ಬೆಂಗಳೂರು: ಕಳೆದ 15 ದಿನಗಳ ಹಿಂದೆ ಸಾಂಪ್ರದಾಯಿಕ ಲಡ್ಡುಗಳನ್ನು ತಯಾರಿಸಲು ತಿರುಪತಿಗೆ (Tirupati) ನಂದಿನಿ ತುಪ್ಪ ಸರಬರಾಜು ಮಾಡುವ ಟ್ಯಾಂಕರ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಿದ್ದಾರೆ. ಆದರೆ ಆಂಧ್ರ ಸಿಎಂ ಆರೋಪಿಸಿರುವ ಪ್ರಾಣಿಗಳ ಕೊಬ್ಬು ಯಾವುದೆಂದು ಅವರೇ ತಿಳಿಸಬೇಕು ಎಂದು ಕೆಎಂಎಫ್ (KMF) ಅಧ್ಯಕ್ಷ ಭೀಮನಾಯ್ಕ್ ಹೇಳಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಸುತ್ತಿದ್ದರು ಎಂಬ ಆಂಧ್ರ ಸಿಎಂ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ 50 ವರ್ಷಗಳಿಂದ ಸಾಂಪ್ರದಾಯಿಕ ಲಡ್ಡುಗಳನ್ನು ತಯಾರಿಸಲು ತುಪ್ಪವನ್ನು ಸರಬರಾಜು ಮಾಡುತ್ತಿದೆ. ಆದರೆ ಕಳೆದ ವರ್ಷ ಬೆಲೆ ಏರಿಕೆಯ ಪರಿಣಾಮ ಟೆಂಡರ್ ವಿಚಾರದಲ್ಲಿ ಸಮಸ್ಯೆಯಾಗಿ ತುಪ್ಪ ಸರಬರಾಜನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ 15 ದಿನಗಳಿಂದ ಸರಬರಾಜಾಗುತ್ತಿದೆ ಎಂದು ತಿಳಿಸಿದ್ದಾರೆ.
ಮುಂದೆ ಸಹ ನಂದಿನಿ ತುಪ್ಪ ತಿರುಪತಿ ಲಡ್ಡು ತಯಾರಿಕೆಗೆ ಸರಬರಾಜಾಗುತ್ತದೆ. ಈ ಸಂಪ್ರದಾಯ ನಿಲ್ಲುವುದಿಲ್ಲ. ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ಆರೋಪ ಏನು? ಯಾವ ಪ್ರಾಣಿ ಕೊಬ್ಬು ಎಂದು ಅವರೇ ಹೇಳಬೇಕು. ಎಫ್ಎಸ್ಎಲ್ ವರದಿ ಏನಿದೆಯೋ ಎಂದು ಅವರು ಹೇಳಿದ್ದಾರೆ.
ಹಿಂದಿನ ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಗಂಭೀರ ಆರೋಪ ಮಾಡಿದ್ದರು.
ಸಿಎಂ ನಾಯ್ಡು ಆರೋಪವನ್ನು ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಪಕ್ಷವು ತಳ್ಳಿಹಾಕಿದೆ. ಇದು ದುರುದ್ದೇಶಪೂರಿತವಾಗಿದೆ ಎಂದು ಟೀಕಿಸಿದೆ.