– ಹಾಗಂತ ಅವರು ಬಳಸಿದ ಭಾಷೆಯನ್ನು ಸಮರ್ಥಿಸಿಕೊಳ್ಳಲ್ಲ
ವಿಜಯಪುರ: ಕನ್ನೇರಿ ಶ್ರೀಗಳು (Kanneri Shri) ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಂಡು ಮಾತಾಡಿದ್ದಾರೆ. ಹೀಗಾಗಿ ಅವರಿಗೆ ಜಿಲ್ಲೆಗೆ ನಿರ್ಬಂಧ ಹೇರಿರುವುದು ಸರಿಯಲ್ಲ. ಇನ್ನೂ ಅವರು ಮಾತನಾಡುವಾಗ ಭಾಷೆಯ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕಿತ್ತು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಹೇಳಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನೇರಿ ಶ್ರೀಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಂಡು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರ ಮೇಲೆ ನಿರ್ಬಂಧ ಹೇರಿದ್ದು ಸೂಕ್ತವಲ್ಲ. ಹಾಗಂತ ಕನ್ನೇರಿ ಶ್ರೀ ಬಳಸಿದ ಭಾಷೆಯನ್ನು ಸಮರ್ಥಿಸಿಕೊಳ್ಳಲ್ಲ. ತಮ್ಮ ಭಾಷೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕಿತ್ತು. ಅವರ ವಿಚಾರಧಾರೆ ಸರಿಯಿದೆ. ಆದರೆ ಭಾಷೆಯನ್ನು ಬಳಸುವಾಗ ಸ್ವಲ್ಪ ನಿಯಂತ್ರಣದಲ್ಲಿ ಬಳಸಬೇಕಿತ್ತು ಎಂದರು.ಇದನ್ನೂ ಓದಿ: ಪೋಕ್ಸೋ ಕೇಸ್ | ಡಿ.2ಕ್ಕೆ ಕೋರ್ಟ್ಗೆ ಹಾಜರಾಗಲು BSY ಸೇರಿ 4 ಆರೋಪಿಗಳಿಗೆ ಸಮನ್ಸ್
ಇನ್ನೂ ಬಸವ ಸಂಸ್ಕೃತಿ ರಥಯಾತ್ರೆ ಮೂಲಕ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮ ಮುನ್ನೆಲೆಗೆ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಅನ್ನೋದು 10-20 ವರ್ಷಗಳಿಂದ ಹುಟ್ಟಿಕೊಂಡಿದೆ. ಅದಕ್ಕಿಂತ ಮೊದಲು ಲಿಂಗಾಯತ ಪ್ರತ್ಯೇಕ ಧರ್ಮ ಬೇಕು ಎಂಬ ವಾದ ಎಲ್ಲಿಯೂ ಕೇಳಲು, ನೋಡಲು ಸಿಕ್ಕಿಲ್ಲ. ಅದಕ್ಕೆ ಪ್ರತ್ಯಕ್ಷ ಉದಾಹರಣೆ ಎಂದರೆ ಪ್ರತ್ಯೇಕ ಲಿಂಗಾಯತ ಧರ್ಮ ಹೇಳುವವರ ಶಾಲಾ ದಾಖಲಾತಿಯಲ್ಲಿ ವೀರಶೈವ ಇರೋದು ನೋಡ್ತೀವಿ. ವೀರಶೈವ ಲಿಂಗಾಯತ ಒಂದೇ ಅಂತ ವಾದ ಮಾಡುವವರ ಅನೇಕರ ಸರ್ಟಿಫಿಕೇಟ್ನಲ್ಲಿ ಲಿಂಗಾಯತ ಎಂದಷ್ಟೇ ಇರೋದು ನೋಡ್ತೀವಿ. ಇದರಿಂದ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
20 ವರ್ಷಗಳ ಹಿಂದೆ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂಬ ಭೇದಭಾವ ಕಲ್ಪನೆ ಯಾರ ತಲೆಯಲ್ಲಿ ಇರಲಿಲ್ಲ. ಇತಿಹಾಸ, ಸಾಹಿತ್ಯ, ಪುರಾವೆ ಯಾರು ತಲೆಯಲ್ಲೂ ಇರಲಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ವಿಚಾರಕ್ಕೆ ಯಾವುದೇ ತಳಹದಿ ಇಲ್ಲ. ಧರ್ಮದಲ್ಲಿ ಗೊಂದಲ, ಇಬ್ಭಾಗ, ಬೇಧವನ್ನು ಮಾಡಬಾರದು. ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮ ಎಂದು ಹೇಳಿಕೊಂಡು ಹೊರಟಿದ್ದಾರಲ್ಲ. ಆದ್ರೆ ಬಸವಣ್ಣನವರು ಮಾಡಿರೋ ಸಮಾಜ ಸುಧಾರಣೆ ಬಗ್ಗೆ, ವೀರಶೈವ ಲಿಂಗಾಯತ ಧರ್ಮದಲ್ಲಿ ಅವರು ಮೂಡಿಸಿದ ಕ್ರಾಂತಿ ಬಗ್ಗೆ ನಾವು ಎಂದಿಗೂ ಬಹಳ ಗೌರವದಿಂದ ಅಭಿನಂದನಾ ದೃಷ್ಟಿಯಿಂದ ನೋಡುತ್ತೇವೆ. ಎಂದೂ ಕೂಡಾ ವಿರೋಧ ಮಾಡುವ ಪ್ರಶ್ನೆಯೇ ಇಲ್ಲ. ಆದ್ರೆ ಬಸವಣ್ಣನವರು ತಮ್ಮ ವಚನದಲ್ಲಿ ಲಿಂಗಾಯತ ಎಂಬ ಶಬ್ದ ಬಳಸಿಲ್ಲ. ಯಾವುದೇ ವಚನ ತೆಗೆದು ನೋಡಿ ಲಿಂಗಾಯತ ಎಂಬ ಪದ ಬಳಸಿಲ್ಲ. ಆದ್ರೆ ಒಂದು ವಚನದಲ್ಲಿ ಬಸವಣ್ಣನವರು ನಿಜ ವೀರಶೈವನಾದೆ ಎಂದು ಹೇಳಿಕೊಂಡಿದ್ದಾರೆ. ಅವರೇ ವೀರಶೈವನಾದೆ ಎಂದು ಹೇಳಿಕೊಂಡಿದ್ದಾರೆ ಅಂದ್ರೆ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಬಸವಣ್ಣನವರು ಮಾಡಿದ್ದಾರೆ ಎಂದು ಹೇಳೋದು ಎಷ್ಟು ಸೂಕ್ತ ಎಂದರು.ಇದನ್ನೂ ಓದಿ: ಶಬರಿಮಲೆಯಲ್ಲಿ ಭಾರೀ ಜನಸ್ತೋಮ – ಅಯ್ಯಪ್ಪನ ದರ್ಶನಕ್ಕೆ ಬರುತ್ತಿದ್ದ ವೃದ್ಧೆ ಸಾವು!

