ವಿಶ್ವದ ಅತಿ ದೊಡ್ಡ ಆರ್ಥಿಕತೆ ರಾಷ್ಟ್ರಗಳ ಸಾಲಿನಲ್ಲಿ ಭಾರತ ಗಮನಾರ್ಹ ಸ್ಥಾನವನ್ನೇ ಹೊಂದಿದೆ. ಹಲವಾರು ಜಾಗತಿಕ ವಿದ್ಯಮಾನಗಳು, ಸವಾಲುಗಳ ನಡುವೆ ಇದೊಂದು ಸಾಧನೆಯೇ ಸರಿ. ಆದರೆ, ತಲಾ ಆದಾಯ, ಜಿಡಿಪಿ ವಿಚಾರದಲ್ಲಿ ಭಾರತ ಹಿಂದುಳಿದಿದೆ. ಹೆಚ್ಚಿನ ಜನರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ದೈನಂದಿನ ವಹಿವಾಟಿನಲ್ಲಿ ಡಿಜಿಟಲ್ ಪಾವತಿಗೆ ತೆರೆದುಕೊಂಡಿದ್ದಾರೆ. ಜೊತೆಗೆ ಫಿನ್ಟೆಕ್ ಹಣಕಾಸು ಸೇವೆಗಳಿಗೆ ಪ್ರವೇಶಿಸುವುದೂ ಸುಲಭವಾಗಿದೆ. ಹೀಗಿದ್ದರೂ, ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳು (ವಿಶೇಷವಾಗಿ ವರ್ಷಕ್ಕೆ 5 ಲಕ್ಷಕ್ಕಿಂತ ಕಡಿಮೆ ಆದಾಯ ಗಳಿಸುವವರು) ಮತ್ತೊಬ್ಬರಿಂದ ಸಾಲ ಪಡೆಯುವ ಪರಿಪಾಠ ಕಡಿಮೆಯಾಗಿಲ್ಲ. ಸಾಲಗಾರರು ಎಂಬ ಹಣೆಪಟ್ಟಿಯಿಂದ ಮುಕ್ತ ಮಾಡುವುದೇ ಸವಾಲಾಗಿ ಉಳಿದಿದೆ.
ಸಿಎಂಐಇ ಸಮೀಕ್ಷೆಯನ್ನು ಆಧರಿಸಿದ ಪಿರಾಮಲ್ ಎಂಟರ್ಪ್ರೈಸಸ್ನ ವರದಿಯು ಈ ವಿಚಾರವನ್ನು ಬಹಿರಂಗಪಡಿಸಿದೆ. ಈ ಎಂಟರ್ಪ್ರೈಸಸ್ನ ಮುಖ್ಯ ಅರ್ಥಶಾಸ್ತ್ರಜ್ಞ ದೇಬೋಪಮ್ ಚೌಧರಿ ಅವರು, ಬ್ಯಾಂಕಿಂಗ್ ವ್ಯವಸ್ಥೆಗೆ ಜನರ ಪ್ರವೇಶ ಸುಧಾರಿಸಿದೆ. ಆದರೆ, ಸಾಲದ ವಿಚಾರದಲ್ಲಿ ಅಸಮಾನರಾಗಿಯೇ ಉಳಿದಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಲ್ಕೂ ಅಲ್ಲ, ಐದೂ ಅಲ್ಲ; ಭಾರತ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆಯೇ?- ಆರ್ಥಿಕ ತಜ್ಞರು ಹೇಳೋದೇನು?
