– ಮುಂದಿನ ವರ್ಷದೊಳಗೆ ಅನುಭವ ಮಂಟಪ ನಿರ್ಮಾಣ ಪೂರ್ಣ
– ನಾವೆಲ್ರೂ ಶೂದ್ರರು, ಜಾತಿಯಿಂದ ಯಾರೂ ಶ್ರೇಷ್ಠರಾಗಲ್ಲ; ಸಿಎಂ
ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಕ್ಕೆ (Namma Metro Station) ಬಸವಣ್ಣ ಅವರ ಹೆಸರು ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದರು.
ವಿಶ್ವಗುರು ಬಸವಣ್ಣ ಅವರನ್ನು ʻಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ‘ಬಸವ ಸಂಸ್ಕೃತಿ ಅಭಿಯಾನ-2025’ರ ಸಮಾರೋಪ ಸಮಾರಂಭದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿಧ್ಯದಲ್ಲಿ ಲಿಂಗಾಯತ ಧರ್ಮ (Lingayat religion) ಚಳವಳಿಯ ಪ್ರಮುಖರು, ಪ್ರಗತಿಪರ ಚಿಂತಕರು, ಹೋರಾಟಗಾರರು ಹಾಗೂ 2 ಲಕ್ಷಕ್ಕೂ ಅಧಿಕ ಶರಣಾನುಯಾಯಿಗಳು ಉಪಸ್ಥಿತರಿದ್ದರು.
ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ “ಬಸವ ಮೆಟ್ರೋ” ಎಂದು ಘೋಷಿಸಿ ಬಿಡುತ್ತಿದ್ದೆ.
ನಮ್ಮಲ್ಲಿ ಅನೇಕ ಜಾತಿ, ಅನೇಕ ಧರ್ಮಗಳಿವೆ. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವವರು ನಾವು. ಶೂದ್ರರು ಜಾತಿ… pic.twitter.com/k5yUD34UaA
— Siddaramaiah (@siddaramaiah) October 5, 2025
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಎಂ, ಮುಂದುವರಿದು. ಮುಂದಿನ ವರ್ಷದ ಒಳಗೆ ಅನುಭವ ಮಂಟಪದ ನಿರ್ಮಾಣ ಪೂರ್ತಿ ಮಾಡ್ತೇವೆ. ವಚನ ವಿವಿ ಮಾಡುವ ಬೇಡಿಕೆ ಕೊಟ್ಟಿದ್ದೀರಿ, ಮುಂದಿನ ವರ್ಷದಿಂದ ವಚನ ವಿಶ್ವವಿದ್ಯಾಲಯ ಮಾಡ್ತೇವೆ. ನಾನು ರಾಜಕೀಯದಲ್ಲಿ ಏನು ಮಾತು ಕೊಡ್ತೀನೋ, ಆ ಮಾತು ನಡೆಸಿಕೊಡ್ತೇನೆ ಎಂದು ಆಶ್ವಾಸನೆ ನೀಡಿದರು.
ಸಿಎಂ ಭಾಷಣ ಮಾಡುವ ವೇಳೆಯೇ ನಮ್ಮ ಮೆಟ್ರೋಗೆ ಬಸವಣ್ಣ ಹೆಸರು ಇಡಲು ಆಗ್ರಹ ಕೇಳಿಬಂದಿತು, ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮೆಟ್ರೋ ನಿಲ್ದಾಣಕ್ಕೆ ನಮ್ಮ ಪಾಲು ಜಾಸ್ತಿ ಇರಬಹುದು. ಆದ್ರೆ ನಮ್ಮ ಮೆಟ್ರೋಗೆ ಬಸವಣ್ಣ ಹೆಸರು ಇಡುವುದು ನಮ್ಮ ಕೈಯಲ್ಲಿಲ್ಲ, ಕೇಂದ್ರ ಸರ್ಕಾರಕ್ಕೆ ಇದರ ಶಿಫಾರಸು ಮಾಡ್ತೇವೆ. ನಮ್ಮದೇ ಸರ್ಕಾರದ ವ್ಯಾಪ್ತಿಯಲ್ಲಿ ಇದ್ದಿದ್ರೆ ಈ ಸ್ಥಳದಲ್ಲೇ ಒಪ್ಪಿಗೆ ಕೊಡ್ತಿದ್ದೆ ಎಂದು ಹೇಳಿದರು.
ನಾನು ಬಸವಣ್ಣನ ಅಭಿಮಾನಿ, ಅವರ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ, ಬದ್ಧತೆ ಇಟ್ಟುಕೊಂಡವನು. ಆ ಕಾರಣಕ್ಕೆ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಅಂತ ನಮ್ಮ ಸರ್ಕಾರ ಘೋಷಣೆ ಮಾಡಿದೆ. ಆ ಮೂಲಕ ಇಡೀ ಸರ್ಕಾರ ಬಸವಣ್ಣರಿಗೆ ಗೌರವ ಸೂಚಿಸಿದೆ ಎಂದು ತಿಳಿಸಿದರು.
ಈ ಸಮಾಜದಲ್ಲಿ ಜಾತಿ ವ್ಯವಸ್ಥೆ, ಮೇಲುಕೀಳು ಇರೋವರೆಗೂ ಬಸವಣ್ಣನ ತತ್ವಗಳು ಅತ್ಯಂತ ಪ್ರಸ್ತುತ. ನಾವು ಮೂಲತಃ ಮಾನವರು, ಆಮೇಲೆ ಭಾರತೀಯರು. ನಾನು ಕಾನೂನು ವಿದ್ಯಾರ್ಥಿ ಆಗಿದ್ದಾಗಿನಿಂದ ಈವರೆಗೂ ಬಸವಣ್ಣನ ಅನುಯಾಯಿ. ಸಂವಿಧಾನದಲ್ಲಿ ಬಸವಣ್ಣ ವಿಚಾರಗಳನ್ನು ಅಳವಡಿಸಿದ್ದಾರೆ. ಬಸವ ವಿಚಾರಗಳು, ಸಂವಿಧಾನದ ವಿಚಾರಗಳು ಹೆಚ್ಚೂ ಕಡಿಮೆ ಒಂದೇ ಆಗಿವೆ ಎಂದು ಬಣ್ಣಿಸಿದರು.
ನಾವೆಲ್ರೂ ಒಂದೇ, ನಾವೆಲ್ರೂ ಶೂದ್ರರು
ನಾನು ಜಾಸ್ತಿ ಭಾಷಣ ಮಾಡಲು ಹೋಗಲ್ಲ. ನಾನು ಏನೇನೋ ಮಾತಾಡಿದ್ರೆ ಅದು ವಿವಾದ ಆಗಬಹುದು. ನಾವೆಲ್ರೂ ಶೂದ್ರರು, ಚತುರ್ವರ್ಣದಲ್ಲಿ ನಾಲ್ಕನೇ ಸ್ಥಾನ. ಬ್ರಾಹ್ಮಣರು, ವೈಶ್ಯರು, ಕ್ಷತ್ರಿಯರು, ಶೂದ್ರರು ಈಗ ಪಂಚಮರು ಅಂತ ಒಂದಿದೆ. ನಾವೆಲ್ರೂ ಒಂದೇ, ನಾವೆಲ್ರೂ ಶೂದ್ರರು. ನಮ್ಮ ಸಮಾಜದಲ್ಲಿ ವೈರುಧ್ಯತೆ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಅಸಮಾನತೆ ಇದೆ. ಇವನ್ನು ಹೋಗಲಾಡಿಸುವ ತನಕ ನಿಜವಾದ ಸ್ವಾತಂತ್ರ್ಯ ಬಂದಂತಾಗಲ್ಲ. ಅಸಮಾನತೆಗೆ ಬೆಂಬಲ ಕೊಡೋರು ಸ್ವಾತಂತ್ರ್ಯದ ಸೌಧ ಕೆಡವೋರು. ಈ ಎಚ್ಚರಿಕೆಯನ್ನ ಅಂಬೇಡ್ಕರ್ ಆವತ್ತೇ ಕೊಟ್ಟಿದ್ರು ಎಂದು ತಿಳಿಸಿದರು.
