– ರಜೆ ತಗೊಂಡು ಮೈಂಡ್ ಫ್ರೀ ಮಾಡ್ಕೊಂಡು ಕೆಲಸಕ್ಕೆ ಹೋಗು ಎಂದ ಡಿಸಿ!
ಚಿಕ್ಕಮಗಳೂರು: ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಕಡೂರು (Kaduru) ತಾಲೂಕು ಕಚೇರಿಯ ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್ ಜಿಲ್ಲಾಧಿಕಾರಿ ಕಚೇರಿಗೆ ಬಂದು ಡಿಸಿಯವರನ್ನು ಭೇಟಿಯಾಗಿದ್ದಾರೆ. ಕುಟುಂಬ ಸಮೇತರಾಗಿ ಬಂದು ಡಿಸಿ ಭೇಟಿಯಾಗಿ ನ್ಯಾಯಕ್ಕೆ ಮನವಿ ಮಾಡಿದ್ದಾರೆ.
ಈ ವೇಳೆ ಇಕ್ಬಾಲ್ ಅವರು ಜಿಲ್ಲಾಧಿಕಾರಿ ನಾಗರಾಜ್ ಅವರ ಕಾಲಿಗೆ ಬೀಳಲು ಮುಂದಾದರು. ಈ ವೇಳೆ ಜಿಲ್ಲಾಧಿಕಾರಿಗಳು, ಇವತ್ತು ಬಂದಿದ್ದೀಯಾ, ಇಷ್ಟು ದಿನ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದರು. ಬಳಿಕ, ಒಂದು ವಾರ ರಜೆ ತಗೋ, ಮೈಂಡ್ ಫ್ರೀ ಮಾಡ್ಕೊಂಡು ಕೆಲಸಕ್ಕೆ ಹೋಗುವಂತೆ ಸೂಚಿಸಿದರು. ಅಲ್ಲದೇ ಯಾರೇ ಹೇಳಿದರೂ ನಕಲಿ ಕೆಲಸ ಮಾಡಬೇಡ, ಅದು ನಿನ್ನೆ ಕೆಲಸವಲ್ಲ. ತಹಶೀಲ್ದಾರ್ ಜೊತೆ ಮಾತನಾಡಿ ನಿನ್ನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ನಂತರ ನಾಳೆಯಿಂದ (ಫೆ.13) ಕೆಲಸಕ್ಕೆ ಹೋಗ್ತೀನಿ ಸರ್, ಎಂದು ಹೇಳಿ ಇಕ್ಬಾಲ್ ತೆರಳಿದ್ದಾರೆ. ಇದನ್ನೂ ಓದಿ: ಶಾಸಕರ ಪಿಎ ಕಿರುಕುಳಕ್ಕೆ ಡೆತ್ನೋಟ್ ಬರೆದಿಟ್ಟು ಸರ್ಕಾರಿ ನೌಕರ ನಾಪತ್ತೆ
ಕಡೂರು ತಹಶೀಲ್ದಾರ್, ಶಾಸಕ ಆನಂದ್ ಪಿಎ ಮಂಜುನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಕಲ್ಲೇಶ್ ವಿರುದ್ಧ ಇಕ್ಬಾಲ್ ಆರೋಪ ಮಾಡಿದ್ದರು. ಶಾಸಕರ ಪಿಎ ಮಂಜುನಾಥ್ ತಿಂಗಳಿಗೆ 25 ಸಾವಿರ ರೂ. ಹಣ ಕೇಳ್ತಾರೆಂದು ಆರೋಪಿಸಿ, ಎಲ್ಲರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಬರೆದಿದ್ದರು.

