ವಿಜಯಪುರ: ರಾಜ್ಯದಲ್ಲಿ ಆಡಳಿತ ಕುಸಿದು ಹೋಗಿದೆ. ಕುರ್ಚಿ ಕಾದಾಟಕ್ಕೆ ಕಾಂಗ್ರೆಸ್ನಲ್ಲಿ ಮೂರು ಗುಂಪಾಗಿ ಹೋರಾಟ ಮಾಡ್ತಿವೆ. ಕುದುರೆ ವ್ಯಾಪಾರ ಜೋರಾಗಿದೆ ಎಂದು ಸಂಸದ ಗೋವಿಂದ ಕಾರಜೋಳ (Govind Karajol) ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಿಷ್ಕ್ರಿಯವಾಗಿದೆ, ರೈತರು ಕಂಗಾಲಾಗಿದ್ದಾರೆ. ಮೆಕ್ಕೆಜೋಳ ಬೆಳೆದ ರೈತರು ಖರೀದಿ ಕೇಂದ್ರ, ದರ ಸಿಗದೇ ಪರದಾಡ್ತಿದ್ದಾರೆ. ಇಂತಹದ್ರಲ್ಲಿ ಕುರ್ಚಿಗಾಗಿ ಕಾಂಗ್ರೆಸ್ನವರು ಪ್ರತಿನಿತ್ಯ ಹೋರಾಟ ಮಾಡ್ತಿದ್ದಾರೆ. ಸಿಎಂ ಸ್ಥಾನಕ್ಕಾಗಿ ಕುದುರೆ ವ್ಯಾಪಾರ ಜೋರಾಗಿದೆ. ಶಾಸಕರಿಗೆ 50 ಕೋಟಿ ರೂ. ಆಫರ್ ಬಗ್ಗೆ ಮಾತಾಗಿದೆ. ಈ ವಾರದಲ್ಲಿ ನೂರು ಕೋಟಿ ತಲುಪಲಿದೆ ಎಂದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಹಾಯಕರಾಗಿದ್ದಾರೆ. ತಾವೇ ಅಸಹಾಯಕತೆ ತೋಡಿಕೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ದಲಿತರನ್ನ ಯಾವ ರೀತಿ ನಡೆಸಿಕೊಳ್ತಿದ್ದಾರೆ ಗೊತ್ತಾಗ್ತಿದೆ. ಕಾಂಗ್ರೆಸ್ನಲ್ಲಿ ಸೋನಿಯಾ ಗಾಂಧಿ, ರಾಹುಲ್, ಪ್ರಿಯಂಕಾ ಸರ್ವಾಧಿಕಾರಿಯಾಗಿದ್ದಾರೆ. ದಲಿತರು ಕಾಂಗ್ರೆಸ್ನ ಗುಲಾಮಗಿರಿ ಬಿಡಬೇಕು. ಅಸ್ಪೃಶ್ಯರನ್ನ ಮನುಷ್ಯರೆಂದು ಕಾಂಗ್ರೆಸ್ ತಿಳಿದುಕೊಂಡಿಲ್ಲ. ವಂಶಪಾರಂಪರ್ಯ ಆಡಳಿತ ದೇಶದ ದಲಿತರನ್ನ ಗೌರವದಿಂದ ಬಾಳುವಂತೆ ಮಾಡಿಲ್ಲ. ಮುನಿಯಪ್ಪ ಆಗಲಿ ಎಂದು ಪರಮೇಶ್ವರ್, ಪರಮೇಶ್ವರ್ ಹೆಸರು ಮುನಿಯಪ್ಪ ಹೇಳ್ತಿದ್ದಾರೆ. ಇವ್ರ ಹೆಸರನ್ನೇ ಯಾರು ಹೇಳ್ತಿಲ್ಲ, ತಾವು ರೇಸಲ್ಲಿದ್ದೀವಿ ಎಂದು ಹೇಳಿಕೊಳ್ತಿದ್ದಾರೆ. ಇದು ದಲಿತರ ಸ್ವಾಭಿಮಾನಕ್ಕೆ ಧಕ್ಕೆ ಎಂದು ಕಿಡಿಕಾರಿದರು.
ಕಾಂಗ್ರೆಸ್ನವರು ದಲಿತರನ್ನ ಸಿಎಂ ಮಾಡಲ್ಲ, ಬಾಂಡ್ ಮೇಲೆ ಬರೆದು ಕೊಡ್ತೀನಿ. ತೂಕ ಜಾಸ್ತಿ ಇದ್ದವರನ್ನ ಸಿಎಂ ಮಾಡ್ತಾರೆ. ತೂಕ ಯಾರದ್ದು ಜಾಸ್ತಿ ಆಗುತ್ತೆ ಎಂದು ನೋಡ್ತಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಗೊಂದಲ ಬಿಡಬೇಕು. ನೇರವಾಗಿ ರೈತರು, ಪ್ರವಾಹದಿಂದ ಹಾನಿಯಾದವರಿಗೆ ಪರಿಹಾರ ನೀಡಲಿ. ಸಿಎಂ ರಾಜಕಾರಣ ಬಿಟ್ಟು ಪ್ರವಾಹ ಸಂತ್ರಸ್ತರ, ರೈತರ ಸಹಾಯಕ್ಕೆ ಬರಲಿ ಎಂದು ಕರೆಕೊಟ್ಟರು.

