– ಒಂದೂವರೆ ಕಿ.ಮೀ. ಸಾಗಲಿದೆ ಗಣವೇಷಧಾರಿಗಳ ಹೆಜ್ಜೆ
ಕಲಬುರಗಿ: ಸಾಕಷ್ಟು ಜಿದ್ದಾ-ಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಗಿದ್ದ ಚಿತ್ತಾಪುರದ ಆರ್ಎಸ್ಎಸ್ ಪಥಸಂಚಲನ (Chittapura RSS Route March) ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇಂದು ಪಥಸಂಚಲನಕ್ಕೆ ಅನುಮತಿ ಸಿಕ್ಕಿರುವ ಹಿನ್ನಲೆ ಇಡೀ ರಾಜ್ಯದ ಚಿತ್ತ ಮತ್ತೊಮ್ಮೆ ಚಿತ್ತಾಪುರದತ್ತ ನೆಟ್ಟಿದೆ. ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕ್ಷೇತ್ರದಲ್ಲಿ ನಡೆಯಲಿದೆ.
ಕಳೆದೊಂದು ತಿಂಗಳಿಂದ ರಾಜ್ಯವಲ್ಲದೇ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡ್ಡಿದ್ದ ಆರ್ಎಸ್ಎಸ್ ಪಥಸಂಚಲನಕ್ಕೆ ಇಂದು ಮೂಹರ್ತ ನಿಗದಿಯಾಗಿದೆ. ಹೈಕೋರ್ಟ್ನಲ್ಲಿ ಆರ್ಎಸ್ಎಸ್ ಪರೇಡ್ಗೆ ಗ್ರಿನ್ ಸಿಗ್ನಲ್ ಸಿಕ್ಕಿದ್ದು, ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಸಿದ್ಧತೆ ನಡೆದಿದೆ. ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರದಲ್ಲಿ ಪರೇಡ್ಗೆ ಸಕಲ ಸಿದ್ದತೆ ನಡೆದಿದೆ.

ಇಂದು ಪಥಸಂಚಲನಕ್ಕೆ ಅವಕಾಶ ಸಿಕ್ಕ ಹಿನ್ನೆಲೆ ಮಧ್ಯಾಹ್ನ 3:30ಕ್ಕೆ 300 ಜನ ಗಣವೇಷಧಾರಿಗಳು ಹೆಜ್ಜೆ ಹಾಕಲಿದ್ದಾರೆ. ಈ ಒಂದು ಹೈವೋಲ್ಟೇಜ್ ಪಥಸಂಚಲನದ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಚಿತ್ತಾಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. 50 ಜನ ಬ್ಯಾಂಡ್ ವಾದಕರು ಸೇರಿದಂತೆ 350 ಜನ ಗಣವೇಶಧಾರಿಗಳು ಪರೇಡ್ನಲ್ಲಿ ಭಾಗಿಯಾಗಲಿದ್ದಾರೆ. ಒಂದೂವರೆ ಕಿಲೋಮೀಟರ್ ಪಥಸಂಚಲನದಲ್ಲಿ ಹೆಜ್ಜೆ ಹಾಕಲಿದ್ದಾರೆ.
ಈಗಾಗಲೇ ಆರ್ಎಸ್ಎಸ್ ಸಕಲ ಸಿದ್ದತೆ ಮಾಡಿಕೊಂಡಿದೆ. ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಅಂಬೇಡ್ಕರ್ ವೃತ್ತ, ಕೆನರಾ ಬ್ಯಾಂಕ್ ಸರ್ಕಲ್ ಮಾರ್ಗವಾಗಿ ಎಪಿಎಂಸಿವರೆಗೂ ಪಥಸಂಚಲನ ನಡೆಯುತ್ತೆ.