ಜಾತಿಯಿಂದ ಯಾರೂ ಶ್ರೇಷ್ಠರಾಗಲ್ಲ
2013 ಮೇ 13 ರಂದು ನಾನು ಮೊದಲ ಸಲ ಸಿಎಂ ಆದೆ, ಆವತ್ತು ಬಸವ ಜಯಂತಿ ಇತ್ತು. ನಾನು ಬಸವ ಜಯಂತಿ ದಿನ ಪ್ರಮಾಣವಚನ ತಗೋತೇನೆ ಅಂತ ರಾಜ್ಯಪಾಲರಿಗೆ ಹೇಳಿದೆ. ಅದೇ ದಿನ ಪ್ರಮಾಣ ಸ್ವೀಕರಿಸಿದೆ. ಆವತ್ತೇ ಬಸವಾದಿ ಶರಣರ ಹಾದಿಯಲ್ಲಿ ಸರ್ಕಾರ ನಡೆಸುವ ತೀರ್ಮಾನ ಮಾಡಿದೆ. ಅದಕ್ಕೋಸ್ಕರವೇ ಅನೇಕ ಭಾಗ್ಯಗಳನ್ನು ನಮ್ಮ ಸರ್ಕಾರ ಕೊಡ್ತು, ಎಲ್ರಿಗೂ ಸಮಾನ ಅವಕಾಶ ಇರಬೇಕು. ನಾವು ಈ ಜಾತಿ ಆ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿದ್ವಾ? ಕುರುಬರ ಜಾತಿಯಲ್ಲಿ ಹುಟ್ಟಲು ನಾನೇನು ಅರ್ಜಿ ಹಾಕಿದ್ನಾ? ಕುರುಬ ಜಾತಿಯಿತ್ತು ಹುಟ್ಟಿದೆ. ಜಾತಿಯಿಂದ ಯಾರೂ ಜ್ಞಾನಿ ಆಗಲ್ಲ, ಜಾತಿಯಿಂದ ಯಾರೂ ಶ್ರೇಷ್ಠರಾಗಲ್ಲ. ಏಕೆಂದ್ರೆ ಜ್ಞಾನ ಯಾರ ಸ್ವತ್ತೂ ಅಲ್ಲ, ಅವಕಾಶಗಳು ಸಿಗಬೇಕು, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು, ಅಸಮಾನತೆ ತೊಲಗಿಸಬೇಕು ಎಂದು ಕರೆ ನೀಡಿದರು.
ನಮ್ಮ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ
ಮುಂದುವರಿದು… ಸಮಾಜದಲ್ಲಿ ಸಹಿಷ್ಣುತೆ, ಸಹಬಾಳ್ವೆ ಬೆಳೆಸುವ ಪ್ರಯತ್ನ ಎಲ್ಲರೂ ಮಾಡಬೇಕು. ಧರ್ಮದ ವಿಚಾರದಲ್ಲಿ ಅನೇಕರು ದಿಕ್ಕು ತಪ್ಪಿಸುವ ಕೆಲಸ ಮಾಡ್ತಾರೆ, ನಾವು ಎಚ್ಚರದಿಂದಿರಬೇಕು. ಮುಂದುವರೆದ ಜಾತಿಗಳು ಸಮಾವೇಶ ಮಾಡಿದ್ರೆ ಅದು ಜಾತಿ ಸಂಘಟನೆ, ಹಿಂದುಳಿದ ಜಾತಿಗಳು ಸಮಾವೇಶ ಮಾಡಿದರೆ ಅದು ಸಮಾನತೆಯ ಸಂಘಟನೆ. ನಮ್ಮದು ಜಡತ್ವದಿಂದ ಕೂಡಿದ ಜಾತಿ ವ್ಯವಸ್ಥೆ, ನಮ್ಮ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಅದಕ್ಕಾಗಿಯೇ ಬಸವಣ್ಣ ಹೊಸ ಧರ್ಮವನ್ನೇ ಹುಟ್ಟು ಹಾಕಿದರು. ಆದ್ರೆ ಜಾತಿ ವ್ಯವಸ್ಥೆ ಹಾಗೇ ಇದೆ, ಇದನ್ನ ತೊಡೆದುಹಾಕಿ ಸಮ ಸಮಾಜ ನಿರ್ಮಾಣ ಮಾಡಬೇಕು. ಸಮಾಜ ಬದಲಾವಣೆಯಾಗಲು ಬಸವಣ್ಣನ ವಿಚಾರ ಪಾಲಿಸಬೇಕು ಎಂದು ಸಲಹೆ ನೀಡಿದರು.