ಅನೌಪಚಾರಿಕವಾಗಿ ಸಾಲ ಪಡೆಯುವವರೇ ಹೆಚ್ಚು
ಕಡಿಮೆ ಆದಾಯದ ಕುಟುಂಬಗಳಲ್ಲಿ ಅನೌಪಚಾರಿಕ ಸಾಲಗಳೇ ಹೆಚ್ಚಾಗಿವೆ. 2021ರ ಅಂಕಿಅಂಶದಂತೆ ಈ ಕುಟುಂಬಗಳು ಔಪಚಾರಿಕವಾದ ಬ್ಯಾಂಕುಗಳು ಅಥವಾ ಎನ್ಬಿಎಫ್ಸಿ ಗಿಂತ, ಅನೌಪಚಾರಿಕ ಮೂಲಗಳಿಂದಲೇ 2.6 ಪಟ್ಟು ಹೆಚ್ಚು ಸಾಲ ಪಡೆದಿವೆ. ಬ್ರೆಜಿಲ್ನಲ್ಲಿ 0.6 ಮತ್ತು ಯುಎಸ್ ನಲ್ಲಿ ಕೇವಲ 0.27 ಪರ್ಸೆಂಟ್ ಜನರು ಮಾತ್ರ ಅನೌಪಚಾರಿಕವಾಗಿ ಸಾಲ ಪಡೆಯುತ್ತಿದ್ದಾರೆ. ಈ ದೇಶಗಳಿಗೆ ಹೋಲಿಸಿದರೆ ಭಾರತದ ಪ್ರಮಾಣವೇ ಹೆಚ್ಚಿದೆ.
ಸಾಲದ ಲೆಕ್ಕಾಚಾರ ಏನು?
ಆದಾಯದ ಏಣಿಯ ಕೆಳಭಾಗದಲ್ಲಿರುವವರು ಸಾಲದ ವಿಚಾರದಲ್ಲಿ ಚಿಂತಾಜನಕ ಹಂತಕ್ಕೆ ತಲುಪಿದ್ದಾರೆ. ವರ್ಷಕ್ಕೆ 2 ಲಕ್ಷ ರೂ.ಗಿಂತ ಕಡಿಮೆ ಆದಾಯ ಗಳಿಸುವ ಕುಟುಂಬಗಳ ಹಣಕಾಸು ವರ್ಷ 19 ಮತ್ತು 23 ರ ನಡುವೆ ಔಪಚಾರಿಕ ಸಾಲವು ವರ್ಷಕ್ಕೆ 4% ಕ್ಕಿಂತ ಕುಸಿತ ಕಂಡಿದೆ. ಅವರ ಅನೌಪಚಾರಿಕ ಸಾಲವು ಪ್ರತಿ ವರ್ಷ ಸುಮಾರು 6% ರಷ್ಟು ಹೆಚ್ಚಾಗಿದೆ. 2-10 ಲಕ್ಷ ರೂ. ಸಂಪಾದಿಸುವ ಹೆಚ್ಚಿನ ಕುಟುಂಬಗಳು ಔಪಚಾರಿಕ ಮತ್ತು ಅನೌಪಚಾರಿಕ ಸಾಲಗಳೆರಡರತ್ತಲೂ ತಿರುಗುತ್ತಿವೆ. ಆದರೆ, ಬ್ಯಾಂಕ್ಗಳಿಂದ ಹಣದಾಹಿಗಳನ್ನು ಬದಲಾಯಿಸಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಜಪಾನ್ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ
ಬ್ಯಾಂಕ್ ಸಾಲದಿಂದ ದೂರ ಯಾಕೆ?
ಈ ವರ್ಗದ ಸಾಲಗಾರರು ಬ್ಯಾಂಕಿಂಗ್ ವ್ಯವಸ್ಥೆಗೆ ಹೊಂದಿಕೊಳ್ಳುವುದಿಲ್ಲ. ಸ್ಥಿರ ಉದ್ಯೋಗ ಇಲ್ಲದಿರುವುದು, ಪೇಸ್ಲಿಪ್ ಮತ್ತು ಸರಿಯಾದ ಕ್ರೆಡಿಟ್ ವ್ಯವಸ್ಥೆ ಇಲ್ಲದಿರುವುದು ಅವರು ಬ್ಯಾಂಕಿಂಗ್ ಸಾಲದಿಂದ ದೂರ ಇರಲು ಪ್ರಮುಖ ಕಾರಣವಾಗಿದೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸಾಕಷ್ಟು ಮಂದಿ ಕೆಲಸಗಳನ್ನು ಬಿಟ್ಟು ತಮ್ಮ ಊರುಗಳಿಗೆ ಮರಳಿದರು. ಇದರಿಂದ ಕೃಷಿ ಮತ್ತು ಅನೌಪಚಾರಿಕ ಕೆಲಸದಲ್ಲಿರುವ ಜನರ ಸಂಖ್ಯೆ ಹೆಚ್ಚಾಯಿತು. ಈ ಜನರಿಗೆ ಸಾಲ ನೀಡಲು ಬ್ಯಾಂಕ್ಗಳು ಹಿಂದೆ ಸರಿಯುತ್ತಿವೆ. ಹೀಗಾಗಿ, ಅವರು ಅನೌಪಚಾರಿಕ ಸಾಲದ ಕಡೆ ಮುಖಮಾಡಿದರು.