ಪರೇಡ್ ಮಾರ್ಗದಲ್ಲಿ 800ಕ್ಕೂ ಹೆಚ್ಚು ಪೊಲೀಸರ ಭದ್ರತೆ
ಆರೆಸ್ಸೆಸ್ ಪರೇಡ್ಗೆ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಸಂಘ ಪರಿವಾರ ಕೋರ್ಟ್ ಮೆಟ್ಟಿಲೆರಿತ್ತು. ಆರ್ಎಸ್ಎಸ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಭೀಮ್ ಆರ್ಮಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸಂಘಟನೆಗಳು ತಾವೂ ಕೂಡ ಪಥಸಂಚಲನ ಮಾಡ್ತೇವೆ. ನಮಗೂ ಅವಕಾಶ ನೀಡಿ ಅಂತ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು. ಇದ್ರಿಂದ ದೊಡ್ಡ ಮಟ್ಟದ ಜಿದ್ದಾಜಿದ್ದಿಯೇ ನಡೆದಿತ್ತು. ಆರ್ಎಸ್ಎಸ್ ಲಾಠಿ ಬಿಟ್ಟು ಪಥಸಂಚಲನ ಮಾಡಲಿ ಅಂತ ದಲಿತ ಸಂಘಟನೆಗಳು ಪಟ್ಟು ಹಿಡಿದಿದ್ದರಿಂದ ಈ ಪಥಸಂಚಲನ ಫೈಟ್ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಸದ್ಯ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಸುರ್ಧಿರ್ಘ ವಾದ ವಿವಾದಗಳ ನಂತರ ಜಿಲ್ಲಾಡಳಿತವೇ ಇಂದು ಪಥಸಂಚಲನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಎಸ್ಪಿ ನೈತೃತ್ವದಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಪೊಲೀಸರು ರೂಟ್ಮಾರ್ಚ್ ಮಾಡಿದ್ದಾರೆ. ಚಿತ್ತಾಪುರದಲ್ಲಿ ಪಥಸಂಚಲನ ನಡೆಯುವ ಬಜಾಜ್ ಕಲ್ಯಾಣ ಮಂಟಪದ ಬಳಿ ತಲಾ ಒಂದು ಕೆಎಸ್ಆರ್ಪಿ, ಡಿಎಆರ್ ತುಕಡಿ ಸೇರಿ 650 ಜನ ಪೊಲೀಸರು ಹಾಗೂ 250 ಜನ ಹೋಮ್ ಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಲಬುರಗಿ ಎಸ್ಪಿ, ಹೆಚ್ಚುವರಿ ಎಸ್ಪಿ ಹಾಗೂ ಡಿವೈಎಸ್ಪಿ ನೈತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ. ಇನ್ನು ಪಥಸಂಚಲನ ಹಿನ್ನೆಲೆ ಚಿತ್ತಾಪುರ ಪಟ್ಟಣದಾದ್ಯಂತ ಸಿಸಿಟಿವಿ ಕ್ಯಾಮೆರಾ ಹಾಗೂ ಡ್ರೋನ್ ಕ್ಯಾಮೆರಾ ಕೂಡ ಬಳಕೆ ಮಾಡಲಾಗುತ್ತಿದೆ.
ಚಿತ್ತಾಪುರದಲ್ಲಿ ಪಥಸಂಚಲನ ನಡೆಯುವ ಮಾರ್ಗದಲ್ಲಿ ಹೆಜ್ಜೆ ಹೆಜ್ಜೆಗೂ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ. ಈಗಾಗಲೇ ಸರ್ವಧರ್ಮಗಳ ಮುಖಂಡರ ಜೊತೆ ಶಾಂತಿ ಸಭೆ ಮಾಡಿರೋ ಪೊಲೀಸರು ಶಾಂತಿಯುತ ಪಥಸಂಚಲನಕ್ಕೆ ಶ್ರಮಿಸುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಸಾಕಷ್ಟು ರಾಜಕೀಯ ಜಟಾಪಟಿಗೆ ಕಾರಣವಾಗಿದ್ದ ಪಥಸಂಚಲನ ಅಂತೂ ನಡೆಯಲಿದ್ದು ಕಾದು ನೋಡಬೇಕಿದೆ.

