ತುಮಕೂರು: ಜಿಲ್ಲೆಯ ಹುಲಿಯೂರುದುರ್ಗದ ಹಳೇಪೇಟೆಯಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಪ್ರಕಾಶ್ ಎಂಬವರ ಮನೆಯ ನೀರಿನ ಟ್ಯಾಂಕ್ ಬಳಿ ಹೆಬ್ಬಾವು ಕಾಣಿಸಿಕೊಂಡಿತ್ತು. ಈ ಹೆಬ್ಬಾವನ್ನು ಕಂಡ ಜನರು ಬೆಚ್ಚಿಬಿದ್ದರು. ಅಲ್ಲದೆ ಸುಮಾರು ಎರಡು ಗಂಟೆಗಳ ಕಾಲ ಸ್ಥಳೀಯ ನಿವಾಸಿಗಳು ಭಯದಲ್ಲೇ ಕಾಲ ಕಳೆದಿದ್ದಾರೆ.
ಹೆಬ್ಬಾವು ನೋಡಿದ ತಕ್ಷಣ ಸ್ಥಳೀಯರು ಸ್ನೇಕ್ ಚೇತನ್ಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಚೇತನ್, ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದ ಹೆಬ್ಬಾವನ್ನು ರಕ್ಷಿಸಿ ಅದನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ. ಹೆಬ್ಬಾವನ್ನು ಸೆರೆಹಿಡಿಯುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
ಸುಮಾರು 9 ಅಡಿ ಉದ್ದ ಇರುವ ಈ ಹೆಬ್ಬಾವು ಪಕ್ಕದ ಅರಣ್ಯ ಪ್ರದೇಶದಿಂದ ನಾಡಿಗೆ ಬಂದಿತ್ತು. ಸದ್ಯ ಹೆಬ್ಬಾವನ್ನು ಹಿಡಿದಿದ್ದರಿಂದ ಹಳೇ ಪೇಟೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ.