ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC Bank) ಅಧ್ಯಕ್ಷರಾಗಿ ಎಂಎಲ್ಸಿ ಸಿ.ಟಿ. ರವಿ (C.T. Ravi) ಹಾಗೂ ಉಪಾಧ್ಯಕ್ಷರಾಗಿ ಕೊಪ್ಪ ತಾಲೂಕಿನ ದಿನೇಶ್ ಹೊಸೂರು (Dinesh Hosur) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 13 ನಿರ್ದೇಶಕರ ಬಲ ಹೊಂದಿರುವ ಡಿಸಿಸಿ ಬ್ಯಾಂಕಿನಲ್ಲಿ ಬಿಜೆಪಿ 11 ಹಾಗೂ ಜೆಡಿಎಸ್ 2 ಸ್ಥಾನಗಳನ್ನು ಹೊಂದುವ ಮೂಲಕ ಮೈತ್ರಿಕೂಟವು ಸಂಪೂರ್ಣ ಹಿಡಿತ ಸಾಧಿಸಿತ್ತು. ಬಿಜೆಪಿಯಿಂದ ಸಿ.ಟಿ. ರವಿ ಅವರೊಂದಿಗೆ ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಮತ್ತು ಡಿ.ಎಸ್. ಸುರೇಶ್ ಅವರು ನೇಮಕಗೊಂಡಿದ್ದರೆ, ಜೆಡಿಎಸ್ನಿಂದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹಾಗೂ ದಿವಂಗತ ಎಸ್.ಎಲ್. ಧರ್ಮೇಗೌಡ ಅವರ ಪುತ್ರ ಸೋನಾಲ್ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ದೇಶದ ಬಡವರು, ರೈತರು ಸೇರಿದಂತೆ ಎಲ್ಲರ ಹಿತದೃಷ್ಟಿಯ ಬಜೆಟ್ ಮಂಡನೆಯಾಗಿದೆ: ಬಿವೈವಿ
ಜಿಲ್ಲೆಯಲ್ಲಿ ಐವರು ಶಾಸಕರು ಹಾಗೂ ಮೂರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಯಾವುದೇ ಸ್ಥಾನ ಗಳಿಸಲು ಸಾಧ್ಯವಾಗದೆ ಶೂನ್ಯಕ್ಕೆ ಕುಸಿದಿದೆ. ಕಡೂರು ಶಾಸಕ ಕೆ.ಎಸ್. ಆನಂದ್ ಅವರ ವಿರುದ್ಧ ಜಯಗಳಿಸಿರುವ ದಿನೇಶ್ ಹೊಸೂರು ಅವರಿಗೆ ಉಪಾಧ್ಯಕ್ಷ ಪಟ್ಟ ಒಲಿದಿರುವುದು ವಿಶೇಷವಾಗಿದೆ. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಬ್ಯಾಂಕ್ ಸಿಬ್ಬಂದಿ, ಸಾರ್ವಜನಿಕರು ಹಾಗೂ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಬ್ಯಾಂಕಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಜಕೀಯ ಮಾಡೋದಕ್ಕೆ ಪಕ್ಷ ಇದೆ. ಇದು ರಾಜಕೀಯ ಮಾಡುವ ಕ್ಷೇತ್ರವಲ್ಲ. ಸೇವೆ ಮಾಡುವ ಕ್ಷೇತ್ರ. ರೈತರ ಅಭಿವೃದ್ಧಿಯೇ ನಮ್ಮ ಗುರಿ ಎಂದು ಅಧ್ಯಕ್ಷ-ಉಪಾಧ್ಯಕ್ಷರಿಬ್ಬರು ರೈತರ ಕಲ್ಯಾಣದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡ್ತೀವಿ: ಸಿದ್ದರಾಮಯ್ಯ