ಏನಿದು ಅನೌಪಚಾರಿಕ ಸಾಲ?
ಅಧಿಕೃತವಲ್ಲದ ಮೂಲಗಳಿಂದ ಪಡೆಯುವುದೇ ಅನೌಪಚಾರಿಕ ಸಾಲ. ನೆರೆಹೊರೆಯ ಹಣವಂತ ಜನರು, ನೋಂದಣಿಯಾಗದ ಸಂಘಗಳು, ಅಧಿಕೃತ ಅಲ್ಲದ ಮೈಕ್ರೋ ಫೈನಾನ್ಸ್ ಮೊದಲಾದ ಕಡೆಯಿಂದ ಸಾಲ ಪಡೆಯುವ ಪರಿಪಾಠ ಇದಾಗಿದೆ. ಇದರಲ್ಲಿ ಬಡ್ಡಿದರಗಳು ಹೆಚ್ಚಿರುತ್ತವೆ. ಸಾಲ ನೀಡುವವರು ಮತ್ತು ಪಡೆಯುವವರ ಮಧ್ಯೆ ಯಾವುದೇ ಸ್ಪಷ್ಟ ನಿಯಮಗಳಿರುವುದಿಲ್ಲ. ಏನಾದರು ತಪ್ಪಾದಲ್ಲಿ ಸಾಲಗಾರರಿಗೆ ರಕ್ಷಣೆ ಇರುವುದಿಲ್ಲ. ಈ ಪ್ರವೃತ್ತಿ ಕುಟುಂಬಗಳನ್ನು ಸಾಲದ ಚಕ್ರಗಳಲ್ಲಿ ಸಿಲುಕಿಸಬಹುದು. ಇದರಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಕಿರುಕುಳ, ಆತ್ಮಹತ್ಯೆಯಂತಹ ಸನ್ನಿವೇಶಗಳಿಗೆ ಇದು ದಾರಿ ಮಾಡಿಕೊಡಬಹುದು.
ದಕ್ಷಿಣ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿದೆ?
ಸಾಲದ ವಿಚಾರದಲ್ಲಿ ಭೌಗೋಳಿಕತೆಯೂ ಒಂದು ಪಾತ್ರವನ್ನು ವಹಿಸುತ್ತದೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕದಂತಹ ದಕ್ಷಿಣ ರಾಜ್ಯಗಳು ಹೆಚ್ಚಿನ ಮಟ್ಟದಲ್ಲಿ ಔಪಚಾರಿಕ ಸಾಲಕ್ಕೆ ಆದ್ಯತೆ ನೀಡುತ್ತವೆ. ಚಿನ್ನದ ಸಾಲಗಳ ಜನಪ್ರಿಯತೆ ಮತ್ತು ವ್ಯಾಪಕವಾದ ಫಿನ್ಟೆಕ್ ಬಳಕೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ, ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ಇನ್ನೂ ಅನೌಪಚಾರಿಕ ಮೂಲಗಳನ್ನೇ ಅವಲಂಬಿಸಿವೆ. ಸಾಂಪ್ರದಾಯಿಕವಾಗಿ ಹೆಚ್ಚು ಸ್ಥಿರವಾದ ಕ್ರೆಡಿಟ್ ಪ್ರೊಫೈಲ್ ಹೊಂದಿದ್ದ ಪಂಜಾಬ್ ರಾಜ್ಯವೇ ಈಗ ಅನೌಪಚಾರಿಕ ಸಾಲಗಳ ಕಡೆಗೆ ವಾಲುತ್ತಿದೆ. ಇಲ್ಲಿ ಉದ್ಯೋಗವೂ ಸಹ ಮುಖ್ಯವಾಗಿದೆ. ದಿನಗೂಲಿ ಕಾರ್ಮಿಕರು ಬ್ಯಾಂಕ್ಗಳಿಂದ ಹೆಚ್ಚು ಹೊರಗಿಡಲ್ಪಟ್ಟವರಲ್ಲಿ ಸೇರಿದ್ದಾರೆ. ಈ ಗುಂಪಿನಲ್ಲಿ 55% ಕ್ಕಿಂತ ಹೆಚ್ಚು ಕುಟುಂಬಗಳು ಅನೌಪಚಾರಿಕ ಸಾಲಗಳನ್ನೇ ಅವಲಂಬಿಸಿವೆ. ಏಕೆಂದರೆ ಬ್ಯಾಂಕುಗಳು ಅವುಗಳನ್ನು ತುಂಬಾ ಅಪಾಯಕಾರಿ ಎಂದು ನೋಡುತ್ತವೆ. ಸ್ವಯಂ ಉದ್ಯೋಗಿಗಳು, ವಿಶೇಷವಾಗಿ ಸಣ್ಣ ವ್ಯವಹಾರಗಳನ್ನು ನಡೆಸುವವರಿಗೆ ಬ್ಯಾಂಕುಗಳು ಸಾಲ ನೀಡಲು ಹಿಂಜರಿಯುತ್ತವೆ. ಪರಿಣಾಮವಾಗಿ ಕುಟುಂಬಗಳಲ್ಲಿ ಹೆಚ್ಚಿನವು ಸಾಂಸ್ಥಿಕವಲ್ಲದ ಸಾಲವನ್ನು ಅವಲಂಬಿಸಿವೆ. ಇದನ್ನೂ ಓದಿ: Budget 2025: ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಭಾರತೀಯ ಅಂಚೆ ಸೇವೆಗಳ ಕಾರ್ಯನಿರ್ವಹಣೆ
ಸಂಬಳ ಪಡೆಯುವ ವೃತ್ತಿಪರರು ಮತ್ತು ಕೈಗಾರಿಕಾ ಕಾರ್ಮಿಕರು ಔಪಚಾರಿಕ ಸಾಲಗಳನ್ನು ಪಡೆಯುತ್ತಿದ್ದಾರೆ. ಡಿಜಿಟಲ್ ಸಾಲ ಪ್ಲಾಟ್ಫಾರ್ಮ್ಗಳು ಇವರಿಗೆ ಹೆಚ್ಚು ಅವಕಾಶ ಕಲ್ಪಿಸಿವೆ. ಈ ಸಾಲಗಾರರು ಸಾಮಾನ್ಯವಾಗಿ ಹೆಚ್ಚಿನ ದಾಖಲೆಗಳು, ಉತ್ತಮ ಕ್ರೆಡಿಟ್ ಸ್ಕೋರ್ಗಳು ಮತ್ತು ಉತ್ತಮ ಆದಾಯವನ್ನು ಹೊಂದಿರುತ್ತಾರೆ. ಹೀಗಾಗಿ, ಅವರಿಗೆ ಬ್ಯಾಂಕ್ಗಳು ಸಾಲ ನೀಡುತ್ತಿವೆ. ಬ್ಯಾಂಕ್ಗಳು ಕೈಬಿಟ್ಟ ಸ್ಥಾನಗಳನ್ನು ಎನ್ಬಿಎಫ್ಸಿ ಮತ್ತು ಮೈಕ್ರೋಫೈನಾನ್ಸ್ಗಳು ತುಂಬಿವೆ. ಇವುಗಳು ಹೆಚ್ಚಾಗಿ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ, ಇವುಗಳಿಗೆ ಮಿತಿ ಇರುತ್ತದೆ. ದೇಬೋಪಮ್ ಚೌಧರಿ ವರದಿಯಲ್ಲಿ, ‘ಸಕಾಲಿಕ, ಕೈಗೆಟುಕುವ ಮತ್ತು ಸೂಕ್ತವಾದ ಸಾಲ ನೀಡಿಕೆ ಮುಖ್ಯವಾಗಿದೆ. ಲಕ್ಷಾಂತರ ಅನೌಪಚಾರಿಕ ಕಾರ್ಮಿಕರು, ಸಣ್ಣ ಉದ್ಯಮಿಗಳು ಮತ್ತು ಗ್ರಾಮೀಣ ಕುಟುಂಬಗಳಿಗೆ, NBFCಗಳು ಔಪಚಾರಿಕ ಹಣಕಾಸಿನ ಏಕೈಕ ಸೇತುವೆಯಾಗಿದೆ. ಸಾಲದ ಅಂತರವನ್ನು ಮುಚ್ಚಲು ಅವುಗಳನ್ನು ಬಲಪಡಿಸುವುದು ಅತ್ಯಗತ್ಯ’ ಎಂದಿದೆ.
