ನವದೆಹಲಿ: ಎಐ ಶೃಂಗಸಭೆಯಲ್ಲಿ ಪ್ರತಿಭಟನೆ ನಡೆಸಿದ ಯೂಥ್ ಕಾಂಗ್ರೆಸ್ ಸದಸ್ಯರ ಬಂಧನಕ್ಕೆ ರಾಷ್ಟ್ರೀಯ ಯೂಥ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಬಿ.ವಿ ಶ್ರೀನಿವಾಸ್ (BV Srinivas) ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಮಾಡುವುದರಲ್ಲಿ ತಪ್ಪು ಏನಿದೆ? ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಹಕ್ಕಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಎರಡು ಕಾನೂನುಗಳಿದೆ. ಸಂಸದ ತೇಜಸ್ವಿ ಸೂರ್ಯ ವಿಮಾನದ ಎಮರ್ಜೆನ್ಸಿ ಡೋರ್ ತೆಗೆದಾಗ, ಅನುಮತಿ ಇಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನೆಗೆ ಹೋದಾಗ ದೇಶದ ಮಾನ, ಮರ್ಯಾದೆ ಹರಾಜು ಆಗಲಿಲ್ಲ. ಇದಕ್ಕೆ ಯಾವುದೇ ದೂರು ದಾಖಲಾಗಿಲ್ಲ. ಯೂಥ್ ಕಾಂಗ್ರೆಸ್ ಸದಸ್ಯರು ಏನು ಮಾಡಿದ್ದಾರೆ? ಪ್ರತಿಭಟನೆ ಮಾಡಿದರೆ ದೇಶದ್ರೋಹಿ ಎಂದು ದೂರು ದಾಖಲಿಸಿದ್ದಾರೆ, ನರೇಂದ್ರ ಮೋದಿ ಅಂದರೆ ದೇಶ ಅಲ್ಲ, ಟೀಶರ್ಟ್ ಪ್ರಿಂಟ್ ಮಾಡಿದವರನ್ನು ಹುಡುಕುತ್ತಿರುವುದಾಗಿ ನ್ಯಾಯಲಯಕ್ಕೆ ಪೊಲೀಸರು ಹೇಳಿದ್ದಾರೆ, ಪುಲ್ವಾಮಾ ದಾಳಿ ಆದಾಗ, ಕೆಂಪು ಕೋಟೆ ಮೇಲೆ ಅಕ್ರಮ ಧ್ವಜ ಹಾರಿಸಿದವರನ್ನು ಬಂಧಿಸಿಲ್ಲ. ಈಗ ಟಿಶರ್ಟ್ ಪ್ರಿಂಟ್ ಹಾಕಿದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜಾಗತಿಕ AI ಶೃಂಗದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು
ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದೆ. ಹೋರಾಟ, ಜೈಲು ಎಲ್ಲವೂ ನಮ್ಮಗೆ ಹೊಸದಲ್ಲ. ಅಮೆರಿಕ-ಭಾರತ ವ್ಯಾಪಾರ ಒಪ್ಪಂದ ಮುಚ್ಚಿ ಹಾಕಲು ಈ ಡ್ರಾಮಾ ಮಾಡುತ್ತಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಒಪ್ಪಂದ ರದ್ದು ಮಾಡಬೇಕು, ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

