ನವದೆಹಲಿ: ಕರ್ನಾಟಕದಲ್ಲಿ (Karnataka) ರೈಲ್ವೆ ಯೋಜನೆಗಳಿಗೆ 8,280 ಎಕರೆ ಭೂಸ್ವಾಧೀನ ಬಾಕಿ ಇದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದರು.
ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ರಾಯಚೂರು (Raichuru) ಸಂಸದ ಜಿ.ಕುಮಾರ್ ನಾಯ್ಕ್ (G.Kumar Naik) ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ನಾಲ್ಕು ಪ್ರಮುಖ ಯೋಜನೆಗಳಿಗೆ ಒಂದೇ ಒಂದು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ. ರಾಜ್ಯದಲ್ಲಿ 25 ರೈಲ್ವೆ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. 3,264 ಕಿ.ಮೀ. ಉದ್ದದ ಯೋಜನೆಗಳ ಪೈಕಿ ಈವರೆಗೂ 1,394 ಕಿ.ಮೀ. ಪೂರ್ಣಗೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಯೋಜನೆಗಳ ಅನುಷ್ಠಾನ ತಡವಾಗಿದೆ. ಶೇ.37ರಷ್ಟು ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಸ್ಪೇಸ್ ಪಾರ್ಕ್ ಸೇರಿ ಹಲವು ಯೋಜನೆಗಳಿಗೆ ವಿಶೇಷ ಪ್ರೋತ್ಸಾಹ ನೀತಿ – ಎಂ.ಬಿ ಪಾಟೀಲ್, ಪ್ರಿಯಾಂಕ್ ಖರ್ಗೆ ಮಾತುಕತೆ
ಹೆಜ್ಜಾಲ-ಚಾಮರಾಜನಗರ ನಡುವೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಶೇ.50ರಷ್ಟು ಅನುದಾನ ನೀಡಬೇಕಿತ್ತು. ಆದಾಗ್ಯೂ, ಕರ್ನಾಟಕ ಸರ್ಕಾರ ಇದೀಗ ನಿಲುವು ಬದಲಿಸಿದ್ದರಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದರು.
ನೈರುತ್ಯ ವಲಯದಲ್ಲಿ ರೈಲ್ವೆ ಜಾಲ ಕಡಿಮೆ:
ದೇಶದಲ್ಲಿ 17 ರೈಲ್ವೆ ವಲಯಗಳಿವೆ. ಒಟ್ಟು ರೈಲ್ವೆ ಜಾಲ 69,181 ಕಿ.ಮೀ. ಅನ್ನು ಬೇರೆ ವಲಯಗಳಿಗೆ ಹೋಲಿಸಿದರೆ ನೈರುತ್ಯ ವಲಯದಲ್ಲಿ ರೈಲ್ವೆ ಜಾಲ ಕಡಿಮೆ. ಇಲ್ಲಿ 3,692 ಕಿ.ಮೀ. ರೈಲ್ವೆ ಜಾಲ ಇದೆ ಎಂದರು.
ಯಾವುದೇ ಪ್ರದೇಶದಲ್ಲಿನ ರೈಲ್ವೆ ಜಾಲವು ಆ ಪ್ರದೇಶದ ಜನಸಂಖ್ಯಾ ಸಾಂದ್ರತೆ, ಭೂಪ್ರದೇಶ, ಭೌಗೋಳಿಕ ಲಕ್ಷಣಗಳು ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ, ರೈಲ್ವೆ ಸಾಂದ್ರತೆಯು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ರಾಜ್ಯದಲ್ಲಿ ದೀಪಾವಳಿ ಧಮಾಕ, ಕಾಂಗ್ರೆಸ್ನಲ್ಲಿ ಕ್ರಾಂತಿ : ವಿಜಯೇಂದ್ರ