– ಮಗನ ಕೊಲೆ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದ ಪೋಷಕರು
ಬೆಂಗಳೂರು: ಕೆನಡಾದಲ್ಲಿ (Canada) ಕನ್ನಡಿಗನಿಗೆ (Kannadiga) ಗುಂಡಿಟ್ಟು ಹತ್ಯೆ ಪ್ರಕರಣ ಸಂಬಂಧ ಕನ್ನಡಿಗ ಚಂದನ್ ಮೃತದೇಹ ಸ್ವಗ್ರಾಮ ನೆಲಮಂಗಲ (Nelamangala) ತಾಲೂಕಿನ ತ್ಯಾಮಗೊಂಡ್ಲುಗೆ (Thyamagondlu) ಆಗಮಿಸಿದ್ದು, ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಲಾಗುತ್ತಿದೆ.
ಕೊಲೆಯಾಗಿ ಒಂದು ವಾರದ ಬಳಿಕ ಸ್ವಗ್ರಾಮಕ್ಕೆ ಚಂದನ್ ಮೃತದೇಹ ಆಗಮಿಸಿದೆ. ಭಾನುವಾರ ರಾತ್ರಿ 11:49ರ ಸುಮಾರಿಗೆ ಚಂದನ್ ಮೃತದೇಹವನ್ನು ತ್ಯಾಮಗೊಂಡ್ಲುಗೆ ತರಲಾಗಿದ್ದು, ಮನೆ ಮುಂದೆ ಅಂತಿಮ ವಿಧಿವಿಧಾನದ ನಂತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ತ್ಯಾಮಗೊಂಡ್ಲುವಿನ ಗ್ರಾಮೀಣ ಬ್ಯಾಂಕ್ ಹತ್ತಿರ ಅಂತಿಮ ದರ್ಶನಕ್ಕೆ ಸಿದ್ಧತೆ ನಡೆಸಿದ್ದು, ಮಧ್ಯಾಹ್ನ 12ರಿಂದ 3ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಆರ್ಯವೈಶ್ಯ ಸಂಘದ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಇದನ್ನೂ ಓದಿ: 400 ಕೋಟಿ ದರೋಡೆ ಕಟ್ಟುಕಥೆ – ʻಮಹಾʼ ಸರ್ಕಾರಕ್ಕೆ ಎಸ್ಐಟಿ ವರದಿ
ಸಂತೆ ಬೀದಿಯ ಮೈದಾನದಲ್ಲಿ ಚಂದನ್ ಮೃತದೇಹ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಗನ ಮೃತದೇಹದ ಮುಂದೆ ತಂದೆ-ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ತಂದೆ-ತಾಯಿ ದುಖಃಪಡುತ್ತಿದ್ದು, ಕುಟುಂಬಸ್ಥರು ಚಂದನ್ ತಂದೆ-ತಾಯಿಗೆ ಸಾಂತ್ವನ ಹೇಳುತ್ತಿದ್ದಾರೆ. ಸದ್ಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇದನ್ನೂ ಓದಿ: ಇಂದಿನಿಂದ AI ಇಂಪ್ಯಾಕ್ಟ್ ಶೃಂಗಸಭೆ – ಭಾರತದಲ್ಲಿ ರಸ್ತೆ ಸುರಕ್ಷತೆಗೆ ಎಐ ಬಳಕೆ ಕುರಿತು ಚರ್ಚೆ
ಇನ್ನು ಮೃತ ಚಂದನ್ ತಂದೆ ನಂದ ಕುಮಾರ್ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಮಗನ ಕೊಲೆಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದಾರೆ. ನನ್ನ ಒಬ್ಬನೇ ಮಗ ಪುನರ್ಜನ್ಮ ತಾಳಲಿ. ನನ್ನ ಮಗ ಸಾಕಷ್ಟು ರೀತಿಯಲ್ಲಿ ಜನರ ಸೇವೆ ಮಾಡುತ್ತಿದ್ದ. ಈಗಾಗಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಳಿ ಮನವಿ ಮಾಡಿದ್ದೇನೆ. ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದಲ್ಲಿ ಮನವಿ ಮಾಡುತ್ತೇವೆ. ನನ್ನ ಮಗನ ಸಾವು ಸಹಜ ಸಾವಲ್ಲ. ಹೀಗಾಗಿ ಮಗನ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಶಿವರಾತ್ರಿ ಜಾಗರಣೆಗೆ ಹೋಗಿದ್ದವರ ಮನೆಗೆ ಕನ್ನ – 154 ಗ್ರಾಂ ಚಿನ್ನ, 270 ಗ್ರಾಂ ಬೆಳ್ಳಿ ಕಳ್ಳತನ

ಚಂದನ್ ತಾಯಿ ಶೈಲಜಾ ಮಾತನಾಡಿ, ನಮ್ಮ ಮಗ ತುಂಬಾ ಒಳ್ಳೆ ಹೆಸರು ಪಡೆದಿದ್ದ. ಕೆಲಸದ ಜೊತೆಗೆ ಎಲ್ಲರ ಅಚ್ಚುಮೆಚ್ಚಿನ ಹೆಸರು ಮಾಡಿದ್ದ. ಕೆನಡಾದಲ್ಲಿ ಮನೆ ಮಾಡಲು ಆಸೆ ಹೊಂದಿದ್ದ. ನಮ್ಮನ್ನ ಅಲ್ಲಿಗೆ ಕರೆದುಕೊಂಡು ಹೋಗಲು ಸಾಕಷ್ಟು ಪ್ರಯತ್ನ ಪಟ್ಟ. ಮಗನ ಸಾವು ಸಾಕಷ್ಟು ನೋವು ತಂದಿದೆ. ಇಂಥಾ ಮಗನನ್ನ ಕಳೆದುಕೊಂಡುಬಿಟ್ಟೆವು. ಬಾಳಿ ಬದುಕಬೇಕಿದ್ದ ಮಗ ಸುಖ ಪಡುವ ವಯಸ್ಸಿನಲ್ಲಿ ನಮ್ಮನ್ನ ಬಿಟ್ಟು ಹೊರಟು ಹೋಗಿಬಿಟ್ಟ. ಅವನ ಕೊಲೆಯ ಬಗ್ಗೆ ಸೂಕ್ತ ತನಿಖೆಯಾಗಬೇಕು. ನನ್ನ ಮಗನಿಗೆ ಹಾಗೂ ನಮಗೆ ನ್ಯಾಯ ಸಿಗಬೇಕು. ಅವನಿಗೆ ದೇವರು ಒಳ್ಳೆಯದು ಮಾಡಲಿ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ – ಸ್ವಕುಳ ಸಾಳಿ ಸಮಾಜದ 15 ಕುಟುಂಬಕ್ಕೆ ಬಹಿಷ್ಕಾರ ಶಿಕ್ಷೆ