ಸಲಹೆ ಏನು?
ಸ್ವ ಉದ್ಯೋಗಿಗಳು, ಬ್ಲೂ-ಕಾಲರ್ ಕೆಲಸಗಾರರು ಸಾಲದ ಸುಳಿಯಲ್ಲಿ ಸಿಲುಕಿ ನರಳುವಂತಾಗಿದೆ. ಅನೌಪಚಾರಿಕ ಸಾಲವು ಅವರಿಗೆ ಹೆಚ್ಚಿನ ವೆಚ್ಚದ ಹೊರೆ ಉಂಟು ಮಾಡಿದೆ. ಇದು ಅವರ ಮನೆಯ ಆರ್ಥಿಕ ಪರಿಸ್ಥಿತಿಯನ್ನೂ ಹದಗೆಡಿಸುತ್ತಿದೆ. ಈ ಸಾಲದಾತರನ್ನು ಬಲಪಡಿಸಲು ಹೆಚ್ಚಿನ ಬೆಂಬಲದ ಅಗತ್ಯವಿದೆ. NBFCಗಳಿಗೆ ಹಣವನ್ನು ಸಂಗ್ರಹಿಸಲು ಹೆಚ್ಚಿನ ಆಯ್ಕೆಗಳನ್ನು ನೀಡುವುದು ಮತ್ತು ಸಣ್ಣ ಸಾಲಗಾರರಿಗೆ ಸಾಲ ವಸೂಲಾತಿಯ ಸುತ್ತಲಿನ ನಿಯಮಗಳನ್ನು ಸರಳಗೊಳಿಸುವಂತಹ ಕ್ರಮಗಳು ಬೇಕಾಗಿವೆ. ಈ ಕ್ರಮವು ಪ್ರಸ್ತುತ ಔಪಚಾರಿಕ ವ್ಯವಸ್ಥೆಯಿಂದ ಹೊರಗುಳಿದಿರುವ ಹೆಚ್ಚಿನ ಜನರನ್ನು ತಲುಪಲು ಅವರಿಗೆ ಸಹಾಯ ಮಾಡಬಹುದು.
ಸರ್ಫೆಸಿ ಕಾಯ್ದೆಯಡಿಯಲ್ಲಿ ಭದ್ರತಾ ಹಿತಾಸಕ್ತಿಗಳನ್ನು ಜಾರಿಗೊಳಿಸಲು ಸಾಲದ ಮೊತ್ತದ ಮಿತಿಯನ್ನು 20 ಲಕ್ಷದಿಂದ 1 ಲಕ್ಷ ರೂ.ಗೆ ಇಳಿಸುವ ಮೂಲಕ ಈ ಸಂಸ್ಥೆಗಳಿಗೆ ವ್ಯವಹಾರ ಮಾಡುವ ಸುಲಭ ಮಾರ್ಗ ಕಲ್ಪಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಸುಧಾರಣೆಗಳು NBFCಗಳನ್ನು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಹೆಚ್ಚಿನ ಸಾಮರ್ಥ್ಯವನ್ನು ಕಲ್ಪಿಸುತ್ತದೆ. ಔಪಚಾರಿಕ ಹಣಕಾಸು ಸೇವೆಗಳನ್ನು ಪಡೆದುಕೊಳ್ಳಲು ಇನ್ನೂ ಹೆಣಗಾಡುತ್ತಿರುವ ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ಸೇವೆ ಸಲ್ಲಿಸುತ್ತವೆ ಎಂದು ವರದಿಯು ಆಶಯ ವ್ಯಕ್ತಪಡಿಸಿದೆ.