೋಪ್ರಾ ಅವರು ಮಾತನಾಡಿ, ʻತಂತ್ರಜ್ಞಾನ ಮತ್ತು ಪ್ರಯಾಣಿಕರ ಅನುಭವ ಒಟ್ಟುಗೂಡಿಸುವ ಮೂಲಕ ಭವಿಷ್ಯದ ವಿಮಾನ ಪ್ರಯಾಣವನ್ನ ರೂಪಿಸುವತ್ತ ನಾವು ಬದ್ಧರಾಗಿದ್ದೇವೆ. ಡಿಜಿಟಲ್ ಗುರುತು ಹಾಗೂ ಬಯೋಮೆಟ್ರಿಕ್ ತಂತ್ರಜ್ಞಾನ ಬಳಸಿ ಸ್ಪರ್ಶರಹಿತ ಪ್ರಯಾಣವನ್ನು ಸಾಧ್ಯವಾಗಿಸುವಲ್ಲಿ ಈ ಪ್ರಯೋಗಗಳು ಮಹತ್ವದ ಸಾಧನೆಯಾಗಿವೆʼ, ಎಂದು ಹೇಳಿದರು.

ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆಯ ಮಾಹಿತಿ ಮತ್ತು ದತ್ತಾಂಶ ವಿಭಾಗದ ಮುಖ್ಯಸ್ಥ ಕಿಮ್ ಮಕಾಲೇ ಅವರು ಮಾತನಾಡಿ, ʻಭಾರತವು ಡಿಜಿಟಲ್ ಹಾಗೂ ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯಲ್ಲಿ ಜಾಗತಿಕ ನಾಯಕತ್ವದತ್ತ ಸಾಗುತ್ತಿದೆ. ಇಂಡಿಗೋ, ಡಿಜಿ ಯಾತ್ರಾ ಮತ್ತು ಬೆಂಗಳೂರು ವಿಮಾನ ನಿಲ್ದಾಣದ ಸಹಭಾಗಿತ್ವವು ಜಾಗತಿಕ ಮಟ್ಟದಲ್ಲಿ ಅನುಸರಿಸಬಹುದಾದ ಮಾದರಿಯನ್ನು ನಿರ್ಮಿಸಿದೆʼ, ಎಂದು ಹೇಳಿದರು.
ಡಿಜಿ ಯಾತ್ರಾ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಖಡಕ್ಭಾವಿ ಅವರು ಮಾತನಾಡಿ, ʻಪ್ರಯಾಣಿಕರ ಗುರುತನ್ನು ಮುಂಚಿತವಾಗಿ ದೃಢೀಕರಿಸಿ, ಮುಖದ ಗುರುತಿನ ಮೂಲಕ ಸಂಪೂರ್ಣ ಪ್ರಯಾಣ ಪ್ರಕ್ರಿಯೆಯನ್ನ ನಿರ್ವಹಿಸುವ ವ್ಯವಸ್ಥೆಯನ್ನ ನಾವು ಯಶಸ್ವಿಯಾಗಿ ಪ್ರದರ್ಶಿಸಿದ್ದೇವೆ. ಇದು ಸುರಕ್ಷತೆ, ವೇಗ ಮತ್ತು ಸುಗಮತೆಯನ್ನು ಒಟ್ಟುಗೂಡಿಸುವ ಭವಿಷ್ಯದ ಪ್ರಯಾಣ ಮಾದರಿಯಾಗಿದೆʼ ಎಂದು ಹೇಳಿದರು.
ಈ ತಾಂತ್ರಿಕ ಪ್ರಯೋಗವು ಡಿಜಿಟಲ್ ಗುರುತು, ದತ್ತಾಂಶ ಸುರಕ್ಷತೆ ಹಾಗೂ ಜಾಗತಿಕ ಮಾನದಂಡಗಳಿಗೆ ಹೊಂದಿಕೊಳ್ಳುವ ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯನ್ನು ರೂಪಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಹೆಚ್ಚಿನ ವಿಮಾನ ನಿಲ್ದಾಣಗಳಿಗೆ ವಿಸ್ತರಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದೆ.

