ಬದಲಾವಣೆ ಜಗತ್ತಿನ ನಿಯಮ… ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯಲ್ಲಿಯೂ ಬದಲಾವಣೆಯಾಗುವುದು ಸಹಜ. ಅದನ್ನು ಬೆಳವಣಿಗೆ, ಪ್ರಗತಿ, ಭಾವನೆ, ಅಭಿವೃದ್ಧಿ ಹೀಗೆ ಬೇರೆ ರೀತಿಯಲ್ಲಿ ಕರೆಯಲಾಗುತ್ತದೆ. ಮನುಷ್ಯ, ಪ್ರಾಣಿ, ಪಕ್ಷಿ, ಕೆಲವು ವಸ್ತುಗಳು ಹೀಗೆ ಭೂಮಿಯ ಮೇಲಿರುವ ಪ್ರತಿಯೊಂದು ಅಂಶವು ತನ್ನಲ್ಲಿ ಬದಲಾವಣೆ ಎಂಬುದನ್ನ ಅಳವಡಿಸಿಕೊಂಡು ಬಿಟ್ಟಿವೆ. ಹಾಗೇ ಸಂಪ್ರದಾಯ, ಆಚರಣೆ, ಪದ್ಧತಿ, ನಡವಳಿಕೆ ಹೀಗೆ ಎಲ್ಲವೂ ಬದಲಾಗುತ್ತಾ ಹೋಗುತ್ತವೆ. ಅದರೊಂದಿಗೆ ಮಾನವ ಸೃಷ್ಟಿಸಿಕೊಂಡಂತಹ ಧರ್ಮ, ಜಾತಿ, ಭಾಷೆ, ದಿನಚರಿ, ಆಹಾರ ಪದ್ಧತಿ, ವೈದ್ಯಕೀಯ ಲೋಕ, ಶಿಕ್ಷಣ ಎಲ್ಲವೂ ಹೊಸತನವನ್ನು ಕಂಡುಕೊಳ್ಳುತ್ತಾ ಹೋಗುತ್ತಿವೆ.
ಈಗಿನ ಪ್ರಸ್ತುತ ಜೀವನಕ್ಕೂ ಹಾಗೂ ಹಿಂದೆ ನಮ್ಮ ಪೂರ್ವಜರು ಕಂಡುಕೊಂಡಂತಹ ಜೀವನಕ್ಕೂ ತುಲನೆ ಮಾಡಿದಾಗ ಅಜಗಜಾಂತರ ವ್ಯತ್ಯಾಸವನ್ನು ನಾವೆಲ್ಲರೂ ಕಾಣುತ್ತೇವೆ. ಅದನ್ನು ಬದಲಾವಣೆ ಎಂತಲೂ ಕರೆಯಬಹುದು ಕರೆಯಬಹುದು ಅಥವಾ ಅಭಿವೃದ್ಧಿ ಎನ್ನಬಹುದು. ಇದೆಲ್ಲದರ ಮಧ್ಯೆ ಬದಲಾಗುವ ವರ್ಷಗಳು ನಮ್ಮಲ್ಲಿ ಹೊಸ ಬದಲಾವಣೆಯನ್ನು ತರುತ್ತವೆ ಎಂಬ ಹುರುಪು ಎಂದಿಗೂ ಮಾಸದ ಗುರಿ.
ವರ್ಷಗಳು ಕಳೆದಂತೆ ನಾವೆಲ್ಲರೂ ಹೊಸತನವನ್ನು ಕಾಣಬಯಸುತ್ತೇವೆ. ಇದೆಲ್ಲದರ ಮಧ್ಯೆ ನಮ್ಮೆಲ್ಲರಲ್ಲಿಯೂ ಅದೊಂದು ನೋವು ಕಾಡುತ್ತಲೇ ಇರುತ್ತದೆ. ಈ ವರ್ಷವೂ ಹೇಗೋ ಕಳೆದು ಹೋಯಿತು, ಆದರೆ ಮುಂಬರುವ ಹೊಸ ವರ್ಷ ಚೆನ್ನಾಗಿ, ಸುಖಕರವಾಗಿ ಯಾರಿಗೂ ನೋವಾಗದಂತೆ ಇರಲು ಬಯಸುತ್ತೇವೆ. ನಮ್ಮೆಲ್ಲರಿಗೂ ಇನ್ನೂ 2025 ಆರಂಭವಾಗುವ ಸಮಯ ಹೇಗಿತ್ತು ಎನ್ನುವುದು ನೆನಪಿದೆ. ಇದೀಗ ನಮ್ಮ ಕಣ್ಣ ಮುಂದೆ 2026 ಕಾಣುತ್ತಿದೆ. ಇವೆರಡರ ಮಧ್ಯೆ ನಡೆದ ಕೆಲವು ಘಟನೆಗಳು ನಮ್ಮೆಲ್ಲರಲ್ಲೂ ಕಾಡುತ್ತವೆ. ಖುಷಿ ಕ್ಷಣದೊಂದಿಗೆ ಕೆಲವು ನೋವಿನ ಕ್ಷಣಗಳು ಕಣ್ಮುಂದೆ ಬರುತ್ತವೆ.
