– ರಾಜ್ಯ ಸರ್ಕಾರಕ್ಕೆ ಹೊರೆಯಾದ ಗ್ಯಾರಂಟಿ
ಬೆಂಗಳೂರು: ಪಂಚ ಗ್ಯಾರಂಟಿಗಳ (Guaranatee Scheme) ಮೇಲೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಈಗ ಆರ್ಥಿಕವಾಗಿ ಪಂಕ್ಚರ್ ಹಂತಕ್ಕೆ ಬಂದು ನಿಂತಂತಿದೆ. ಈ ಮಧ್ಯೆ ಎಕ್ಸ್ಕ್ಲೂಸಿವ್ ಮಾಹಿತಿಯನ್ನ ಪಬ್ಲಿಕ್ ಟಿವಿ ಬಯಲಿಗೆಳೆದಿದೆ.
ಹೌದು. ಸತ್ತವರ ಖಾತೆಗೂ ಗೃಹಲಕ್ಷ್ಮಿ ಹಣ (Gruhalakshmi Scheme Money) ಹೋಗ್ತಿದೆ. ಅದನ್ನ ತಡೆಯಬೇಕು ಎಂದು ನಿನ್ನೆ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಹೆಚ್.ಎಂ ರೇವಣ್ಣ ಹೇಳಿದ್ದರು. ಈ ಬೆನ್ನಲ್ಲೇ ʻಪಬ್ಲಿಕ್ ಟಿವಿʼಯಲ್ಲಿ ಸ್ಫೋಟಕ ರಹಸ್ಯ ಬಯಲಾಗಿದೆ. ಮೃತಪಟ್ಟವರ ಬ್ಯಾಂಕ್ ಖಾತೆಗಳಿಗೆ (Bank Account) 79 ಕೋಟಿ ರೂ. ಗೃಹಲಕ್ಷ್ಮಿ ಹಣ ಪಾವತಿ ಆಗಿರೋದು ಬಯಲಾಗಿದೆ.
ಇನ್ನೂ 2.30 ಲಕ್ಷ ಫಲಾನುಭವಿಗಳು ಮರಣ ಹೊಂದಿದ್ದು, ಅವರ ಖಾತೆಗಳೂ ಕೂಡ ಬ್ಲಾಕ್ ಆಗಿದೆ. 79 ಕೋಟಿ ಹಣ ರಿಕವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದ್ದು, ಇದುವರೆಗೆ 2.30 ಕೋಟಿ ರಿಕವರಿ ಮಾಡಿಕೊಂಡಿದೆ.
ರಾಜ್ಯ ಸರ್ಕಾರಕ್ಕೆ ಹೊರೆಯಾದ ಗ್ಯಾರಂಟಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಈ ಹಿಂದೆ ಸ್ವಪಕ್ಷದ ಶಾಸಕರು, ಜನಪ್ರತಿನಿಧಿಗಳೇ ಗ್ಯಾರಂಟಿಗಳನ್ನ ಬಹಿರಂಗವಾಗಿ ವಿರೋಧಿಸಿ ಮಾತನಾಡಿದ್ದರು. ಗ್ಯಾರಂಟಿಗಳಿಂದ ಅಭಿವೃದ್ಧಿಗಳು ಆಗ್ತಿಲ್ಲ. ಅನುದಾನಕ್ಕೆ ಕೊಕ್ಕೆ ಬಿದ್ದಿದೆ, ಕ್ಷೇತ್ರದಲ್ಲಿ ಯಾವ ಕೆಲಸ ಆಗ್ತಿಲ್ಲ ಎಂದು ಓಪನ್ನಾಗಿ ಹೇಳಿಕೆ ಕೊಟ್ಟಿದ್ದರು. ಸರ್ಕಾರದ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದರು.
