– ಕಾನೂನು, ಖಾಕಿ ನನ್ನನ್ನು ಏನು ಮಾಡಲಾಗುವುದಿಲ್ಲ ಅಂತ ದರ್ಪ ಮೆರೆದ ಗಂಡ
ಬೆಂಗಳೂರು: ದೇಶದಲ್ಲಿ ತ್ರಿವಳಿ ತಲಾಖ್ (Triple Talaq) ನಿಷೇಧವಿದ್ದರೂ ಚಂದ್ರಲೇಔಟ್ನ ಗಂಗೊಂಡನಹಳ್ಳಿಯ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ನಡೆದಿದೆ.
ತ್ರಿವಳಿ ತಲಾಖ್ ನಿಷೇಧ ಬಳಿಕವೂ ವ್ಯಕ್ತಿ ತನ್ನ ಹೆಂಡತಿಗೆ ಫೋನ್ ಮಾಡಿ ಮೂರು ಬಾರಿ ತಲಾಖ್ ಎಂದು ಉಚ್ಛರಿಸಿ ಕರೆ ಕಟ್ ಮಾಡಿದ್ದಾನೆ. ಇಲ್ಲಿಗೆ ಎಂಟು ವರ್ಷದ ದಾಂಪತ್ಯ ಜೀವನ ಕೇವಲ 10 ಸೆಕೆಂಡ್ನಲ್ಲಿ ಮುರಿದು ಬಿದ್ದಿದೆ. ಹೊಸ ಕಾನೂನಿನ ಬಳಿಕವೂ ಬದುಕು ಅಂತ್ಯದ ಬಗ್ಗೆ ಆತಂಕದಿಂದ ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ. ಇತ್ತ ವಿಚ್ಛೇದನ ನೀಡಿದ ಪತಿ ಕಾನೂನು, ಖಾಕಿ ಏನು ಮಾಡಲ್ಲವೆಂದು ಹೆಂಡತಿಗೆ ಅವಾಜ್ ಹಾಕಿದ್ದಾನೆ. ಇದನ್ನೂ ಓದಿ: ತ್ರಿವಳಿ ತಲಾಖ್ ಪದ್ಧತಿಯಿಂದ ಮುಸ್ಲಿಂ ಮಹಿಳೆಯರ ಸ್ಥಿತಿ ದಯನೀಯವಾಗಿದೆ: ಕೇಂದ್ರ
ಶಾಬಜ್ ಅಲಿ ಎಂಟು ವರ್ಷದ ಹಿಂದೆ ಯುವತಿಯೊಬ್ಬಳ್ಳನ್ನು ಮದುವೆಯಾಗಿದ್ದ. ಹೆಂಡತಿ ಜೊತೆ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದ. ಮಕ್ಕಳಾಗಿಲ್ಲ ಅಂತ ಆಗಾಗ ಹೆಂಡತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ. ಐದು ಮಾಂಸದ ಅಂಗಡಿಗಳನ್ನು ಇಟ್ಟುಕೊಂಡು ಶಾಬಜ್ ವ್ಯಾಪಾರ ಮಾಡುತ್ತಿದ್ದ. ‘ಅಂಗಡಿಯನ್ನ ಸ್ವಚ್ಛವಾಗಿ ಇಟ್ಟುಕೊಳ್ಳಿ ಅಂತ ಹೇಳಿದ್ದಕ್ಕೆ ಕೋಪಗೊಂಡು ದ್ವೇಷ ಬೆಳೆಸಿದ್ದಾನೆ’ ಅಂತ ಮಾವ ಆರೋಪಿಸಿದ್ದಾರೆ. ತ್ರಿವಳಿ ತಲಾಖ್ ನಿಷೇಧ ಬಳಿಕವೂ ನನ್ನ ಮಗಳ ಜೀವನ ಹಾಳಾಯ್ತು. ಕಾನೂನು ಹೋರಾಟ ಮುಂದುವರಿಸ್ತೀವಿ ಅಂತ ಸಂತ್ರಸ್ತೆ ತಂದೆ ತಿಳಿಸಿದ್ದಾರೆ.
