ಹುಬ್ಬಳ್ಳಿ: ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲ್ಲ, ಕಾಂಗ್ರೆಸ್ ಹೈಕಮಾಂಡ್ ಸೂಚನೆ ಕೊಟ್ಟರೂ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ (Jagadish Shetter) ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅವರೇ ಹೈಕಮಾಂಡ್ ಅಲ್ಲ. ಅವರ ಅಸ್ತಿತ್ವ ಸಹ ಇಲ್ಲ. ಹೀಗಾಗಿ, ಸರ್ಕಾರ ಪತನದ ಅಂಚಿನಲ್ಲಿದೆ. ಅಧಿಕಾರದಲ್ಲಿರಿ ಅಂತ ಸಂಗೀತ ನುಡಿಸುತ್ತಿರುತ್ತಾರೆ. ಡಿಕೆ ಮುಖ್ಯಮಂತ್ರಿ ಆಗಬೇಕು ಅನ್ನೋ ಹಠವನ್ನ ಬಿಡೋದಿಲ್ಲ. ಇವರ ಗುದ್ದಾಟಕ್ಕೆ ಸರ್ಕಾರ ಪತನ ಆಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ನಲ್ಲೇ ಕುದುರೆ ವ್ಯಾಪಾರ – ಒಬ್ಬೊಬ್ಬರಿಗೆ 50 ಕೋಟಿ, 1 ಫ್ಲಾಟ್, ಫಾರ್ಚುನರ್ ಕಾರ್ ಆಫರ್ ನಡೀತಿದೆ: ಛಲವಾದಿ ಬಾಂಬ್

ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯ ಕಾರಣ ಎಂಬ ದೇವೇಗೌಡರ ಹೇಳಿಕೆ ಕುರಿತು ಮಾತನಾಡಿ, ಅವರು ಅನುಭವ ಇದ್ದ ವ್ಯಕ್ತಿ. ಜೆಡಿಎಸ್ನಲ್ಲಿ ಸಿದ್ದರಾಮಯ್ಯ ಇದ್ದಾಗ ಅವರನ್ನ ನೋಡಿದವರು. ಆ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಡಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ನೇಚರ್ ನನಗೆ ಗೊತ್ತಿದೆ. ಅಧಿಕಾರಕ್ಕಾಗಿ ಇಂತಹ ಚಟುವಟಿಕೆ ಮಾಡುವ ಉದಾಹರಣೆ ಇವೆ. ಕಾಂಗ್ರೆಸ್ಗೆ ಹೊಸಬರಾಗಿ ಬಂದರು ಸಿದ್ದರಾಮಯ್ಯ. ಅವರನ್ನ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿದೆ. ದೇವೇಗೌಡರು ಹಿರಿಯ ನಾಯಕರು, ಬಹಳಷ್ಟು ನಾಯಕರನ್ನ ಬೆಳೆಸಿದವರು. ಅವರ ಹೇಳಿಕೆಯಲ್ಲಿ ಸತ್ಯಾಂಶ ಇದೆ ಎಂದಿದ್ದಾರೆ. ಇದನ್ನೂ ಓದಿ: ನಾನು ಅಧ್ಯಕ್ಷನಾಗಿದ್ದಾಗ್ಲೂ ಪಕ್ಷ ಅಧಿಕಾರಕ್ಕೆ ಬಂತು, ನಾನೊಬ್ಬನೇ ಅಧಿಕಾರಕ್ಕೆ ತಂದೆ ಅಂತ ಹೇಳಿಕೊಳ್ಳಲಿಲ್ಲ: ಪರಮೇಶ್ವರ್
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವೇ ಇಲ್ಲ. ಯಾರು ಅದರ ಬಗ್ಗೆ ಚರ್ಚೆ ಮಾಡಿಲ್ಲ. ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
