ಬೆಂಗಳೂರು: ವೆಬ್ ಕಾಸ್ಟಿಂಗ್ ಹಾಗೂ ಮುಖ ಚಹರೆ ಪತ್ತೆ ತಂತ್ರಜ್ಞಾನ ಬಳಸಿಕೊಂಡು ಅತ್ಯಂತ ಪಾರದರ್ಶಕವಾಗಿ ವಿವಿಧ ಪರೀಕ್ಷೆಗಳನ್ನು ನಡೆಸುತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಇಲ್ಲಿನ ಕಚೇರಿಗೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ನಿಯೋಗ ಬುಧವಾರ ಭೇಟಿ ನೀಡಿ ಸಮಗ್ರ ಪರೀಕ್ಷಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಿತು.
ಭಾರತ ಸರ್ಕಾರದ ಉಪ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳಾದ ರಮಣ್ ಕುಮಾರ್ ಮತ್ತು ಕೆ.ಮನೋಜ್ ಅವರ ನಿಯೋಗದ ಜೊತೆ ಚಿತ್ರದುರ್ಗ ಜಿಪಂ ಸಿಇಒ ಡಾ.ಆಕಾಶ್ ಅವರು ಕೂಡ ಹಾಜರಿದ್ದರು. ಇದನ್ನೂ ಓದಿ: ನೈಸ್ ಕಂಪನಿಗೆ ಟೌನ್ಶಿಪ್ ಮಾಡಲು ಅವಕಾಶ ಕೊಡಬಾರದು: ರಾಮೋಜಿಗೌಡ
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪರೀಕ್ಷಾ ಅಕ್ರಮಗಳಿಗೆ ಹೇಗೆ ಕಡಿವಾಣ ಹಾಕಲಾಗಿದೆ ಎಂಬುದರ ಬಗ್ಗೆ ನಿಯೋಗಕ್ಕೆ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ವೆಬ್ ಕಾಸ್ಟಿಂಗ್, ಅಭ್ಯರ್ಥಿಯು ಪರೀಕ್ಷಾ ಕೇಂದ್ರಕ್ಕೆ ಬಂದ ನಂತರ ನಡೆಸುವ ತಪಾಸಣೆ, ಮುಖ ಚಹರೆ ಪತ್ತೆ ಮೂಲಕ ಅಭ್ಯರ್ಥಿಯ ನೈಜತೆ ತಿಳಿಯುವುದು, ಹಾಜರಾತಿ, ಪರೀಕ್ಷೆ ಮುಗಿದ ತಕ್ಷಣ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಹಾಗೂ ಫಲಿತಾಂಶ ಪ್ರಕಟಣೆ- ಇಷ್ಟೂ ಹಂತಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕೇಂದ್ರದ ನಿಯೋಗವು ವಿವಿಧ ರಾಜ್ಯಗಳ ಪರೀಕ್ಷಾ ವ್ಯವಸ್ಥೆಯನ್ನು ಅಧ್ಯಯನ ಮಾಡುತ್ತಿದ್ದು, ಉತ್ತಮ ಕಾರ್ಯ ವಿಧಾನಗಳನ್ನು ರಾಷ್ಟ್ರ ಮಟ್ಟದಲ್ಲಿ ನೀತಿ ನಿಯಮ ರೂಪಿಸುವ ಸಂದರ್ಭದಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದ ಈ ಭೇಟಿ ಮಾಡಿದೆ ಎಂದು ಇಸ್ಲಾವುದ್ದೀನ್ ಗದ್ಯಾಳ ಅವರು ತಿಳಿಸಿದರು. ಇದನ್ನೂ ಓದಿ: ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗಣ ಬಾರ್ಕಿ ಜಾತಿಗಳನ್ನು STಗೆ ಸೇರಿಸಲು ಕ್ರಮ: ಬೋಸರಾಜು
ಪ್ರಾಧಿಕಾರ ಸದ್ಯ ಅಳವಡಿಸಿಕೊಂಡಿರುವ ಆಧುನಿಕ ಪರೀಕ್ಷಾ ವಿಧಾನಗಳ ಬಗ್ಗೆ ನಿಯೋಗವು ಮೆಚ್ಚುಗೆ ವ್ಯಕ್ತಪಡಿಸಿತು ಎಂದು ಅವರು ಹೇಳಿದ್ದಾರೆ.