ಒಂದು ವರ್ಷದ ಹಿಂದೆ ಇನ್ನೊಂದು ಮದುವೆಯಾಗಿದ್ದನಂತೆ. ಆ ಮಹಿಳೆಗೂ ತಲಾಖ್ ನೀಡಿ, ಇದೀಗಾ ಪತ್ನಿಗೂ ತಲಾಖ್ ನೀಡಿದ್ದಾನೆ. ಇಸ್ಲಾಂ ಧರ್ಮದ ಮಸೀದಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಾಯ್ತು. ಈ ಸಭೆಯಲ್ಲೂ ತಲಾಖ್ ಸ್ವೀಕಾರ ಆಗಿದೆ ಎಂದಿದ್ದಾರೆ. ಸಂತ್ರಸ್ತೆ ಸಂಬಂಧಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಶಾಬಜ್ ಅಲಿ ಕಡೆಯವ್ರು ಮಹಿಳೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಮುಸ್ಲಿಂ ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯದಿಂದ ಮುಕ್ತಿ ಕಲ್ಪಿಸಲು ತ್ರಿವಳಿ ತಲಾಖ್ ನಿಷೇಧ ಕಾಯಿದೆ ನೆರವಾಗಿದೆ. ಭಾರತದಲ್ಲಿ ತ್ರಿವಳಿ ತಲಾಖ್ (ತ್ವರಿತ ತಲಾಖ್) ನಿಷೇಧವು 2019 ರ ಕಾಯ್ದೆಯಿಂದ ಕಾನೂನುಬದ್ಧವಾಗಿದ್ದು, ತ್ವರಿತ ವಿಚ್ಛೇದನವನ್ನು ಅಪರಾಧ ಎಂದು ಘೋಷಿಸಲಾಗಿದೆ. 2017 ರಲ್ಲಿ ಸುಪ್ರೀಂ ಕೋರ್ಟ್ ತಲಾಖ್ನ್ನು ಅಸಾಂವಿಧಾನಿಕ ಎಂದು ಘೋಷಿಸಿತು. ಇದು ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಮತ್ತು ತ್ವರಿತ ವಿಚ್ಛೇದನದ ಪದ್ಧತಿಯನ್ನು ಕೊನೆಗೊಳಿಸಲು ಕೈಗೊಂಡ ಒಂದು ಕ್ರಮವಾಗಿದೆ. ಇದನ್ನೂ ಓದಿ: ತ್ರಿವಳಿ ತಲಾಖ್ ನಿಷೇಧ, ವಿಚ್ಛೇದನಕ್ಕೆ ಏಕರೂಪದ ಕಾನೂನಿಗಾಗಿ ಸುಪ್ರೀಂಗೆ ಮುಸ್ಲಿಂ ಮಹಿಳೆ ಮನವಿ
ಅಪರಾಧ ಏನು? ಶಿಕ್ಷೆ ಪ್ರಮಾಣ ಎಷ್ಟು?
ಈ ಕಾಯ್ದೆಯಡಿ ತ್ರಿವಳಿ ತಲಾಖ್ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಮಾತಿನ ಮೂಲಕ, ಬರಹದ ಮೂಲಕ, ಮೆಸೇಜ್, ಇ-ಸಂದೇಶಗಳ ಮೂಲಕ ತಲಾಖ್ ನೀಡಲಾಗ್ತಿತ್ತು. ಇನ್ನು ಈ ನಿಯಮ ಉಲ್ಲಂಘಿಸಿದರೆ, ಗರಿಷ್ಟ ಮೂರು ವರ್ಷದವರೆಗೆ ಜೈಲು ಹಾಗೂ ದಂಡವಿದೆ. ಅಲ್ಲದೇ, ತ್ರಿವಳಿ ತಲಾಖ್ ಸಂತ್ರಸ್ಥೆಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿತ್ತಾಳೆ. ಸಂತ್ರಸ್ತೆಯು ಮಕ್ಕಳನ್ನ ವಶಕ್ಕೆ ಪಡೆಯುವ ಹಕ್ಕು ಹೊಂದಿರುತ್ತಾಳೆ.
ತ್ರಿವಳಿ ತಲಾಖ್ ನಿಷೇಧ ಕಾಯಿದೆಯ ಬಳಿಕವೂ ಈ ವ್ಯಕ್ತಿ ಹೆಂಡತಿಗೆ ತಲಾಖ್ ನೀಡಿದ್ದಾನೆ. ಸದ್ಯ ಮಹಿಳೆ ಹಾಗೂ ಕುಟುಂಬ ಚಂದ್ರಲೇಔಟ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.