ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದ ಒಳಗೆ ಕೈದಿಗಳು ಕೀ ಪ್ಯಾಡ್ ಫೋನ್ ಬೇಕು ಅಂದರೆ 6 ಸಾವಿರ ರೂ. ಕೊಡಬೇಕು. ಆ್ಯಂಡ್ರಾಯ್ಡ್ ಫೋನ್ ಬೇಕು ಅಂದ್ರೆ 15 ರಿಂದ 20 ಸಾವಿರ ರೂ. ಕೊಡಬೇಕು. ಇಂತಹ ಮಾಹಿತಿಯನ್ನು ಖುದ್ದು ಜೈಲು ಸಂದರ್ಶಕ ಮಂಡಳಿ ಸದಸ್ಯರೇ ಅಧಿಕೃತವಾಗಿ ಹೇಳಿದ್ದಾರೆ.
ಜೈಲು ಸಂದರ್ಶಕ ಮಂಡಳಿ ಸದಸ್ಯ ಪವನ್ ಸಿದ್ದರಾಮು ಈ ರೀತಿಯ ಸ್ಫೋಟಕ ಹೇಳಿಕೆ ನೀಡಿ, ಮೈಸೂರು ಕಾರಾಗೃಹದಲ್ಲಿನ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಜೈಲಿನಲ್ಲಿರುವ ಕೈದಿಗಳೇ ನನಗೂ ಬಹಳಷ್ಟು ಸಾರಿ ಒಳಗಿನಿಂದ ಕರೆ ಮಾಡಿದ್ದಾರೆ. ಮೈಸೂರು ಜೈಲಿನಲ್ಲಿ ಅಕ್ರಮಕ್ಕೆ ಜೈಲು ಅಧೀಕ್ಷಕರಾಗಿದ್ದ ರಮೇಶ್ ಕುಮಾರ್, ಜೈಲರ್ ಧರಣೇಶ್ ನೇರ ಕಾರಣ ಎಂದು ಆರೋಪಿಸಿದ್ದಾರೆ.
ಬೀಡಿ, ಸಿಗರೇಟ್ ರಾಜಾರೋಷವಾಗಿ ಜೈಲಿನ ಒಳಗೆ ಹೋಗುತ್ತಿದೆ. ಕೈದಿಗಳು ಸಿಗರೇಟ್, ಬೀಡಿ ಸೇಯೋದು ನನಗೆ ಗೊತ್ತಿದೆ. ಕೂಡಲೇ ಮೈಸೂರು ಕೇಂದ್ರ ಕಾರಾಗೃಹದ ಅವ್ಯವಹಾರದ ತನಿಖೆ ಆಗಬೇಕು ಎಂದು ಮೈಸೂರು ಕೇಂದ್ರ ಕಾರಾಗೃಹ ಮಂಡಳಿ ಸದಸ್ಯ ಪವನ್ ಸಿದ್ದರಾಮು ಒತ್ತಾಯಿಸಿದ್ದಾರೆ.