ರಾಮನಗರ: ಬಿಡದಿಯ ವಂಡರ್ ಲಾ ರೆಸಾರ್ಟ್ನಲ್ಲಿ(Wonderla Resort) ವಾಸ್ತವ್ಯ ಹೂಡಿದ್ದ ಒಡಿಶಾ (Odisha) ಕೈ ಶಾಸಕರನ್ನು ಆಪರೇಷನ್ ಮಾಡಲು ಬಿಜೆಪಿ (BJP) ಯತ್ನಿಸಿದ್ದು, ಶಾಸಕರ ಖರೀದಿಗೆ ಬಂದಿದ್ದ ಇಬ್ಬರು ಒಡಿಶಾ ವ್ಯಕ್ತಿಗಳು ಸ್ಥಳೀಯ ಕಾಂಗ್ರೆಸ್ ಮುಖಂಡರ ಕೈಗೆ ಸಿಕ್ಕಿಬಿದ್ದಾರೆ. ಶಾಸಕರಿಗೆ 5 ಕೋಟಿ ಆಫರ್ ನೀಡಿದ್ದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಆಪರೇಷನ್ ಕಮಲದ ಆತಂಕ ಹಿನ್ನೆಲೆಯಲ್ಲಿ ಮಾ.12 ರಂದು ಒಡಿಶಾದಿಂದ ರಾಮನಗರದ ಬಿಡದಿ ವಂಡರ್ ಲಾ ರೆಸಾರ್ಟ್ ಗೆ ಬಂದು ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಶಾಸಕರಿಗೆ (Congress MLA’s) ಆಪರೇಷನ್ ಯತ್ನ ನಡೆದಿದೆ. ಇಂದು ಬೆಳಿಗ್ಗೆ ಒಡಿಶಾದಿಂದ ಮೂವರು ವ್ಯಕ್ತಿಗಳು, ಸ್ಥಳೀಯ ಓರ್ವ ವ್ಯಕ್ತಿ ಜೊತೆ ಸೇರಿ ಶಾಸಕರ ಖರೀದಿಗೆ ಮುಂದಾಗಿದ್ದು ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಶನಿವಾರ ರಾತ್ರಿ ಹೋಟೆಲಿನಲ್ಲಿ ರೂಂ ಬುಕ್ಮಾಡಿದ್ದ ನಾಲ್ವರು ವ್ಯಕ್ತಿಗಳು ಬೆಳಿಗ್ಗೆ ಓರ್ವ ಶಾಸಕನ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಆತನ ಜೊತೆಗೆ ಪೋಟೋ ತೆಗೆದುಕೊಂಡು, ಕೈಯಲ್ಲಿ ಚೆಕ್ ಬುಕ್ ಹಿಡಿದು ಮಾತನಾಡ್ತಿದ್ದ ಬಗ್ಗೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಅನುಮಾನ ಬಂದು ಹಿಡಿದು ಪ್ರಶ್ನಿಸಿದ್ದಾರೆ.
ಈ ವೇಳೆ ಇಬ್ಬರು ಪರಾರಿಯಾಗಿದ್ದು ಇನ್ನಿಬ್ಬರು ಸಿಕ್ಕಿಬಿದ್ದಿದ್ದಾರೆ. ಬಿರೇಂದ್ರ ಪ್ರಸಾದ್, ಅಜಿತ್ ಕುಮಾರ್ ಸಾಹು ಎಂಬುವವರು ಸಿಕ್ಕಿಬಿದ್ದಿದ್ದು, ಸ್ಥಳಕ್ಕೆ ಬಿಡದಿ ಪೊಲೀಸರು ಆಗಮಿಸಿ, ಒಡಿಶಾ ವ್ಯಕ್ತಿಗಳ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಮಲತಾಯಿ ಧೋರಣೆ ಯಾಕೆ?- ಅಗತ್ಯ ಸಿಲಿಂಡರ್ ಪೂರೈಕೆ ಮಾಡಲಿ: ಕೇಂದ್ರದ ಕಡೆ ಬೊಟ್ಟ ಮಾಡಿದ ಸಿಎಂ

