ನವದೆಹಲಿ: ಭದ್ರತಾ ಉದ್ದೇಶಗಳಿಗಾಗಿ ಒಂದು ದೇಶವು ಸ್ಪೈವೇರ್ (Spyware) ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯಪಟ್ಟಿದೆ.
ನ್ಯಾ.ಸೂರ್ಯ ಕಾಂತ್ ಮತ್ತು ನ್ಯಾ ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠ ಇಸ್ರೇಲಿ ಸ್ಪೈವೇರ್ ಪೆಗಾಸಸ್ (Israel Spyware Pegasus) ಬಳಸಿ ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳ ಮೇಲೆ ಗುರಿಯಿಟ್ಟು ಕಣ್ಗಾವಲು ಮಾಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ 2021 ರಲ್ಲಿ ಸಲ್ಲಿಸಲಾದ ಹಲವಾರು ರಿಟ್ ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಿತು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ದಿನೇಶ್ ದ್ವಿವೇದಿ, ಪ್ರಕರಣದಲ್ಲಿನ ಮೂಲ ಸಮಸ್ಯೆ ಏನೆಂದರೆ ಸರ್ಕಾರದ ಬಳಿ ಈ ಸ್ಪೈವೇರ್ ಇದೆಯೋ? ಅವರು ಖರೀದಿಸಿದ್ದಾರೋ ಅಥವಾ ಇಲ್ಲವೋ ಎನ್ನುವುದು. ಸರ್ಕಾರದ ಬಳಿ ಇದ್ದರೆ ಅದನ್ನು ಈಗಲೂ ಅದನ್ನು ನಿರಂತರವಾಗಿ ಬಳಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ವಾದಿಸಿದರು. ಇದನ್ನೂ ಓದಿ: ಭಾರತದಲ್ಲಿ ಪಾಕ್ ರಕ್ಷಣಾ ಸಚಿವರ ಬಾಯಿ ಬಂದ್!
ದ್ವಿವೇದಿಯವರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಸೂರ್ಯ ಕಾಂತ್, ದೇಶವು ಸ್ಪೈವೇರ್ ಬಳಸುತ್ತಿದ್ದರೆ ತಪ್ಪು ಏನಿದೆ? ಸ್ಪೈವೇರ್ ಹೊಂದುವುದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ಯಾರ ವಿರುದ್ಧ ಬಳಸಲಾಗಿದೆ ಎಂಬುದು ಪ್ರಶ್ನೆ. ನಾವು ರಾಷ್ಟ್ರದ ಭದ್ರತೆಯನ್ನು ರಾಜಿ ಮಾಡಿಕೊಳ್ಳಲು ಅಥವಾ ತ್ಯಾಗ ಮಾಡಲು ಸಾಧ್ಯವಿಲ್ಲ ಎಂದು ಮೌಖಿಕವಾಗಿ ಹೇಳಿದರು.
ಬೇಹುಗಾರಿಕೆ ಆರೋಪಗಳ ಕುರಿತು ತನ್ನ ಸಮಿತಿಯು ಸಲ್ಲಿಸಿದ ತನಿಖಾ ವರದಿಯ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಏಕೆಂದರೆ ಅದು ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸಂಬಂಧಿಸಿದೆ ಎಂದು ಹೇಳಿತು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಸುಳಿವು ನೀಡುತ್ತಾ, ನಾವೀಗ ಇರುವ ಪರಿಸ್ಥಿತಿಯಲ್ಲಿ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.
ಸ್ಪೈವೇರ್ ಬಳಸಿಕೊಂಡು ತನ್ನನ್ನು ಬೇಹುಗಾರಿಕೆ ಮಾಡಲಾಗಿದೆ ಎಂದು ಅನುಮಾನಿಸುವ ಯಾರಾದರೂ ನ್ಯಾಯಾಲಯವನ್ನು ಸಂಪರ್ಕಿಸಬಹುದು ಮತ್ತು ಅವರನ್ನು ಗುರಿಯಾಗಿಸಲಾಗಿದೆಯೇ ಎಂಬುದರ ಕುರಿತು ಪ್ರತಿಕ್ರಿಯೆಯನ್ನು ಪಡೆಯಲಾಗುವುದು ಎಂದು ನ್ಯಾಯಾಲಯ ಹೇಳಿತು.
ಈ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಭಯೋತ್ಪಾದಕರು ಗೌಪ್ಯತೆಯ ಹಕ್ಕುಗಳನ್ನು ಹೊಂದಲು ಸಾಧ್ಯವಿಲ್ಲ. ಗೌಪ್ಯತೆಯ ಹಕ್ಕನ್ನು ಹೊಂದಿರುವ ನಾಗರಿಕ ವ್ಯಕ್ತಿಯನ್ನು ಸಂವಿಧಾನದ ಅಡಿಯಲ್ಲಿ ರಕ್ಷಿಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಉಗ್ರರ ದಾಳಿ ಹಿಂದೆ ಪಾಕ್, ಐಎಸ್ಐ ನಂಟು – ಪಾಕ್ ಪ್ಯಾರಾ ಕಮಾಂಡೋ ಆಗಿದ್ದ ಹಾಶೀಮ್ ಮೂಸಾ!
