ಕಾರವಾರ: ಮಂಗಗಳನ್ನು ಓಡಿಸಲು ಹೋಗಿದ್ದ ಯುವಕನಿಗೆ ಏರ್ಗನ್ ಗುಂಡು ತಗಲಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಾಡಗೇರಿ ಗ್ರಾಮದಲ್ಲಿ ನಡೆದಿದೆ.
ಹಾಡಗೇರಿ ಗ್ರಾಮದ ಸುಬ್ರಹ್ಮಣ್ಯ ಮಂಜುನಾಥ ಮರಾಠಿ (19) ಸಾವುಕಂಡ ದುರ್ದೈವಿ. ಮಂಗಗಳನ್ನು ಓಡಿಸಲು ಕೈಯಲ್ಲಿ ಏರ್ಗನ್ ತೆಗೆದುಕೊಂಡು ತೋಟದ ಕಡೆಗೆ ಹೋಗಿದ್ದನು. ಈ ವೇಳೆ ಏರ್ಗನ್ನಿಂದ ಏಕಾಏಕಿ ಗುಂಡು ಸಿಡಿದು ನೇರವಾಗಿ ಎದೆಗೆ ತಗುಲಿದೆ. ಗುಂಡು ಎದೆಗೆ ತಗುಲಿದ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

