ಬೀದರ್: ಬಿಜೆಪಿ (BJP) ನಾಯಕರಿಗೆ ಬೀದರ್ (Bidar) ಉತ್ತರ ಹಾಗೂ ಭಾಲ್ಕಿ ಟಿಕೆಟ್ ಆಯ್ಕೆಯ ಭಾರಿ ಒತ್ತಡ ಶುರುವಾಗಿದೆ. ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಒಬಿಸಿ ಫೈಟ್ ಹೈಕಮಾಂಡ್ಗೆ ತಲೆನೋವುವಾಗಿ ಪರಿಣಮಿಸಿದೆ. ಈ ಕಾರಣಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎರಡೂ ಕ್ಷೇತ್ರಗಳ ಟಿಕೆಟ್ (BJP candidates list) ಘೋಷಣೆ ಮಾಡದೇ ನಿರ್ಧಾರವನ್ನು ತಡೆಹಿಡಿಯಲಾಗಿದೆ.
ಲಿಂಗಾಯತರಿಗೆ ಆದ್ಯತೆ ನೀಡಬೇಕಾ? ಒಬಿಸಿ ಅಭ್ಯರ್ಥಿಗೆ ಟಿಕೆಟ್ ನೀಡಬೇಕಾ? ಹಳಬರಿಗೆ ಕೊಡಬೇಕಾ ಅಥವಾ ಹೊಸ ಮುಖಗಳನ್ನು ಅಖಾಡಕ್ಕಿಳಿಸಬೇಕಾ? ಎಂಬ ಗೊಂದಲದಲ್ಲಿ ಹೈಕಮಾಂಡ್ ಸಿಲುಕಿದೆ. ಹಾಲಿ ಶಾಸಕ ರಹೀಮ್ ಖಾನ್ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ನಾನಾ ರಣತಂತ್ರ ಹೆಣೆಯುತ್ತಿದೆ. ಇದಕ್ಕಾಗಿ ಅಳೆದು ತೂಗಿ ಟಿಕೆಟ್ ನಿರ್ಧರಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಎದೆ ನಡುಗಿಸುವಂತಿದೆ ಬಿಜೆಪಿ ಪಟ್ಟಿ: ಈಶ್ವರಪ್ಪ
ಹಿಂದಿನ ಚುನಾವಣೆಯಲ್ಲಿ (Election) ಪರಾಜಿತರಾಗಿದ್ದ ಸೂರ್ಯಕಾಂತ ನಾಗರಮಾರಪಳ್ಳಿ ಲಿಂಗಾಯತ ಸಮುದಾಯದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಿರಿಯ ಉದ್ಯಮಿ ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ್ ಸಹ ಆಕಾಂಕ್ಷಿಯಾಗಿದ್ದು ಇಬ್ಬರ ನಡುವೆ ಟಿಕೆಟ್ಗಾಗಿ ಭಾರಿ ಪೈಪೋಟಿಯಿದೆ. ಒಬಿಸಿಯಿಂದ ಈಶ್ವರ ಸಿಂಗ್ ಠಾಕೂರ್ ಹಾಗೂ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ ಅವರ ಹೆಸರು ಕೂಡಾ ಆಕಾಂಕ್ಷಿಗಳ ಸಾಲಿನಲ್ಲಿ ಕೇಳಿ ಬರುತ್ತಿದೆ.
ಭಾಲ್ಕಿಯಲ್ಲಿ ಲಿಂಗಾಯತರಿಗೆ ಇಲ್ಲವೇ ಮರಾಠರಿಗೆ ಟಿಕೆಟ್ ನೀಡುವ ಬಗ್ಗೆ ಗೊಂದಲವಿದೆ. ಇದೇ ಕಾರಣಕ್ಕೆ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡದೇ ಕಾದು ನೋಡುವ ತಂತ್ರ ಅನುಸರಿಸಿದೆ. ಲಿಂಗಾಯತ ಪ್ರಕಾಶ್ ಖಂಡ್ರೆ, ಡಿ.ಕೆ ಸಿದ್ರಾಮ್ ಅಥವಾ ಮರಾಠ ಮುಖಂಡ ಡಾ.ದಿನಕರ್ಗೆ ಟಿಕೆಟ್ ನೀಡಬೇಕಾ ಎಂಬ ಗೊಂದಲವಿದೆ.
ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರದ ಟಿಕೆಟ್ ಮಾತ್ರ ಘೋಷಣೆ ಮಾಡಿದ್ದು ಬಸವಕಲ್ಯಾಣದಿಂದ ಶರಣು ಸಲಗರ್ಗೆ, ಔರಾದ್ನಿಂದ ಪ್ರಭು ಚವ್ಹಾಣ್ಗೆ, ಹುಮ್ನಾಬಾದ್ನಿಂದ ಸಿದ್ದು ಪಾಟೀಲ್ಗೆ ಹಾಗೂ ಬೀದರ್ ದಕ್ಷಿಣದಿಂದ ಶೈಲೇಂದ್ರ ಬೆಲ್ದಾಳೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ನಿವೃತ್ತಿ ಘೋಷಣೆ ಮಾಡಲು ಸಿದ್ಧ, ಆದ್ರೆ ಅದು ಗೌರವಯುತವಾಗಿ ಆಗಬೇಕು: ಶೆಟ್ಟರ್