ನವದೆಹಲಿ: ಜಲಮಂಡಳಿಯ ಯಮಗುಂಡಿಗೆ ಬೈಕ್ ಸವಾರನೊಬ್ಬ ಬಲಿಯಾಗಿದ್ದಾನೆ. ಆಳವಾದ ಗುಂಡಿಗೆ ಬಿದ್ದು ಬೈಕ್ ಸವಾರ ಕಮಲ್ ಪ್ರಾಣಪಕ್ಷಿ ಹಾರಿ ಹೋಗಿದೆ.
ಪಶ್ಚಿಮ ದೆಹಲಿಯ ಜನಕಪುರಿಯಲ್ಲಿ ಜಲಮಂಡಳಿಯಿಂದ ದುರಸ್ತಿ ಕಾಮಗಾರಿ ನಡೆಯುತ್ತಿತ್ತು. 20 ಅಡಿ ಆಳವಾದ ಗುಂಡಿ ಅಗೆಯಲಾಗಿತ್ತು. ನಿನ್ನೆ ರಾತ್ರಿ ರೋಹಿಣಿಯಲ್ಲಿರುವ ಕಚೇರಿಯಿಂದ ಜನಕಪುರಿಯ ಮನೆಗೆ ಬೈಕ್ನಲ್ಲಿ ಹೋಗುತ್ತಿದ್ದ ಕಮಲ್ ಆಕಸ್ಮಿಕವಾಗಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ರಸ್ತೆಯಲ್ಲಿ ಅಗೆಯಲಾಗಿದ್ದ ಗುಂಡಿಗೆ ಯಾವುದೇ ಎಚ್ಚರಿಕಾ ಚಿಹ್ನೆಗಳು, ಬ್ಯಾರಿಕೇಡ್ಗಳು, ರಿಫ್ಲೆಕ್ಟರ್ ಅಳವಡಿಸದೇ ಇದ್ದಿದ್ದರಿಂದ ಈ ದುರಂತ ಸಂಭವಿಸಿದೆ. ಘಟನೆ ಬಗ್ಗೆ ದೆಹಲಿ ಸರ್ಕಾರದ ಸಚಿವ ಆಶೀಷ್ ಸೂದ್ ತನಿಖೆಗೆ ಆದೇಶ ನೀಡಿದ್ದಾರೆ.
ಇತ್ತ ಬೆಂಗಳೂರಿನಲ್ಲೂ ಬಾಲಕನೊಬ್ಬ ಚರಂಡಿಗೆ ಬಿದ್ದು ಗಾಯಗಳೊಂದಿಗೆ ಪಾರಾದ ಘಟನೆ ನಡೆದಿದೆ. ಸರ್ವಜ್ಞನಗರದ ಗೋವಿಂದಪುರದಲ್ಲಿ ಶಾಲೆ ಎದುರು ಚರಂಡಿ ಕಾಮಗಾರಿ ಮಾಡಲಾಗ್ತಿತ್ತು. ಕಬ್ಬಿಣದ ಮೋಲ್ಡಿಂಗ್ ಕಂಬಿಗಳನ್ನು ಹಾಕಿ ಹಾಗೇ ಬಿಡಲಾಗಿತ್ತು. ಈ ವೇಳೆ ಚರಂಡಿಯನ್ನು ದಾಟುವಾಗ ಬ್ಯಾಗ್ ಸಮೇತ 1ನೇ ತರಗತಿಯ ಬಾಲಕ ಚರಂಡಿಗೆ ಬಿದ್ದಿದ್ದಾನೆ. ಸಣ್ಣಪುಟ್ಟ ಗಾಯಗಳೊಂದಿಗೆ ಬಾಲಕ ಅಪಾಯದಿಂದ ಪಾರಾಗಿದ್ದಾನೆ.

