ಕನ್ನಡಿಗರ ಅಚ್ಚುಮೆಚ್ಚು.. ನಿಮ್ಮ ನಂಬಿಕೆಯ ʻಪಬ್ಲಿಕ್ ಟಿವಿʼಗೆ ಇಂದು 14ನೇ ವಾರ್ಷಿಕೋತ್ಸವದ ಸಂಭ್ರಮ. ಜೊತೆಗೆ ʻಪಬ್ಲಿಕ್ ಮೂವೀಸ್ʼಗೆ 8 ವರ್ಷಗಳ ಸಾರ್ಥಕ ಸಂಭ್ರಮ. ಮೌಲ್ಯ ಪ್ರತಿಪಾದನೆಯ ಪ್ರತಿಬಿಂಬವಾಗಿರುವ ನಿಮ್ಮ ನೆಚ್ಚಿನ ʻಪಬ್ಲಿಕ್ ಟಿವಿʼ ಕಚೇರಿಯಲ್ಲಿ ಇಂದು ಡಬಲ್ ಸಂಭ್ರಮ ಮನೆ ಮಾಡಿತ್ತು. ವಿವಿಧ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಸಮಾರಂಭ ಸಂಪನ್ನಗೊಂಡಿತು.
ʻಪಬ್ಲಿಕ್ ಟಿವಿʼ ಸಂಸ್ಥೆ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಅವರ ಸಮ್ಮುಖದಲ್ಲಿ ಖುದ್ದು ಸಿಬ್ಬಂದಿಗಳೇ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಹೆಚ್.ಆರ್ ರಂಗನಾಥ್ ಅವರು ಸಹೋದ್ಯೋಗಿಗಳೊಂದಿಗೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಪಬ್ಲಿಕ್ ಟಿವಿ ಸಿಇಒ ಅರುಣ್, ಸಿಓಓ ಸಿ.ಕೆ.ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಬಳಿಕ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಿದರು. ಇದನ್ನೂ ಓದಿ: ನಿಮ್ಮ ʻಪಬ್ಲಿಕ್ ಟಿವಿʼಗೆ 14ನೇ ವಸಂತ – ಸಾರ್ಥಕ ಪಯಣದ ಹಿಂದಿದೆ ಸ್ಫೂರ್ತಿದಾಯಕ ಕಥೆ
ಈ ಬಾರಿ ʻಪಬ್ಲಿಕ್ ಟಿವಿʼ ವಾರ್ಷಿಕೋತ್ಸವ ಕಾರ್ಯಕ್ರಮವನ್ನ ದೇಶ ಕಾಯುವ ಯೋಧರಿಗೆ ಅರ್ಪಣೆ ಮಾಡಲಾಗಿತ್ತು. ಅದಕ್ಕಾಗಿ ʻಸಿಂಧೂರ ಸಮ್ಮಾನʼ ಶೀರ್ಷಿಕೆ ಅಡಿಯಲ್ಲಿ ಕಾರ್ಯಕ್ರಮ ನಡೆಸಿಕೊಡಲಾಗಿತ್ತು. ದೇಶಸೇವೆಗಾಗಿ ತಮ್ಮನ್ನ ಸಮರ್ಪಿಸಿಕೊಂಡ ಕರ್ನಾಟಕದ ಯೋಧರನ್ನ ಗೌರವಿಸಿ, ಸನ್ಮಾನಿಸಲಾಯಿತು.




