ಬೆಂಗಳೂರು: ಮದುವೆಯಾಗಲು ಪ್ರಿಯತಮೆ ಹಾಗೂ ಆಕೆಯ ಮಗ ಅಡ್ಡಿಯಾದ ಕಾರಣ 9 ವರ್ಷದ ಬಾಲಕನನ್ನು ಅಮಾನುಷವಾಗಿ ಕೊಲೆ ಮಾಡಿ, ಪ್ರಿಯತಮೆಯ ಕೊಲೆಗೆ ಯತ್ನಿಸಿರುವ ಘಟನೆ ಹೊಸಕೋಟೆ ತಾಲೂಕಿನ ವಾಗಟ ಗ್ರಾಮದಲ್ಲಿ ನಡೆದಿದೆ.
9 ವರ್ಷದ ಗೌತಮ್ ಮೃತ ದುರ್ದೈವಿಯಾಗಿದ್ದು, ಹೊಸಕೋಟೆ ಅತ್ತಿವಟ್ಟ ಗ್ರಾಮದ ನಿವಾಸಿಯಾಗಿರುವ ರಾಮಮೂರ್ತಿ ಕೊಲೆ ಮಾಡಿದ ಆರೋಪಿ. ಇನ್ನು ಘಟನೆಯಲ್ಲಿ ಆರೋಪಿ ಮೂರ್ತಿ ಪ್ರಿಯತಮೆ ಜ್ಯೋತಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಏನಿದು ಪ್ರಕರಣ?
ಕಳೆದ ಕೆಲ ವರ್ಷಗಳ ಹಿಂದೆ ಜ್ಯೋತಿ ವ್ಯಕ್ತಿಯೊಬ್ಬರನ್ನು ಮುವೆಯಾಗಿದ್ದು ಇಬ್ಬರ ದಾಂಪತ್ಯ ಜೀವನಕ್ಕೆ ಗಂಡು ಮಗು ಜನಿಸಿತ್ತು. ಕೆಲ ದಿನ ಸಂಸಾರ ಮಾಡಿದ್ದ ಪತಿ ಜ್ಯೋತಿಯನ್ನು ಬಿಟ್ಟು ಹೋಗಿದ್ದ. ಗಂಡ ಬಿಟ್ಟು ಹೋದ ಬಳಿಕ ಜ್ಯೋತಿ ಅತ್ತಿಮಟ್ಟ ನಿವಾಸಿ ರಾಮಮೂರ್ತಿ ಜೊತೆ ಆಕ್ರಮ ಸಂಬಂಧ ಹೊಂದಿದ್ದಳು.
ಈ ನಡುವೆ ರಾಮಮೂರ್ತಿಗೆ ಆತನ ಪೋಷಕರು ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ತಾನು ಮದುವೆಯಾಗಲು ಪ್ರಿಯತಮೆ ಹಾಗೂ ಆಕೆಯ ಮಗ ಅಡ್ಡ ಬಂದ ಕಾರಣ ಇಬ್ಬರನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಕೊಲೆ ಮಾಡಲು ಪ್ಲಾನ್ ಮಾಡಿದ್ದ ಆತ ತನ್ನ ಸ್ನೇಹಿತರ ಜೊತೆ ಚರ್ಚೆ ನಡೆಸಿ ಕೃತ್ಯಕ್ಕೆ ಸಂಚು ರೂಪಿಸಿದ್ದ.
ಕಳೆದ ಮೂರು ದಿನಗಳ ಹಿಂದೆ ಸ್ನೇಹಿತರ ಸಹಾಯದಿಂದ ಗ್ರಾಮದ ಹೊರ ವಲಯಕ್ಕೆ ಇಬ್ಬರನ್ನು ಕರೆದುಕೊಂಡು ಹೋಗಿ ಕೊಲೆ ಮಾಡಲು ಯತ್ನಿಸಿದ್ದ. ಈ ವೇಳೆ ಗೌತಮ್ ನನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಮೃತ ದೇಹವನ್ನು ವಾಗಟ ಗ್ರಾಮದ ಬಳಿ ಪೊದೆಯಲ್ಲಿ ಎಸೆದು ಬಂದಿದ್ದ.
ಬಳಿಕ ಪ್ರಿಯತಮೆಯನ್ನು ಕೊಲೆ ಮಾಡಲು ಯತ್ನಿಸಿ ಆಕೆಯ ತಲೆಗೆ ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಇದ್ದರಿಂದ ಸ್ಥಳದಲ್ಲೇ ಜ್ಯೋತಿ ಕುಸಿದು ಬಿದಿದ್ದಳು. ಇದನ್ನು ಕಂಡ ಆರೋಪಿ ರಾಮಮೂರ್ತಿ, ಜ್ಯೋತಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಸ್ಥಳದಿಂದ ಪರಾರಿಯಾಗಿದ್ದ.
ಮಾರಣಾಂತಿಕವಾಗಿ ಹಲ್ಲೆಗೆ ಗುರಿಯಾಗಿದ್ದ ಜ್ಯೋತಿ ಪ್ರಜ್ಞೆ ಬಂದ ಬಳಿಕ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಈ ವೇಳೆ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಗೌತಮ್ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದ ಬಳಿಕ ಆತನ ದೇಹ ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಬಾಲಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿದ್ದರು.
ತನಿಕೆ ವೇಳೆ ಘಟನೆಯ ಸತ್ಯಾಂಶ ಹೊರ ಬಂದಿದ್ದು ಆರೋಪಿ ರಾಮಮೂರ್ತಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಘಟನೆಯ ಕುರಿತು ತಿರುಮಲಶೆಟ್ಟಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.