ಈ ಬಗ್ಗೆ ಒಡಿಶಾ ಕಾಂಗ್ರೆಸ್ ಎಂಪಿ ಸಪ್ತಗಿರಿ ಶಂಕರ್ ಉಲಾಖ ಮಾತನಾಡಿ, ಬಿಜೆಪಿಯವರು ಕಾಂಗ್ರೆಸ್ ಶಾಸಕರ ಖರೀದಿಗೆ ಯತ್ನಿಸಿದ್ದಾರೆ. ನಾಲ್ವರು ವ್ಯಕ್ತಿಗಳು ರೆಸಾರ್ಟ್ ಗೆ ಬಂದು ಶಾಸಕರ ಜೊತೆ ಮಾತನಾಡಲು ಯತ್ನಿಸಿದ್ದರು. ನಮ್ಮ ಶಾಸಕರಿಗೆ 5 ಕೋಟಿ ಹಣದ ಆಫರ್ ಮಾಡಿದ್ದಾರೆ. ಖಾಲಿ ಚೆಕ್ ತಂದು ಬಿಜೆಪಿಗೆ ಮತ ಹಾಕುವಂತೆ ಒತ್ತಡ ಹೇರಿದ್ದಾರೆ. ಒಡಿಶಾ ಸಿಎಂ ಮೋಹನ್ ಚರಣ್ ಆಪ್ತ ಇಲ್ಲಿಗೆ ಬಂದು ಶಾಸಕರ ಖರೀದಿಗೆ ಯತ್ನಿಸಿದ್ದಾನೆ. ಆದರೆ ನಮ್ಮ ಯಾವ ಶಾಸಕರು ಆಮಿಷಕ್ಕೆ ಒಳಗಾಗಿಲ್ಲ. ಆಮಿಷ ತೋರಲು ಬಂದ ವ್ಯಕ್ತಿಗಳನ್ನ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಿಡಿದು ಪೊಲೀಸರಿಗೆ ಕೊಟ್ಟಿದ್ದಾರೆ. ಅವರ ವಿರುದ್ಧ ನಾವು ಕೂಡಾ ಪೊಲೀಸರಿಗೆ ದೂರು ನೀಡಿದ್ದೇವೆ. ಬಿಜೆಪಿ ಸಂವಿಧಾನದ ವಿರುದ್ಧ ಅಧಿಕಾರ ಹಿಡಿಯಲು ಹೊರಟಿದೆ ಎಂದು ಕಿಡಿಕಾರಿದರು.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಮಾತನಾಡಿ, ನಮ್ಮ ಒಡಿಶಾ ಶಾಸಕರು ರೆಸಾರ್ಟ್ನಲ್ಲಿ ಇದ್ದರು. ಬಿಜೆಪಿಯವರು ಬಂದು ರೂಮ್ ಬುಕ್ ಮಾಡಿ ಉಳಿದುಕೊಂಡಿದ್ದಾರೆ. ಬ್ಯಾಟರಾಯನಪುರ ಸುರೇಶ್ ಎಂಬುವವನ ಮೂಲಕ ರೂಂ ಬುಕ್ ಮಾಡಿದ್ದಾರೆ. 5 ಕೋಟಿ ಆಫರ್ ಕೊಟ್ಟು ನಮ್ಮ ಶಾಸಕರ ಭೇಟಿ ಆಗಿದ್ದಾರೆ. ಆದರೆ ಅವರ ಕುದುರೆ ವ್ಯಾಪಾರಕ್ಕೆ ನಮ್ಮ ಶಾಸಕರು ಒಪ್ಪಿಲ್ಲ ಒಟ್ಟು ನಾಲ್ಕು ಜನರಿದ್ದರು. ಇಬ್ಬರನ್ನು ನಮ್ಮವರು ಹಿಡಿದಿದ್ದಾರೆ. ಬ್ಲ್ಯಾಂಕ್ ಚೆಕ್ ಸಮೇತ ನಮ್ಮವರು ಹಿಡಿದು ಪೊಲೀಸರಿಗೂ ದೂರು ಕೊಟ್ಟಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಆಪರೇಷನ್ ಕಮಲ ಆತಂಕದಿಂದ ರೆಸಾರ್ಟ್ನಲ್ಲಿದ್ದ ಎಲ್ಲಾ ಶಾಸಕರನ್ನು ಬೆಂಗಳೂರಿನ ಖರ್ಗೆ ಮನೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಪೊಲೀಸ್ ಎಸ್ಕಾರ್ಟ್ ಭದ್ರತೆಯಲ್ಲಿ ಬಸ್ ಮೂಲಕ 8 ಮಂದಿ ಶಾಸಕರು ಬೆಂಗಳೂರಿನ ಸದಾಶಿವನಗರದ ಖರ್ಗೆ ಮನೆಗೆ ಸ್ಥಳಾಂತರ ಮಾಡಲಾಗಿದೆ. ಇತ್ತ ರೆಸಾರ್ಟ್ಗೆ ಎಸ್ಪಿ ಶ್ರೀನಿವಾಸ್ ಗೌಡ ಭೇಟಿನೀಡಿ ಪೊಲೀಸರ ವಶದಲ್ಲಿರೋ ಇಬ್ಬರು ವ್ಯಕ್ತಿಗಳನ್ನ ವಿಚಾರಣೆ ನಡೆಸಿದ್ದಾರೆ.

