– 241 ಗ್ರಾಂ ಚಿನ್ನ, 2.8 ಕೆ.ಜಿ ಬೆಳ್ಳಿ, 1.30 ಲಕ್ಷ ನಗದು ವಶಕ್ಕೆ
ಬೆಂಗಳೂರು: ಕಾರಿನ ಇಎಂಐ (Car EMI) ಕಟ್ಟಲು ಹಣವಿಲ್ಲದೇ ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಯುವಕನೋರ್ವ ಕಳ್ಳತನ ಮಾಡಿ ಪೊಲೀಸರ ಅತಿಥಿಯಾದ ಘಟನೆ ಬಸವನಗುಡಿಯಲ್ಲಿ (Basavanagudi) ನಡೆದಿದೆ.
ಉತ್ತರಹಳ್ಳಿ ನಿವಾಸಿ ಶರತ್ ಕುಮಾರ್ (31) ಬಂಧಿತ ಆರೋಪಿ. ಬಸವನಗುಡಿಯ ತ್ಯಾಗರಾಜನಗರದ ಮನೆಯೊಂದರಲ್ಲಿ ಆರೋಪಿ ದೊಡ್ಡಮ್ಮ 25 ವರ್ಷಗಳಿಂದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಯ ದೊಡ್ಡಮ್ಮನಿಗೆ ಮನೆ ಮಾಲೀಕರು ಅದೇ ಮನೆಯಲ್ಲಿ ಉಳಿಯಲು ಅವಕಾಶ ಕೊಟ್ಟಿದ್ದರು. ಮನೆ ಮಾಲೀಕರು ಹೊರಗೆ ತೆರಳಿದ್ದ ವೇಳೆ ದೊಡ್ಡಮ್ಮನ ಗಮನಕ್ಕೆ ಬಾರದಂತೆ ಆರೋಪಿ ಮನೆಗಳ್ಳತನ ಮಾಡಿದ್ದಾನೆ. ಇದನ್ನೂ ಓದಿ: ಕಷ್ಟಪಟ್ಟು ಬೆಳೆದ ರೈತರಿಗೆ ತೂಕದಲ್ಲಿ ಮೋಸ – ಹಾವೇರಿ ಎಪಿಎಂಸಿಯಲ್ಲಿ ರೈತರ ಆಕ್ರೋಶ
ಮನೆ ಮಾಲಕಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರು. 25 ವರ್ಷಗಳಿಂದ ಆರೋಪಿಯ ದೊಡ್ಡಮ್ಮ ಇದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆ ನಂಬಿಕೆಯಿಂದ ಮನೆಯ ಮತ್ತೊಂದು ಬೀಗದ ಕೀಯನ್ನ ಮನೆಕೆಲಸದಾಕೆಗೆ ನೀಡಿದ್ದರು. ಆರೋಪಿ ಶರತ್ ದೊಡ್ಡಮ್ಮನಿಗೆ ಊಟ ನೀಡಲು ಆಗಾಗ ಮಾಲೀಕರ ಮನೆಗೆ ಬರುತ್ತಿದ್ದ. ಈ ವೇಳೆ ಮನೆ ಮಾಲೀಕರು ಇಲ್ಲದಿರುವುದನ್ನ ಗಮನಿಸಿದ್ದು, ದೊಡ್ಡಮ್ಮನಿಗೆ ತಿಳಿಯದಂತೆ ಆಕೆ ಬಳಿಯಿದ್ದ ಬೀಗದ ಕೀ ಪಡೆದಿದ್ದ. ಕಳೆದ ವರ್ಷ ಅಕ್ಟೋಬರ್ 22ರಂದು ಚಿನ್ನ ಕಳವು ಮಾಡಿದ್ದ. ಇದನ್ನೂ ಓದಿ: ಬೆಂಗಳೂರಿನ ಅಂಜನಾಪುರದಲ್ಲಿ ತಪ್ಪದ ಚಿರತೆ ಭೀತಿ – ಮನೆಯಿಂದ ಹೊರ ಬರಲು ಭಯ ಪಡ್ತಿರೋ ಜನ!
ಚಿನ್ನಾಭರಣ ಕಳುವಾದ ನಂತರ ಮನೆ ಮಾಲೀಕರು ಬಸವನಗುಡಿ ಠಾಣೆಗೆ ದೂರು ನೀಡಿದ್ದರು. ಮನೆಗೆಲಸದಾಕೆಯನ್ನ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಗೊತ್ತಿಲ್ಲ ಎಂದಿದ್ದರು. ಮತ್ತೊಮ್ಮೆ ಮನೆಗೆಲಸದಾಕೆ ಮನೆಯಲ್ಲಿದ್ದ ಆರೋಪಿಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಕಾರಿನ ಇಎಂಐ ಕಟ್ಟಲಿಕ್ಕೆ ದುಡ್ಡಿರಲಿಲ್ಲ ಹೀಗಾಗಿ ಕೃತ್ಯವೆಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅರೆಸ್ಟ್ ಆದ ನಂತರವಷ್ಟೇ ಆತನ ದೊಡ್ಡಮ್ಮನಿಗೂ ವಿಚಾರ ತಿಳಿದಿದೆ. ಪ್ರಕರಣದಲ್ಲಿ ಆರೋಪಿಯ ದೊಡ್ಡಮ್ಮನ ಪಾತ್ರವಿಲ್ಲ ಅನ್ನೋದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಶರತ್ನನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 36 ಲಕ್ಷ ರೂ. ಮೌಲ್ಯದ 241 ಗ್ರಾಂ ಚಿನ್ನ, 2.8 ಕೆ.ಜಿ ಬೆಳ್ಳಿ ಹಾಗೂ 1.30 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಪಾದಯಾತ್ರೆ ಹೋಗ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ – ಆತಂಕದ ನಡುವೆ ಭಕ್ತರ ಕಾಲ್ನಡಿಗೆ!