ಹೌದು, 2025 ಕೆಲವು ದುರ್ಘಟನೆಗಳಿಗೆ, ಮಹಾದುರಂತಗಳಿಗೆ ಸಾಕ್ಷಿಯಾಗಿದೆ. ಭಾರತವೇ ನೆನಪಿಸಿಕೊಳ್ಳುವಂತಹ ಇತಿಹಾಸದ ಪುಟಗಳಲ್ಲಿ ಬರೆದಿಡುವಂತಹ ಕೆಲವು ನೋವಿನ ಸಂಗತಿಗಳು ಘಟಿಸಿವೆ. ಅಹಮದಾಬಾದ್ ವಿಮಾನ ದುರಂತ, ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ ಹೀಗೆ ಕೆಲವು ಮಹವಿಪತ್ತುಗಳು ಸಂಭವಿಸಿವೆ. ಇದರಲ್ಲಿ ಸಾವಿರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಪ್ರಯಾಗ್ ರಾಜ್ ಕುಂಭಮೇಳ ಕಾಲ್ತುಳಿತ:
2025ರ ಜನವರಿ 13 ರಿಂದ ಫೆಬ್ರವರಿ 26ರವರೆಗೆ ಉತ್ತರಪ್ರದೇಶದ (Uttara Pradesh) ಪ್ರಯಾಗ್ರಾಜ್ನಲ್ಲಿ (Prayagraj) ನಡೆದ ಮಹಾಕುಂಭಮೇಳದಲ್ಲಿ (Kumbamela Stampede) ಕಾಲ್ತುಳಿತ ಸಂಭವಿಸಿತು. 144 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭಮೇಳದಲ್ಲಿ 30ಕ್ಕೂ ಅಧಿಕ ಜನ ಸಾವನಪ್ಪಿದರು. 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 144 ವರ್ಷಗಳಿಗೊಮ್ಮೆ ನಡೆಯುವ ಹಿನ್ನೆಲೆ ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಭಕ್ತರು ಸೇರಿಕೊಂಡಿದ್ದರು. ಈ ವೇಳೆ ಜನಸಂದಣಿ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿತು. ಸರ್ಕಾರ ಈಗಾಗಲೇ ಈ ದುರಂತಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಿದೆ.

ಪೆಹಲ್ಗಾಮ್ ಭಯೋತ್ಪಾದಕ ದಾಳಿ:
2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೆಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ (Pahalgam Terror Attack) ನಡೆಯಿತು. ಪ್ರವಾಸಿ ತಾಣಕ್ಕೆಂದು ಪೆಹಲ್ಗಾಮ್ನಲ್ಲಿರುವ ಬೈಸರನ್ ವ್ಯಾಲಿಗೆ ತೆರಳಿದ ಜನರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಕರ್ನಾಟಕದ ಇಬ್ಬರು ಸೇರಿದಂತೆ ಈ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಪಾಕಿಸ್ತಾನ ಮೂಲದ ಲಷ್ಕರ್ ಏ ತೈಬಾದ ರೆಜಿಸ್ಟೆನ್ಸ್ ಫ್ರಂಟ್ ಎಂಬ ಸಂಘಟನೆ ದಾಳಿ ನಡೆಸಿತು. ಭಯೋತ್ಪಾದಕರು ದಾಳಿ ವೇಳೆ ಧಾರ್ಮಿಕ ಗುರುತನ್ನು ಕೇಳಿ ಮುಸ್ಲಿಮೇತರರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದರು.

