ಪ್ರಯಾಣಿಕರ ಸುಖಕರ ಪ್ರಯಾಣಕ್ಕಾಗಿ ರೈಲ್ವೆ ಇಲಾಖೆ ಸಾಕಷ್ಟು ಸುಲಭ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಇದೀಗ ತನ್ನ ಟಿಕೆಟ್ ವಿತರಣೆ ಮತ್ತು ಮರುಪಾವತಿ ನೀತಿಯಲ್ಲಿ ಪ್ರಮುಖ ಬದಲಾವಣೆ ತರುವ ನಿಟ್ಟಿನಲ್ಲಿ, ಭಾರತೀಯ ರೈಲ್ವೆ (Indian Railways) ಗಮನಾರ್ಹ ಬದಲಾವಣೆಗಳನ್ನು ಘೋಷಿಸಿದೆ. ಇನ್ನುಮುಂದೆ ರೈಲು ಹೊರಡುವ 8 ಗಂಟೆ ಮೊದಲು ಟಿಕೆಟ್ ರದ್ದುಗೊಳಿಸಿದ್ರೆ (Train Ticket) ಹಣ ರೀಫಂಡ್ ಆಗುವುದಿಲ್ಲ. ಹಾಗಿದ್ರೆ ಪರಿಷ್ಕೃತ ಟಿಕೆಟ್ ರದ್ದತಿ ನಿಯಮ ಏನು? ಹೊಸ ನಿಯಮದಲ್ಲಿ ಏನೇನು ಬದಲಾವಣೆ ಮಾಡಲಾಗಿದೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
8 ಗಂಟೆ ಮೊದಲು ಟಿಕೆಟ್ ರದ್ದು ಮಾಡಿದ್ರೆ ಇಲ್ಲ ಹಣ:
ಪರಿಷ್ಕೃತ ನಿಯಮಗಳ ಪ್ರಕಾರ, ನಿಗದಿತ ನಿರ್ಗಮನಕ್ಕೆ ಎಂಟು ಗಂಟೆಗಳ ಮೊದಲು ತಮ್ಮ ಕಾಯ್ದಿರಿಸಿದ ಟಿಕೆಟ್ಗಳನ್ನು ರದ್ದುಗೊಳಿಸುವ ಪ್ರಯಾಣಿಕರಿಗೆ ಇನ್ನು ಮುಂದೆ ಯಾವುದೇ ಮರುಪಾವತಿ ದೊರೆಯುವುದಿಲ್ಲ. ನಿರ್ಗಮನಕ್ಕೆ 24 ಗಂಟೆಗಳಿಂದ 8 ಗಂಟೆಗಳ ಮೊದಲು ಮಾಡಿದ ರದ್ದತಿಗೆ, ಪ್ರಯಾಣಿಕರು 50%ನಷ್ಟು ಮರುಪಾವತಿಗೆ ಅರ್ಹರಾಗಿರುತ್ತಾರೆ.
ಪ್ರಯಾಣಕ್ಕೆ 72 ಗಂಟೆಗಳಿಂದ 24 ಗಂಟೆಗಳ ಮೊದಲು ರದ್ದತಿ ಮಾಡಿದರೆ, 75%ನಷ್ಟು ಮರುಪಾವತಿಯನ್ನು ಒದಗಿಸಲಾಗುತ್ತದೆ. ಇದಕ್ಕೂ ಮೊದಲು, ಪ್ರಯಾಣಕ್ಕೆ 72 ಗಂಟೆಗಳ ಮೊದಲು ರದ್ದುಗೊಳಿಸಿದಾಗಲೂ ಪ್ರಯಾಣಿಕರು ಪೂರ್ಣ ಮರುಪಾವತಿಯನ್ನು ಪಡೆಯುತ್ತಿದ್ದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ನೆಟ್ವರ್ಕ್ ಅನ್ನು ಮೇಲ್ದರ್ಜೆಗೇರಿಸುವುದು ಮತ್ತು ಪ್ರಯಾಣಿಕರ ಸೇವೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ.