ಪತ್ರಕರ್ತರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಪೆಗಾಸಸ್ ಮಾಲ್ವೇರ್ ಬಳಸಿ ಎನ್ಎಸ್ಒ ವಾಟ್ಸಾಪ್ ಅನ್ನು ಹ್ಯಾಕ್ ಮಾಡಿದೆ ಎಂದು ಅಮೆರಿಕ ಜಿಲ್ಲಾ ನ್ಯಾಯಾಲಯದ ತೀರ್ಪಿನಲ್ಲಿ ಹೇಳಿದೆ. ಹ್ಯಾಕ್ ಆಗಿರುವ ದೇಶಗಳಲ್ಲಿ ಭಾರತವೂ ಒಂದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ ಎಂದು ಜಡ್ಜ್ ಗಮನಕ್ಕೆ ತಂದರು.
ಪೆಗಾಸಸ್ ವಿರುದ್ಧ ವಾಟ್ಸಾಪ್ ಸಲ್ಲಿಸಿದ ಪ್ರಕರಣದಲ್ಲಿ ಅಮೆರಿಕ ನ್ಯಾಯಾಲಯವು ನೀಡಿದ ತೀರ್ಪನ್ನು ದಾಖಲಿಸಲು ಅರ್ಜಿದಾರರಿಗೆ ಅವಕಾಶ ಮಾಡಿಕೊಟ್ಟ ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿತು.
ಏನಿದು ಪ್ರಕರಣ?
ಭಾರತ (India) ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರು, ರಾಜಕಾರಣಿಗಳು ಮತ್ತು ಇತರರ ಮೇಲೆ ಕಣ್ಣಿಡಲು ಸರ್ಕಾರಗಳು ಪೆಗಾಸಸ್ ಸಾಫ್ಟ್ವೇರ್ ಬಳಸುತ್ತಿವೆ ಎಂಬ ಆರೋಪ 2021 ರಲ್ಲಿ ಕೇಳಿ ಬಂದಿತ್ತು. ಇದಕ್ಕೆ ಪೂರಕ ಎಂಬಂತೆ ಭಾರತ ಮತ್ತು ಇಸ್ರೇಲ್ ನಡುವೆ 2017ರಲ್ಲಿ ನಡೆದ ರಕ್ಷಣಾ ಒಪ್ಪಂದದ ಸಂದರ್ಭದಲ್ಲಿ ಇಸ್ರೇಲಿ ಪೆಗಾಸಸ್ ತಂತ್ರಾಂಶವನ್ನೂ ಖರೀದಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಐಫೋನ್, ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಎನ್ಕ್ರಿಪ್ಟ್ ಮಾಡಲಾದ ಸಂವಹನಗಳನ್ನು ಯಶಸ್ವಿಯಾಗಿ ಭೇದಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ನಿರ್ದಿಷ್ಟ ಜನರ ಮೇಲೆ ಯಾವುದೇ ಕಣ್ಗಾವಲು ಮಾಡಿಲ್ಲ ಎಂದು ಹೇಳಿತ್ತು. ಈ ವಿಚಾರ ಜೋರಾಗಿ ಚರ್ಚೆ ಆಗುತ್ತಿದ್ದಂತೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ಈ ಬಗ್ಗೆ ತನಿಖೆ ನಡೆಸಲು ಒಂದು ಸಮಿತಿಯನ್ನು ರಚಿಸಿತ್ತು. ಸಮಿತಿ ತನಿಖೆ ಆರಂಭಿಸಿದಾಗ ಪೆಗಾಸಸ್ ಸಾಫ್ಟ್ವೇರ್ ಇದೆ ಎಂದು ಆರೋಪ ಮಾಡಿದವರೆ ಪೈಕಿ ಹಲವು ಮಂದಿ ಮೊಬೈಲ್ ಫೋನ್ ನೀಡಿರಲಿಲ್ಲ. ಅಂತಿಮವಾಗಿ ಸುಪ್ರೀಂಗೆ ಸಮಿತಿ ವರದಿ ಸಲ್ಲಿಸಿತ್ತು. ನಾವು 29 ಸಾಧನಗಳನ್ನು ಪರಿಶೀಲಿಸಿದ್ದೇವೆ. ಈ ಸಾಧನಗಳಲ್ಲಿ ಪೆಗಾಸಸ್ ಕಂಡುಬಂದಿಲ್ಲ. ಆದರೆ 5 ಸಾಧನಗಳಲ್ಲಿ ಮಾಲ್ವೇರ್ ಇತ್ತು. ಆದರೆ ಪೆಗಾಸಸ್ ಅಲ್ಲ ಎಂದು ತಿಳಿಸಿತ್ತು.