ನವದೆಹಲಿ: ದೇಶಭಕ್ತಿ, ರಾಷ್ಟ್ರೀಯ ಸೇವಾ ಮೌಲ್ಯಗಳಿಗೆ ಸದಾ ಪ್ರೇರಣೆಯಾಗಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ (Subhas Chandra Bose) ಅವರ ಗೌರವಾರ್ಥ ಕರ್ನಾಟಕದ ಡಾ.ರೂಪಾ ಅಯ್ಯರ್(Roopa Iyer) ನಿರ್ಮಿಸಿ ನಿರ್ದೇಶಿಸಿದ ಆಜಾದ್ ಭಾರತ್ ಹಿಂದಿ ಚಲನಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ (Sansad Bhavan) ಸಾಕ್ಷಿಯಾಯಿತು.
ಸಂಸತ್ತಿನ ಗ್ರಂಥಾಲಯ ಕಟ್ಟಡದ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸುವ ಪ್ರತೀಕವಾಗಿ ಹಿಂದಿ ಭಾಷೆಯಲ್ಲಿ ನಿರ್ಮಿಸಿದ ಆಜಾದ್ ಭಾರತ್(Azad Bharath) ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಸಂಸತ್ ಸದಸ್ಯರು ಮತ್ತು ಸಚಿವಾಲಯಗಳ ಅನೇಕ ಅಧಿಕಾರಿಗಳು ಸಿನಿಮಾ ವೀಕ್ಷಿಸಿ ನೇತಾಜಿಗೆ ನಮನ ಸಲ್ಲಿಸಿದರು.

ಡಾ.ರೂಪಾ ಅಯ್ಯರ್ ನಿರ್ಮಿಸಿ, ನಿರ್ದೇಶಿಸಿದ ಈ ಚಲನ ಚಿತ್ರವನ್ನು ವಿಶೇಷವಾಗಿ ಲೋಕಸಭೆ, ರಾಜ್ಯಸಭೆ ಮತ್ತು ಸಚಿವಾಲಯ ಅಧಿಕಾರಿಗಳು ಮತ್ತವರ ಕುಟುಂಬ ಸದಸ್ಯರಿಗಾಗಿ ಆಯೋಜಿಸಲಾಗಿತ್ತು. ನೇತಾಜಿ ಮರಿಮೊಮ್ಮಗಳು ರಾಜ್ಯಶ್ರೀ ಚೌಧುರಿ, ಕೇಂದ್ರದ ಮಾಜಿ ಸಚಿವೆ ಮೀನಾಕ್ಷಿ ಲೇಖಿ ಅವರು ಚಲನಚಿತ್ರ ಪ್ರದರ್ಶನವನ್ನು ಕಣ್ತುಂಬಿಕೊಂಡರು.
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರು ನೇತಾಜಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಅಮೂಲ್ಯ ಕೊಡುಗೆ ಸ್ಮರಿಸಿದರಲ್ಲದೆ, 101 ವರ್ಷದ ಐಎನ್ಎ ಹಿರಿಯ ಹೋರಾಟಗಾರರನ್ನು ಸನ್ಮಾನಿಸಿದರು. ಇದನ್ನೂ ಓದಿ: `ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್ನಲ್ಲಿ ಕಂಗೊಳಿಸಿದ ರಣಬೀರ್

ಈ ಚಲನಚಿತ್ರ “ಸುಭಾಷ್ ಚಂದ್ರ ಬೋಸ್ ಅವರ ಅಪ್ಪಟ ದೇಶಭಕ್ತಿ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಯುವ ಪೀಳಿಗೆಯನ್ನು ಪ್ರೇರೇಪಿಸುವ ಗುರಿ ಹೊಂದಿದೆ. ರಾಷ್ಟ್ರೀಯ ಏಕತೆ, ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖವಾಗಿವೆ. ನಮ್ಮ ವೀರ ಹೋರಾಟಗಾರರ ತ್ಯಾಗ ಎಲ್ಲರಿಗೂ ಸ್ಫೂರ್ತಿಯಾಗಲೆಂದು ಆಶಿಸಿದರು.
ಆಜಾದ್ ಭಾರತ್ ಚಿತ್ರಪ್ರದರ್ಶನ ಸ್ವಾತಂತ್ರ್ಯ ಹೋರಾಟಗಾರರಿಗೆ ನಿರಂತರವಾಗಿ ಅರ್ಥಪೂರ್ಣ ಗೌರವ ಸಲ್ಲಿಸುವ ಪ್ರತೀಕವಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯ ಮಹಾನ್ ತ್ಯಾಗಗಳಿಗೆ ಸಲ್ಲಿಸಿದ ಹೃದಯಸ್ಪರ್ಶಿ ಗೌರವವಾಗಿದೆ ಎಂದರು. ರಾಜ್ಯಸಭಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ.ಕೆ.ಎಸ್.ಸೋಮಶೇಖರ್ ಸಹ ಈ ವೇಳೆ ಉಪಸ್ಥಿತರಿದ್ದರು.

