ಚೆನ್ನೈ: ಗುರುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026 ರ ಸೂಪರ್ ಎಂಟನೇ ಪಂದ್ಯದಲ್ಲಿ ಭಾರತ ಜಿಂಬಾಬ್ವೆ ತಂಡವನ್ನು 72 ರನ್ಗಳ ಬೃಹತ್ ಅಂತರದಿಂದ ಸೋಲಿಸಿತು. ಆ ಮೂಲಕ ತನ್ನ ಸೆಮಿ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೂಪರ್ 8ರ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 256 ರನ್ಗಳಿಸಿತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡವು 184/6 ಕ್ಕೆ ಸೀಮಿತವಾಯಿತು.
ಓಪನರ್ ಬ್ರಿಯಾನ್ ಬೆನೆಟ್ ಶತಕ ಸನಿಹದ ಏಕಾಂಗಿ ಹೋರಾಟ ವ್ಯರ್ಥವಾಯಿತು. 59 ಬಾಲ್ಗೆ 6 ಸಿಕ್ಸರ್ ಮತ್ತು 8 ಫೋರ್ಗಳೊಂದಿಗೆ 97 ರನ್ (ಔಟಾಗದೇ) ಸಿಡಿಸಿ ಮಿಂಚಿದರು. ಬೆನೆಟ್ಗೆ ಯಾರೊಬ್ಬ ಆಟಗಾರರೂ ಸಾಥ್ ನೀಡಲು ವಿಫಲರಾದರು. ಉಳಿದಂತೆ ತದಿವನಾಶೆ ಮರುಮಾನಿ 20, ಸಿಕಂದರ್ ರಾಝಾ 31, ಟೋನಿ ಮುನ್ಯೊಂಗಾ 11 ರನ್ ಗಳಿಸಿದರು. ಟೀಂ ಇಂಡಿಯಾ ಪರ ಅರ್ಶ್ದೀಪ್ ಸಿಂಗ್ 3 ವಿಕೆಟ್ ಕಬಳಿಸಿದರು. ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ಶಿವಂ ದುಬೆ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು, ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅರ್ಧಶತಕ ಬಾರಿಸಿದರು. ನಾಲ್ಕು ವಿಕೆಟ್ ನಷ್ಟಕ್ಕೆ 256 ರನ್ ಗಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಇದು ಟಿ20 ವಿಶ್ವಕಪ್ನಲ್ಲಿ ಭಾರತದ ಇದುವರೆಗಿನ ಅತ್ಯಧಿಕ ಮೊತ್ತವಾಗಿದೆ. ಟೂರ್ನಿಯ ಆರಂಭದಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದ ಅಭಿಷೇಕ್ ಆರಂಭಿಕ ವಿಕೆಟ್ಗೆ 30 ಎಸೆತಗಳಲ್ಲಿ 55 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 50 ರನ್ ಗಳಿಸಿ ಔಟಾಗದೆ ತಂಡವನ್ನು ಮುನ್ನಡೆಸಿದರು. ತಿಲಕ್ ವರ್ಮಾ 14 ಎಸೆತಗಳಲ್ಲಿ 44 ರನ್ ಗಳಿಸಿ ಔಟಾಗದೆ ತಂಡವನ್ನು ಮುನ್ನಡೆಸಿದರು. ಈ ಜೋಡಿ 31 ಎಸೆತಗಳಲ್ಲಿ 84 ರನ್ ಗಳಿಸಿ ಅಜೇಯ ಜೊತೆಯಾಟವಾಡಿತು.