ಆಪರೇಷನ್ ಸಿಂಧೂರ:
26 ಜನರು ಸಾವನ್ನಪ್ಪಿದ್ದ ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು 2025ರ ಮೇ ತಿಂಗಳಲ್ಲಿ ʻಆಪರೇಷನ್ ಸಿಂಧೂರʼ (Operation Sindoor) ಎಂಬ ದಾಳಿ ನಡೆಸಿತು. ಈ ವೇಳೆ ಪಾಕಿಸ್ತಾನದ (Pakistan) 9 ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ ಕಾರಣ ಪ್ರಧಾನಿ ಮೋದಿ ಅವರು ಸಿಂಧೂರ ಎಂಬ ಹೆಸರನ್ನ ಸೂಚಿಸಿದರು. ಈ ಮೂಲಕ ಈ ದಾಳಿಗೆ ಆಪರೇಷನ್ ಸಿಂಧೂರ ಎಂದು ಹೆಸರಿಡಲಾಯಿತು.

ಆರ್ಸಿಬಿ ಚಿನ್ನಸ್ವಾಮಿ ಕಾಲ್ತುಳಿತ:
2025ರ ಐಪಿಎಲ್ನಲ್ಲಿ 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ತನ್ನ ಕನಸನ್ನು ನನಸಾಗಿಸಿಕೊಂಡಿತ್ತು. ಜೂನ್ 3ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫಿನಾಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಐಪಿಎಲ್ 2025 ಕಪ್ ತನ್ನದಾಗಿಸಿಕೊಂಡಿತ್ತು. ಈ ಹಿನ್ನೆಲೆ ಜೂನ್ 4ರಂದು ತನ್ನ ತವರಾದ ಬೆಂಗಳೂರಿಗೆ ಬರುವ ಯೋಜನೆ ಹಾಕಿಕೊಂಡಿತ್ತು. ಅದರಂತೆ ಆರ್ಸಿಬಿ ತಂಡವು ಜೂನ್ 4ರಂದು ಬೆಂಗಳೂರಿಗೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy Stampede) ಹೊರಗಡೆ ಜನಸಂದಣಿ ಹೆಚ್ಚಾಗಿ ನೂಕುನುಗ್ಗಲು ಉಂಟಾಯಿತು. ಪರಿಣಾಮ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು.

ಏರ್ ಇಂಡಿಯಾ ವಿಮಾನ ದುರಂತ:
2025ರ ಜೂನ್ 12 ರಂದು ಅಹಮದಾಬಾದ್ನಲ್ಲಿ (Ahemadabad) ಏರ್ ಇಂಡಿಯಾ ವಿಮಾನ ದುರಂತ (Air India Plane Crash) ಸಂಭವಿಸಿತು. ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ನ ಗ್ಯಾಟ್ ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಅಹಮದಾಬಾದ್ನಿಂದ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ 1.7 ಕಿಲೋಮೀಟರ್ ದೂರದಲ್ಲಿರುವ ಬಿಜೆ ಮೆಡಿಕಲ್ ಕಾಲೇಜ್ ವಸತಿ ನಿಲಯದ ಕಟ್ಟಡಗಳ ಹಿಂದೆ ಪತನಗೊಂಡಿತು. ಪರಿಣಾಮ ಪೈಲೆಟ್ ಸೇರಿದಂತೆ 265 ಜನರು ಸಾವನ್ನಪ್ಪಿದ್ದರು.

