– ಜಾಮೀನು ಅರ್ಜಿ ತುರ್ತು ವಿಚಾರಣೆ ನಡೆಸಲು ಕೋರ್ಟ್ ನಕಾರ
ಬೆಂಗಳೂರು: ಶಾಸಕ ಡಾ.ಚಂದ್ರು ಲಮಾಣಿ (Chandru Lamani) ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರೋದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಕಮಿಷನ್ ವಿರುದ್ಧ ಹೋರಾಟ ನಡೆಸಿ ಕಾಂಗ್ರೆಸ್ ವಿರುದ್ಧ ಕೆಂಡ ಉಗುಳುತ್ತಿದ್ದ ಬಿಜೆಪಿಗೆ (BJP) ತಮ್ಮದೇ ಪಕ್ಷದ ಶಾಸಕ ಸಿಕ್ಕಿಬಿದ್ದಿರೋದು ಸಹಿಸಲಾಗದ ಮರಣ ಸಂಕಟ ಬಂದಂತಾಗಿದೆ. ಈ ಹಿನ್ನೆಲೆ ಚಂದ್ರು ಲಮಾಣಿ ವಿರುದ್ಧ ಶಿಸ್ತು ಕ್ರಮಕ್ಕೆ ಚಿಂತನೆ ನಡೆಸಿದೆ.
ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ (Karnaraka Lokayukta) ಬಲೆಗೆ ಟ್ರ್ಯಾಪ್ ಆಗಿದ್ದು, ಈ ಪ್ರಕರಣ ಸಂಬಂಧ ವರಿಷ್ಠರಿಗೆ ರಾಜ್ಯ ಬಿಜೆಪಿ ವರದಿ ಕಳುಹಿಸಿದೆ. ಅಲ್ಲದೇ ಶಾಸಕರ ಪ್ರಕರಣ ಬಿಜೆಪಿ ಕಮಿಷನ್ ಹೋರಾಟಕ್ಕೂ ಹಿನ್ನಡೆ ಆಗಿರೋದ್ರಿಂದ, ಲೋಕಾಯುಕ್ತ ವರದಿ ಬಂದ ಬಳಿಕ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಲೋಕಾಯುಕ್ತ ವರದಿಯಲ್ಲಿ ಲಂಚ ಪಡೆದಿರುವುದು ಸಾಬೀತಾದರೆ ಪಕ್ಷದಿಂದ ಅಮಾನತ್ತು ಅಥವಾ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆ ಮಾಡುವ ಸಾಧ್ಯತೆಗಳಿವೆ. ಈ ಮಧ್ಯೆ ವಿಪಕ್ಷ ನಾಯಕ ಆರ್.ಅಶೋಕ್ ಅವರಿಂದಲೂ ಶಾಸಕ ಚಂದ್ರು ಲಮಾಣಿಗೆ ನೋಟಿಸ್ ಕೊಡಲು ಸಿದ್ಧತೆ ನಡೆದಿದೆ. ಇದನ್ನೂ ಓದಿ: 5 ಲಕ್ಷ ಕಮಿಷನ್ ಪಡೆಯುವಾಗ ಲಾಕ್ – ʻಲೋಕಾʼ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ
ಲಮಾಣಿ ವಿರುದ್ಧ ನ್ಯಾಯಮೂರ್ತಿಗಳು ಗರಂ
ಈ ಮಧ್ಯೆ, ಜನಪ್ರತಿನಿಧಿ ನ್ಯಾಯಾಲಯಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಸಿರುವ ಲಮಾಣಿ ವಿರುದ್ಧ ನ್ಯಾ.ಸಂತೋಷ್ ಗಜಾನನ ಭಟ್ ಗರಂ ಆಗಿದ್ದಾರೆ. ತುರ್ತಾಗಿ ಜಾಮೀನು ಅರ್ಜಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಕ್ಕೆ, ನಿಮ್ಮನ್ನ ಲೋಕಾಯುಕ್ತ ಟ್ರ್ಯಾಪ್ ಮಾಡಿದೆ. ನಿಮಗೆ ಶಾರ್ಟ್ ಡೇಟ್ ಬೇರೆ ಬೇಕೆ? ಜಾಮೀನು ಏಕೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.
ಸ್ವಾಮೀಜಿ ಕೈವಾಡ ಇದ್ಯಾ?
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಪ್ರಕರಣ ಸಂಬಂಧ ಶಾಸಕರನ್ನ ಸಿಲುಕಿಸುವ ಬಗ್ಗೆ ಸ್ವಾಮೀಜಿಯೊಬ್ಬರ ಕೈವಾಡ ಇರುವ ಆರೋಪ ಕೇಳಿ ಬಂದಿದೆ. ಆದ್ರೆ, ಈ ಎಲ್ಲಾ ಆರೋಪಗಳನ್ನು ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ್ ಸ್ವಾಮೀಜಿ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: 11 ಲಕ್ಷ ಕಮಿಷನ್ಗೆ ಬೇಡಿಕೆ – 2 ದಿನಗಳ ಹಿಂದೆಯೇ ಆಡಿಯೋದಲ್ಲಿ ಸಿಕ್ಕಿಬಿದ್ದಿದ್ದ ಚಂದ್ರು ಲಮಾಣಿ!

ಶಾಸಕ ಡಾ.ಚಂದ್ರು ಲಮಾಣಿ ಬಗ್ಗೆ ನಾನು ಮಾತನಾಡಿರೋದು ಸತ್ಯ. 6 ತಿಂಗಳ ಹಿಂದೆ ಚಂದ್ರು ಲಮಾಣಿ ಬಗ್ಗೆ ಮಾತಾಡಿರೋ ಆಡಿಯೋ ಅದು. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮಾತಾಡಿದ್ದೆ. ಆದ್ರೆ, ಲೋಕಾಯುಕ್ತ ದಾಳಿಗೂ ನಾನು ಮಾತಾಡಿದ ಆಡಿಯೋಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು, ಶಾಸಕರು ನನ್ನನ್ನು ಗ್ರಾಮದಿಂದ ಓಡಿಸಲು ಸಂಚು ರೂಪಿಸಿದ್ದರು. 18 ಲಕ್ಷ ರೂಪಾಯಿ ಖರ್ಚು ಮಾಡಿ ಮಠದಿಂದ ಓಡಿಸಲು ಪ್ಲ್ಯಾನ್ ಮಾಡಿದ್ರು ಎಂದು ಆರೋಪಿಸಿದ್ದಾರೆ. ಇತ್ತ, ಶಿರಹಟ್ಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚಂದ್ರು ಲಮಾಣಿ ವಿರುದ್ಧ ಪ್ರತಿಭಟನೆ ನಡೆಸಿದ್ರು. ಶಾಸಕ ಸ್ಥಾನದಿಂದ ಲಮಾಣಿಯನ್ನ ಅಮಾನತು ಮಾಡುವಂತೆ ಆಗ್ರಹಿಸಿದ್ರು. ಇದನ್ನೂ ಓದಿ: ಚಂದ್ರು ಲಮಾಣಿ ಲಂಚ ಪ್ರಕರಣ – ʻಷಡ್ಯಂತ್ರʼ ಆಡಿಯೋ ಬಗ್ಗೆ ಸ್ವಾಮೀಜಿ ಸ್ಪಷ್ಟನೆ