ಪರಿಷ್ಕೃತ ಟಿಕೆಟ್ ರದ್ದತಿ ನಿಯಮ:
ನಿರ್ಗಮನಕ್ಕೆ 72 ಗಂಟೆಗಳಿಗಿಂತ ಮೊದಲು ರದ್ದುಪಡಿಸಿದ ದೃಢೀಕೃತ ಟಿಕೆಟ್ಗಳಿಗೆ, ಪ್ರಯಾಣಿಕರಿಗೆ ಗರಿಷ್ಠ ಮರುಪಾವತಿ ದೊರೆಯುತ್ತದೆ ಮತ್ತು ಪ್ರತಿ ಪ್ರಯಾಣಿಕರಿಗೆ ಕನಿಷ್ಠ ಫ್ಲಾಟ್ ರದ್ದತಿ ಶುಲ್ಕವನ್ನು ಮಾತ್ರ ಕಡಿತಗೊಳಿಸಲಾಗುತ್ತದೆ.
ನಿರ್ಗಮನಕ್ಕೆ 72 ಗಂಟೆಗಳಿಂದ 24 ಗಂಟೆಗಳ ಮೊದಲು ದೃಢಪಡಿಸಿದ ಟಿಕೆಟ್ ಅನ್ನು ರದ್ದುಗೊಳಿಸಿದರೆ, ಪ್ರಯಾಣ ದರದ 25% ರಷ್ಟು ಪ್ರಮಾಣಿತ ಕಡಿತ ಅನ್ವಯಿಸುತ್ತದೆ.
ನಿಗದಿತ ನಿರ್ಗಮನಕ್ಕೆ 24 ಗಂಟೆಗಳಿಂದ 8 ಗಂಟೆಗಳ ಮೊದಲು ಮಾಡಲಾದ ರದ್ದತಿಗೆ, ಕನಿಷ್ಠ ಶುಲ್ಕಕ್ಕೆ ಒಳಪಟ್ಟು, ಪ್ರಯಾಣ ದರದ 50% ಅನ್ನು ಕಡಿತಗೊಳಿಸಲಾಗುತ್ತದೆ. ರೈಲು ಹೊರಡುವ 8 ಗಂಟೆಗಳಿಗಿಂತ ಕಡಿಮೆ ಸಮಯ ಮೊದಲು ದೃಢಪಡಿಸಿದ ಟಿಕೆಟ್ ಅನ್ನು ರದ್ದುಗೊಳಿಸಿದರೆ, ಯಾವುದೇ ಮರುಪಾವತಿಯನ್ನು ನೀಡಲಾಗುವುದಿಲ್ಲ.
ರೈಲ್ವೆ ಇಲಾಖೆ ಆಫ್ಲೈನ್ ಟಿಕೆಟ್ ಹೊಂದಿರುವವರಿಗೆ ರದ್ದತಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಪ್ರಯಾಣಿಕರು ಈಗ ಯಾವುದೇ ರೈಲ್ವೆ ನಿಲ್ದಾಣದಿಂದ ಟಿಕೆಟ್ಗಳನ್ನು ರದ್ದುಗೊಳಿಸಬಹುದು, ಮೂಲತಃ ಟಿಕೆಟ್ ಬುಕ್ ಮಾಡಿದ ನಿಲ್ದಾಣವನ್ನು ಲೆಕ್ಕಿಸದೆ. ಹೆಚ್ಚುವರಿಯಾಗಿ, ಪ್ರಯಾಣಿಕರು ಟಿಕೆಟ್ನಲ್ಲಿ ಉಲ್ಲೇಖಿಸಲಾದ ನಿರ್ಗಮನ ನಿಲ್ದಾಣದ ನಂತರ ಇರುವ ನಿಲ್ದಾಣದಿಂದ ರೈಲು ಹತ್ತಬಹುದು. ಮೊಬೈಲ್ ಅಪ್ಲಿಕೇಶನ್ ಈಗ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಯಿಂಟ್ ಅನ್ನು ಸುಲಭವಾಗಿ ನವೀಕರಿಸಲು ಆಯ್ಕೆಯನ್ನು ನೀಡುತ್ತದೆ.
ರೈಲ್ವೆಯು ನಿರ್ಗಮನದ ಮೊದಲು ನಿಗದಿಪಡಿಸಿದ ಕೋಚ್ ಅನ್ನು ಅಪ್ಗ್ರೇಡ್ ಮಾಡುವ ಆಯ್ಕೆಯನ್ನು ಪರಿಚಯಿಸಿದೆ. ನಿಗದಿತ ರೈಲು ನಿರ್ಗಮನಕ್ಕೆ 30 ನಿಮಿಷಗಳ ಮೊದಲು ಪ್ರಯಾಣಿಕರು ತಮ್ಮ ಕೋಚ್ ವರ್ಗವನ್ನು ನವೀಕರಿಸಲು ಅನುಮತಿಸಲಾಗುವುದು. ಥರ್ಡ್ ಎಸಿಯಂತಹ ಕೆಳ ದರ್ಜೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸೀಟುಗಳು ಲಭ್ಯವಿದ್ದರೆ ಫಸ್ಟ್ ಎಸಿಯಂತಹ ಉನ್ನತ ದರ್ಜೆಗೆ ಸ್ಥಳಾಂತರಗೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ರೈಲ್ವೆಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಈ ನವೀಕರಣವನ್ನು ಮಾಡಬಹುದು.

