– ಫೈನಲ್ ಪಂದ್ಯಕ್ಕೂ 2 ದಿನಗಳ ಹಿಂದಷ್ಟೇ ಅಪಘಾತದಲ್ಲಿ ಮೃತಪಟ್ಟಿದ್ದ ಕಿಶನ್ ಬಾವ
ಮುಂಬೈ: ಬಾವನ ಸಾವಿನ ನೋವಿನಲ್ಲಿದ್ದರೂ ಇಶಾನ್ ಕಿಶನ್ (Ishan Kishan) ಟೀಂ ಇಂಡಿಯಾಗೆ ಭಾನುವಾರ ಟಿ20 ವಿಶ್ವಕಪ್ (T20 World Cup) ಗೆಲುವಿನ ಸಂಭ್ರಮ ನೀಡಿದ್ದಾರೆ.
ಟಿ20 ವಿಶ್ವಕಪ್ ಫೈನಲ್ಗೆ ಎರಡು ದಿನ ಬಾಕಿ ಇದ್ದಾಗ, ಕಿಶನ್ ಅವರ ಬಾವ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದರು. ಈ ಘಟನೆಯಿಂದಾಗಿ ಕಿಶನ್ ಅವರ ತಂದೆ ಪ್ರಣವ್ ಪಾಂಡೆ ಫೈನಲ್ಗೆ ಹಾಜರಾಗಲು ಅಹಮದಾಬಾದ್ಗೆ ಬರಲು ಸಾಧ್ಯವಾಗಲಿಲ್ಲ. ಕಿಶನ್ ಕೂಡ ದುಃಖದ ಸಂದರ್ಭದಲ್ಲಿ ತನ್ನ ಕುಟುಂಬದೊಂದಿಗೆ ಇರಲು ಬಯಸಿದ್ದರು. ಆದರೆ, ವಿಶ್ವಕಪ್ ಫೈನಲ್ ಪಂದ್ಯದ ದೊಡ್ಡ ಜವಾಬ್ದಾರಿ ಕಾರಣಕ್ಕೆ ಮನೆಗೆ ಹೋಗಲಿಲ್ಲ. ತಂಡಕ್ಕಾಗಿ ಆಡಲು ನಿರ್ಧರಿಸಿದರು. ಇದನ್ನೂ ಓದಿ: ಟಿ20 ವಿಶ್ವಕಪ್ ಗೆಲುವನ್ನು ಆ ಇಬ್ಬರು ವ್ಯಕ್ತಿಗಳಿಗೆ ಅರ್ಪಿಸಿದ ಗೌತಮ್ ಗಂಭೀರ್
ಕಿಶನ್ ಬಾವನನ್ನು ಕಳೆದುಕೊಂಡು ನಾವೆಲ್ಲರೂ ಆಘಾತಕ್ಕೆ ಒಳಗಾಗಿದ್ದೆವು. ಇಶಾನ್ ನಮ್ಮನ್ನು ಭೇಟಿ ಮಾಡಲು ಬಯಸಿದ್ದರು. ಆದರೆ, ಫೈನಲ್ ಪಂದ್ಯದ ಕಾರಣ ಅವರು ಹಿಂತಿರುಗಲು ಸಾಧ್ಯವಾಗಲಿಲ್ಲ. ಪುತ್ರ ಕೂಡ ದಿಗ್ಭ್ರಮೆಗೊಂಡಿದ್ದ ಎಂದು ಕಿಶನ್ ತಂದೆ ಪ್ರಣವ್ ಪಾಂಡೆ ಮಾತನಾಡಿದ್ದರು.
ಪಂದ್ಯಕ್ಕೂ ಮುನ್ನ ಭಾರತದ ಅಭ್ಯಾಸ ಅವಧಿಗಳಲ್ಲಿ ಕಿಶನ್ ಹೊಂದಿರುವ ಉತ್ಸಾಹಭರಿತ ವರ್ಚಸ್ಸು ಅವರಲ್ಲಿ ಇರಲಿಲ್ಲ. ಅವರ ಬ್ಯಾಟಿಂಗ್ ಅವಧಿಯು ಸಾಮಾನ್ಯವಾಗಿ ನಡೆಯುವಷ್ಟು ಹೆಚ್ಚು ಕಾಲ ನಡೆಯಲಿಲ್ಲ. ಭಾರತೀಯ ತಂಡದ ಹಲವಾರು ಆಟಗಾರರು ಕಿಶನ್ಗೆ ಧೈರ್ಯ ತುಂಬಿದ್ದರು.
ದುಃಖದ ನಡುವೆಯೂ ಭಾನುವಾರ ನಡೆದ ಟಿ20 ವಿಶ್ವಕಪ್ 2026 ರ ಫೈನಲ್ನಲ್ಲಿ ಕಿಶನ್ ಅದ್ಭುತ ಪ್ರದರ್ಶನ ನೀಡಿದರು. ಮೈದಾನದಲ್ಲಿ ನಿರ್ಭೀತಿಯಿಂದ ಆಟವಾಡಿದರು. ಕೇವಲ 25 ಎಸೆತಗಳಲ್ಲಿ 54 ರನ್ ಸಿಡಿಸಿದರು. ಅರ್ಧಶತಕ ಗಳಿಸಿದ ಬೆನ್ನಲ್ಲೇ ಆಕಾಶದ ಕಡೆಗೆ ನೋಡಿ ತಮ್ಮ ಬಾವನವರಿಗೆ ಗೌರವಾರ್ಥವಾಗಿ ವಂದಿಸಿದರು. ಇದನ್ನೂ ಓದಿ: ಇತಿಹಾಸ ಬರೆದ ಟೀಂ ಇಂಡಿಯಾ – ರಾಜ್ಯದೆಲ್ಲೆಡೆ ಕ್ರೀಡಾಭಿಮಾನಿಗಳ ಸಂಭ್ರಮ
ಕಿಶನ್ ಔಟ್ಫೀಲ್ಡ್ನಲ್ಲಿ ಎರಡು ಅದ್ಭುತ ಕ್ಯಾಚ್ಗಳೊಂದಿಗೆ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಇದರ ಪರಿಣಾಮವಾಗಿ ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳಾದ ರಾಚಿನ್ ರವೀಂದ್ರ ಮತ್ತು ಟಿಮ್ ಸೀಫರ್ಟ್ ಔಟ್ ಆದರು. ಒಂಬತ್ತು ಇನ್ನಿಂಗ್ಸ್ಗಳಲ್ಲಿ 317 ರನ್ಗಳೊಂದಿಗೆ ಕಿಶನ್ ಪಂದ್ಯಾವಳಿಯ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಸ್ಥಾನ ಪಡೆದರು.

