– ಅಭಿಮಾನ ಇರಲಿ, ಆದರೆ ಜೀವಕ್ಕಿಂತ ದೊಡ್ಡದಲ್ಲ.. ಸುರಕ್ಷಿತವಾಗಿರಿ ಎಂದ ಡಿಸಿಎಂ
ಬೆಂಗಳೂರು: ಅನ್ ಕಂಟ್ರೋಲ್ಡ್ ಕ್ರೌಡ್ ಆಯ್ತು. ಹೀಗಾಗಿ, ತೆರೆದ ವಾಹನದಲ್ಲಿ ವಿಜಯೋತ್ಸವ ಮೆರವಣಿಗೆ ರದ್ದು ಮಾಡಿದ್ದೆವು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.
ಕಾಲ್ತುಳಿತ ದುರಂತ ಕುರಿತು ಮಾತನಾಡಿದ ಡಿಕೆಶಿ, ಪರಿಸ್ಥಿತಿ ಬಗ್ಗೆ ವಿಮಾನ ನಿಲ್ದಾಣದಲ್ಲೇ ಗಮನಿಸಿದ್ದೆವು. ಅದಕ್ಕೆ ನಾವು ಮೆರವಣಿಗೆಯನ್ನು ರದ್ದು ಮಾಡಿ, ಕ್ಲೋಸ್ ವಾಹನದಲ್ಲಿ ಆಟಗಾರರನ್ನು ಕರೆತಂದೆವು. ಆದರೂ, ಅವರ ಮನವಿ ಇತ್ತು. ವಿಧಾನಸೌಧದಿಂದಲಾದರೂ ಬರಬೇಕು ಅಂತ. ಮಳೆ ಬಂದು ತಕ್ಷಣ ಕ್ರೌಡ್ ಅನ್ ಕಂಟ್ರೋಲ್ ಆಯಿತು ಎಂದು ವಿವರಿಸಿದರು. ಇದನ್ನೂ ಓದಿ: ಆರ್ಸಿಬಿ ವಿಜಯೋತ್ಸವದ ವೇಳೆ ಯಡವಟ್ಟು – ಕಾಲ್ತುಳಿತಕ್ಕೆ 10 ಆರ್ಸಿಬಿ ಫ್ಯಾನ್ಸ್ ದುರ್ಮರಣ
ಇಲ್ಲೂ ಕೂಡ ಅನೇಕ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೆರವಣಿಗೆ ಇತ್ತು. 1 ಗಂಟೆಗೂ ಹೆಚ್ಚು ಸಮಯ ಕಾರ್ಯಕ್ರಮ ಮಾಡುವುದಿತ್ತು. ಆದರೆ, 10-15 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಿದೆವು ಎಂದು ತಿಳಿಸಿದರು.
ಸಾವು-ನೋವಿನ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಕೂಡ ಆಸ್ಪತ್ರೆಗೆ ಹೋಗ್ತೀನಿ. ಅಧಿಕೃತ ಸಾವಿನ ಮಾಹಿತಿ ತೆಗೆದುಕೊಳ್ಳಬೇಕು ಎಂದರು. ಭದ್ರತಾ ವೈಫಲ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡದೇ ಡಿಸಿಎಂ ತೆರಳಿದರು. ಇದನ್ನೂ ಓದಿ: ಸರ್ಕಾರದ ಪ್ರಚಾರದ ಹುಚ್ಚಿಗೆ ಜನ ಬಲಿಯಾಗಿದ್ದಾರೆ: ವಿಜಯೇಂದ್ರ ಆಕ್ರೋಶ
ಕಾಲ್ತುಳಿತ ದುರಂತದ ಬಗ್ಗೆ ಎಕ್ಸ್ ಪೋಸ್ಟ್ ಹಾಕಿರುವ ಡಿಸಿಎಂ, ಆರ್ಸಿಬಿಯ ಐಪಿಎಲ್ ಗೆಲುವಿನ ಸಂಭ್ರಮಾಚರಣೆಗೆ ಸಾಕ್ಷಿಯಾಗಬೇಕಿದ್ದ ಜನರು ದುರಂತಕ್ಕೆ ಒಳಗಾಗಿ, ಮೃತಪಟ್ಟಿರುವುದು ತೀವ್ರ ನೋವು ಮತ್ತು ಆಘಾತ ತಂದಿದೆ. ಮೃತರಿಗೆ ನನ್ನ ಸಂತಾಪಗಳು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು. ಅಭಿಮಾನ ಇರಲಿ, ಆದರೆ ಜೀವಕ್ಕಿಂತ ದೊಡ್ಡದಲ್ಲ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.