ದಲ್ಲಾಳಿಗಳ ಟಿಕೆಟ್ ಬುಕಿಂಗ್ಗೆ ಕಡಿವಾಣ:
ಟಿಕೆಟ್ ಮಾದರಿಗಳ ಮೌಲ್ಯಮಾಪನದ ಪ್ರಕಾರ, ರೈಲು ನಿರ್ಗಮನ ಸಮಯಕ್ಕೂ ಮೊದಲು ದಲ್ಲಾಳಿಗಳು ಹೆಚ್ಚು ಟಿಕೆಟ್ಗಳನ್ನು ಬುಕ್ ಮಾಡುತ್ತಾರೆ. ನಂತರ ಮಾರಾಟವಾಗದ ಟಿಕೆಟ್ಗಳನ್ನು ರದ್ದುಗೊಳಿಸುತ್ತಾರೆ. ಇದರಿಂದಾಗಿ ಗಮನಾರ್ಹ ಬುಕಿಂಗ್ ಮೊತ್ತದ ಹಣ ಮರಳಿ ಪಡೆಯುತ್ತಿದ್ದಾರೆ. ಸದ್ಯ ಟಿಕೆಟ್ ದರ ಮರು ಪಾವತಿ ನಿಯಮ ಪರಿಷ್ಕರಣೆಯಿಂದಾಗಿ ದಲ್ಲಾಳಿಗಳ ಟಿಕೆಟ್ ಬುಕಿಂಗ್ ಮೂಲಗುಂಪು ಮಾಡಲಾಗುತ್ತದೆ ಎಂದು ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ತತ್ಕಾಲ್ ಬುಕಿಂಗ್ಗೆ ಆಧಾರ್ ಆಧಾರಿತ OTP:
ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ಆಧಾರ್ ಆಧಾರಿತ OTP ಪರಿಶೀಲನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದು ದುರ್ಬಳಕೆಯನ್ನು ತಡೆಯುತ್ತದೆ.
ಆಂಟಿ-ಬಾಟ್ ವ್ಯವಸ್ಥೆ:
ಟಿಕೆಟಿಂಗ್ ಪ್ಲ್ಯಾಟ್ಫಾರ್ಮ್ನಲ್ಲಿ ಆಂಟಿ-ಬಾಟ್ ಸಿಸ್ಟಮ್ ಅಳವಡಿಸಲಾಗಿದ್ದು, ಸುಮಾರು 3 ಕೋಟಿ ಅನುಮಾನಾಸ್ಪದ ಮತ್ತು ನಿಷ್ಕ್ರಿಯ ಯೂಸರ್ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
5 ಹೊಸ ಡೆಕ್ಗಳು:
ಇನ್ನು ಸರಕು ಸಾಗಣೆ ಕ್ಷೇತ್ರದಲ್ಲೂ ಇಲಾಖೆ ಸುಧಾರಣೆ ತರುತ್ತಿದ್ದು, ಹೊಸ ಸಿಂಗಲ್ ಡೆಕ್ ಮತ್ತು ಡಬಲ್ ಡೆಕ್ ವ್ಯಾಗನ್ಗಳನ್ನು ಇಲಾಖೆ ಪರಿಚಯಿಸುತ್ತಿದೆ. ಉಪ್ಪು ಮತ್ತು ಆಟೋಮೊಬೈಲ್ಗಳ ಸಾಗಣೆಗೆ ಇದರಿಂದ ಅನುಕೂಲ ಆಗಲಿದೆ. ಈ ಬದಲಾವಣೆಗಳು ರೈಲ್ವೇ ನೆಟ್ವರ್ಕ್ ಅನ್ನು ಆಧುನಿಕಗೊಳಿಸುವುದರ ಜೊತೆಗೆ ಪ್ರಯಾಣಿಕರ ಸೇವೆಯನ್ನು ಮತ್ತಷ್ಟು ಸುಧಾರಿಸುವ ಗುರಿ ಹೊಂದಿವೆ.