ಅಷ್ಟೇ ಯಾಕೆ ಮೊನ್ನೆ ಸುಪ್ರೀಂ ಕೋರ್ಟ್ ಕೂಡ ಈ ಗ್ಯಾರಂಟಿ, ಉಚಿತ ಯೋಜನೆಗಳ ವಿರುದ್ಧ ಅಸಮಾಧಾನ ಹೊರ ಹಾಕಿತ್ತು. ದೇಶದ ಅಭಿವೃದ್ಧಿ, ಆರ್ಥಿಕತೆಗೆ ಮಾರಕ ಎಂದು ಹೇಳಿತ್ತು. ಈ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರದ ಡಿಸಿಎಂ ಡಿಕೆ ಶಿವಕುಮಾರ್, `ಗ್ಯಾರೆಂಟಿ ಯೋಜನೆಗಳು ಸರ್ಕಾರಕ್ಕೆ ಬರ್ಡನ್’ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ವರ್ಷಕ್ಕೆ 52,000 ಕೋಟಿಗಿಂತ ಜಾಸ್ತಿ ಹಣ ಬೇಕು ಎಂದಿದ್ದಾರೆ. ಸಚಿವ ದಿನೇಶ್ ಗುಂಡೂರಾವ್, ಸರ್ಕಾರಕ್ಕೆ ಎಲ್ಲವೂ ಹೊರೆನೆ ಎಂದಿದ್ದಾರೆ. ಈ ಮೂಲಕ ಸರ್ಕಾರನೇ ಗ್ಯಾರಂಟಿಗಳು ಹೊರೆಯಾಗಿವೆ ಅನ್ನೋದನ್ನ ಸತ್ಯ ಒಪ್ಪಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯಕ್ಕೆ ಆರ್ಥಿಕ ಹೊರೆಯಾಗಿದೆ ಎಂಬುದನ್ನು ಸಿಎಂ,ಡಿಸಿಎಂ, ಸಚಿವರು ಆಡಿರುವ ಮಾತುಗಳು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದ್ದರೂ ಅವುಗಳನ್ನು ನಿಲ್ಲಿಸಲ್ಲ. ಮುಂದುವರಿಸುತ್ತೇವೆ ಎಂದಿದ್ದಾರೆ. ಇದಕ್ಕೆ ಇವತ್ತು ಗೃಹ ಸಚಿವ ಪರಮೇಶ್ವರ್, ಚುನಾವಣೆ ಸಮಯದಲ್ಲಿ ಡಿಕೆ ಶಿವಕುಮಾರ್ ಸೇರಿ ನಾವೆಲ್ಲರು ಸೇರಿಯೇ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದು. ಈಗ ಗ್ಯಾರಂಟಿ ಹೊರ ಆಗಿದೆ ಅಂತ ಡಿಕೆ ಶಿವಕುಮಾರ್ಗೆ ಅನ್ನಿಸಿರಬಹುದು ಎಂದಿದ್ದಾರೆ. ಗ್ಯಾರಂಟಿ ಪರಿಷ್ಕರಣೆ ಆಗುತ್ತಾ ಎಂಬ ಪ್ರಶ್ನೆಗೆ, ಅಧ್ಯಕ್ಷರಾಗಿ, ಡಿಸಿಎಂ ಆಗಿ ಅವರು ಏನ್ ಸೂಚನೆ ಕೊಡ್ತಾರೋ ಅದನ್ನ ಪರಿಗಣಿಸ್ತೀವಿ ಎಂದರು. ಗ್ಯಾರಂಟಿ ಯೋಜನೆಗಳು ಹೊರೆಯಲ್ಲ ಅಂತ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಗ್ಯಾರಂಟಿ ಹೊರೆ ಎಂದ ಸರ್ಕಾರಕ್ಕೆ ಬಿಜೆಪಿ ತರಾಟೆ
ಗ್ಯಾರಂಟಿ ಹೊರೆ ಎಂದ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ಮಾಡಿದ್ದಾರೆ. ಶಾಸಕ ಅಶ್ವಥ್ ನಾರಾಯಣ್, ಈಗ ಆ ಗ್ಯಾರಂಟಿಗಳ ಮೇಲೆಯೇ ಸರ್ಕಾರಕ್ಕೆ ನಂಬಿಕೆ ಇಲ್ಲ. ಗ್ಯಾರಂಟಿಗಳ ಬಗ್ಗೆ ಸರ್ಕಾರ ಗೊಂದಲ ಮೂಡಿಸಬಾರದು. ಗ್ಯಾರಂಟಿಗಳ ಬಗ್ಗೆ ಸರ್ಕಾರ ಸ್ಪಷ್ಟತೆ ಕೊಡಲಿ ಎಂದಿದ್ದಾರೆ. ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸರ್ಕಾರ ಹೃದಯದಿಂದ ಗ್ಯಾರಂಟಿಗಳನ್ನ ಕೊಡ್ತಿಲ್ಲ. ಮಧ್ಯೆ ಮಧ್ಯೆ ಕದೀತಿದ್ದಾರೆ. ಗೃಹಲಕ್ಷ್ಮಿಯಲ್ಲಿ 5,000 ಕೋಟಿ ನಾಪತ್ತೆ ಆಗಿದೆ. 2.84 ಲಕ್ಷ ಖಾಲಿ ಹುದ್ದೆ ಇದ್ದ ಮೇಲೆ, ಅಷ್ಟು ಜನಕ್ಕೆ ಯುವ ನಿಧಿ ಯಾಕೆ ಕೊಡ್ತಿಲ್ಲ ಎಂದು ಕಿಡಿಕಾರಿದ್ದಾರೆ. ಸರ್ಕಾರ ಜನ ಭಿಕ್ಷೆಗೆ ನಿಂತಿದ್ದಾರೆ ಅಂತ ಭಾವಿಸಿಕೊಂಡಿದ್ದಾರೆ. ಜನ ಉದ್ಯೋಗ ಕೇಳ್ತಿದ್ದಾರೆ. ಭಿಕ್ಷೆ ಕೇಳ್ತಿಲ್ಲ ಎಂದು ಸಿಟಿ ರವಿ ಸಿಟ್ಟು ಹೊರ ಹಾಕಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ, ಗ್ಯಾರಂಟಿಗಳ ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಅಧಿಕಾರಕ್ಕೆ ಬಂದ ನಂತರ ನಾಡಿನ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ಕಾಣುತ್ತಿಲ್ಲ. ಜನರಿಂದ ಸಂಗ್ರಹಿಸಿದ ತೆರಿಗೆ ಹಣ ಜನಪರ ಯೋಜನೆಗಳಿಗೆ ಬಳಕೆಯಾಗ್ತಿಲ್ಲ ಅದರ ಪ್ರತಿಫಲವೇ ಇಂದಿನ ಸ್ಥಿತಿ ಎಂದಿದ್ದಾರೆ.