ಉತ್ತರ ಭಾರತದಲ್ಲಿ ಮೇಘಸ್ಫೋಟ:
2025ರ ಆರಂಭದಿಂದಲೂ ಭಾರತದ ಉತ್ತರ ಭಾಗದಲ್ಲಿ ಹೆಚ್ಚು ಮಳೆ ಆದ ಪರಿಣಾಮ ಮೇಘಸ್ಫೋಟ (Cloud Burst) ಸಂಭವಿಸಿತು. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಸೇರಿದಂತೆ ಹಲವೆಡೆ ಇದರ ಪರಿಣಾಮ ಬೀರಿತು. ಸುಮಾರು 4 ಸಾವಿರಕ್ಕೂ ಅಧಿಕ ಜನ ಈ ಮೇಘಸ್ಫೋಟದಿಂದ ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದು, ಜೊತೆಗೆ ಹಲವರ ಆಸ್ತಿಪಾಸ್ತಿ ನಾಶವಾಗಿದೆ. ಮೂಲಗಳ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ 380ಕ್ಕೂ ಅಧಿಕ ಜನ, ಜಮ್ಮು ಮತ್ತು ಕಾಶ್ಮೀರದಲ್ಲಿ 68 ಜನ, ಉತ್ತರಾಖಂಡದಲ್ಲಿ 20ಕ್ಕೂ ಅಧಿಕ ಜನ, ಪಂಜಾಬ್ನಲ್ಲಿ 50ಕ್ಕೂ ಅಧಿಕ ಜನ ಹೀಗೆ ಈಶಾನ್ಯ ಭಾರತದ ರಾಜ್ಯಗಳಾದ ಅಸ್ಸಾಂ, ಮೇಘಾಲಯ ಮತ್ತು ದಕ್ಷಿಣ ಭಾರತದಲ್ಲಿ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹೀಗೆ ಹಲವೆಡೆ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಸಾವು ನೋವು ಸಂಭವಿಸಿದೆ.

ಕರ್ನೂಲು ಬಸ್ ದುರಂತ:
2025ರ ಅಕ್ಟೋಬರ್ 24ರಂದು ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಬೆಂಕಿ ಹತ್ತಿಕೊಂಡು 20 ಜನರು ಸಜೀವ ದಹನವಾಗಿದ್ದರು. ಹೈದರಾಬಾದ್ನಿಂದ ಬೆಂಗಳೂರಿಗೆ ಬರುವ ಮಾರ್ಗ ಮಧ್ಯೆ ಕರ್ನೂಲು ಬಳಿಯ (Kurnool) ಚಿನ್ನಟೆಕೂರು ಬಳಿ ಈ ಘಟನೆ ಸಂಭವಿಸಿತ್ತು. ಕಾವೇರಿ ಹೆಸರಿನ ವೋಲ್ವೋ ಎಂಬ ಬಸ್ಸಿನಲ್ಲಿ 44 ಜನರು ಪ್ರಯಾಣಿಸುತ್ತಿದ್ದಾಗ ಬೈಕೊಂದು ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಂಧನ ಟ್ಯಾಂಕ್ಗೆ ಬೆಂಕಿ ಆವರಿಸಿ ಕ್ಷಣಾರ್ಧದಲ್ಲಿ ಬಸ್ ಸುಟ್ಟು ಕರಕಲಾಯಿತು. ಪರಿಣಾಮ ಬಸ್ಸಿನಲ್ಲಿದ್ದ 20ಕ್ಕೂ ಅಧಿಕ ಜನ ಹಾಗೂ ಬೈಕ್ ಸವಾರ ಸಾವನ್ನಪ್ಪಿದ್ದರು.

ದೆಹಲಿ ಕೆಂಪುಕೋಟೆ ಕಾರು ಬ್ಲಾಸ್ಟ್:
2025 ನವಂಬರ್ 10ರಂದು ದೆಹಲಿಯ ಕೆಂಪು ಕೋಟೆ (Delhi Redfort Blast) ಬಳಿ ಭೀಕರ ಕಾರು ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 11 ಜನ ಸಾವನ್ನಪ್ಪಿದ್ದರು. ಈ ಸ್ಪೋಟದ ಹಿಂದೆ ಕಾಶ್ಮೀರಿ ಉಗ್ರ ಸಂಘಟನೆಯ ಕೈವಾಡ ಇರುವುದು ಬಯಲಾಗಿದೆ. ಇದೊಂದು ಭಯೋತ್ಪಾದಕ ಕೃತ್ಯವಾಗಿದ್ದು, ಉಗ್ರ ಉಮರ್ ನಬಿ ಇದರ ಪ್ರಮುಖ ಸಂಚುಕೋರ ಎಂದು ತಿಳಿದುಬಂದಿದೆ. ಈ ಸಂಬಂಧ ಈಗಾಗಲೇ ಪೊಲೀಸರು ಹಲವರನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ನವೆಂಬರ್ 10ರಂದು ಸಂಜೆ 6:52ರ ಸುಮಾರಿಗೆ ದೆಹಲಿಯ ಕೆಂಪುಕೋಟೆ ಮೆಟ್ರೋ ಸ್ಟೇಷನ್ ಬಳಿ ಇರುವ ಮುಖ್ಯ ರಸ್ತೆಯೊಂದರಲ್ಲಿ ಹುಂಡೈ i20 ಕಾರನ್ನು ಬ್ಲಾಸ್ಟ್ ಮಾಡಲಾಗಿತ್ತು. ಸ್ಫೋಟಕ್ಕೂ ಮುನ್ನ ಉಗ್ರ ಉಮರ್, ಕೆಂಪುಕೋಟೆ ಪಾರ್ಕಿಂಗ್ ಜಾಗದಲ್ಲಿ ಕಾರಿನ ಒಳಗೆ ಮೂರು ಗಂಟೆಗಳ ಕಾಲ ಕುಳಿತು ಸ್ಪೋಟಕ ಅಳವಡಿಸಿದ್ದ ಎಂದು ತಿಳಿದುಬಂದಿದೆ.

ಚಿತ್ರದುರ್ಗ ಬಸ್ ಅಪಘಾತ:
2025 ಡಿಸೆಂಬರ್ 25ರಂದು ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಗೆ ತೆರಳುತ್ತಿದ್ದ ಸೀಬರ್ಡ್ ಬಸ್ಸಿಗೆ ಬೆಂಕಿ ತಗುಲಿ 7 ಜನ ಸಾವನ್ನಪ್ಪಿದ್ದರು. ಕ್ರಿಸ್ಮಸ್ ರಜೆ ಹಿನ್ನೆಲೆ ಹೆಚ್ಚಿನ ಜನ ಬೆಂಗಳೂರಿನಿಂದ ಗೋಕರ್ಣಕ್ಕೆ ಈ ಬಸ್ಸಿನ ಮೂಲಕ ತೆರಳುತ್ತಿದ್ದರು. ಬಸ್ಸು ಚಿತ್ರದುರ್ಗದ (Chitradurga Bus Fire) ಹಿರಿಯೂರು ಬಳಿ ಆಗಮಿಸುತ್ತಿದ್ದಂತೆ ಲಾರಿಯೊಂದು ಡಿವೈಡರ್ ಹಾರಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ಸಿನಲ್ಲಿದ್ದ 33 ಜನರ ಪೈಕಿ ಆರು ಜನ ಸ್ಥಳದಲ್ಲೇ ಸಜೀವ ದಹನವಾಗಿದ್ದರು, ಬಳಿಕ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸ್ಸಿನ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ದುರಂತಗಳೆಂದರೆ ಹೀಗೆ ಮುನ್ನೆಚ್ಚರಿಕೆ ನೀಡಿದರೂ ನೀಡದೆ ಬಂದರೂ ಸಾವು ನೋವು ಲೆಕ್ಕಕ್ಕೆ ಸಿಗುವುದೇ ಇಲ್ಲ. ಜೀವನವೇ ಅಷ್ಟೇ… ಜನನ ಉಚಿತ ಸಾವು ಖಚಿತ ಎಂಬಂತೆ ಹುಟ್ಟಿದವನು ಸಾಯಲೇಬೇಕು. ಇಂದಾದರೂ ನಾಳೆಯಾದರೂ ಅದು ನಿಜವೇ. ಭೂಮಿಯ ಮೇಲೆ ಇಂದಿನ ದಿನ ನಿನಗೆ ಕೊನೆಯ ದಿನವಾದರೆ ನೀನೆಲ್ಲಿದ್ದರೂ ಹೇಗಿದ್ದರೂ ಸಾಯುವುದಂತೂ ಖಚಿತವೇ. ಆದರೆ 2025 ಹಲವು ದುರಂತಗಳಿಗೆ ಹಲವು ಜನರ ಸಾವಿಗೆ ಸಾಕ್ಷಿಯಾಗಿದೆ. ಮುಂಬರುವ 2026 ಸುಖ ಕೊಡದೆ ಹೋದರೂ ನೋವಿಗೆ ದಾರಿ ಮಾಡಿಕೊಡದಿರಲಿ ಅಷ್ಟೇ.

