– ಈ ಬಾರಿ ಮಹದೇಶ್ವರನ ಆದಾಯದಲ್ಲಿ ಕುಸಿತ
ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿ ಏಣಿಕೆ ಮಾಡಲಾಗಿದ್ದು, ಒಂದು ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.
ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದಲ್ಲಿ ಪ್ರತಿ ತಿಂಗಳಿಗೊಮ್ಮೆ ಹುಂಡಿ ಏಣಿಕೆ ನಡೆಯುತ್ತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಹುಂಡಿ ಏಣಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ 82 ದಿನಗಳ ಬಳಿಕ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಆದರೆ ಈ ಬಾರಿ ಮಹದೇಶ್ವರನ ಆದಾಯದಲ್ಲಿ ಕುಸಿತ ಕಂಡು ಬಂದಿದೆ.
ಹುಂಡಿಯಲ್ಲಿ 1.47 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಹಣದ ಜೊತೆಗೆ 17 ಗ್ರಾಂ ಚಿನ್ನ, 985 ಗ್ರಾಂ ಬೆಳ್ಳಿ ಸಹ ಮಹದೇಶ್ವರನ ಹುಂಡಿಯಲ್ಲಿ ಸಂಗ್ರಹವಾಗಿದೆ. ಈ ಮೊದಲು ಪ್ರತಿ ತಿಂಗಳ ಸರಾಸರಿ 1.50 ಕೋಟಿ ರೂಪಾಯಿ ಸಂಗ್ರಹವಾಗುತ್ತಿತ್ತು. ಆದರೆ ಈಗ 82 ದಿನಗಳಿಗೆ 1.47 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಏಳು ಮಲೆಗಳ ಒಡೆಯ, ಮಲೆ ಮಹದೇಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಮುಖ ಯಾತ್ರಸ್ಥಳಗಳಲ್ಲಿ ಒಂದು. ರಾಜ್ಯದ ಮುಜರಾಯಿ ದೇವಸ್ಥಾನಗಳ ಪೈಕಿ ಮಾದಪ್ಪನ ದೇವಾಲಯ ಅತಿ ಹೆಚ್ಚು ಆದಾಯ ತರುವ ಎರಡನೇ ದೇವಸ್ಥಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕೊರೊನಾ ಕಾರಣದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಸತತ 5 ತಿಂಗಳುಗಳ ಕಾಲ ಭಕ್ತರಿಗೆ ನಿಷೇದ ಹೇರಲಾಗಿತ್ತು.
ಜೂನ್ 8ರಂದು ಸಾಕಷ್ಟು ಮುಂಜಾಗೃತ ಕ್ರಮಗಳನ್ನ ತೆಗೆದುಕೊಂಡು ಭಕ್ತರಿಗೆ ಮಾದಪ್ಪನ ದರ್ಶನ ಮಾಡುವ ವ್ಯವಸ್ಥೆಯನ್ನ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಮಾಡಿತ್ತು.ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆಯುತ್ತಾರೆ.
ಇತ್ತೀಚೆಗೆ ಅಂದರೆ ಅಮಾವಾಸ್ಯೆ ದಿನಗಳಲ್ಲಿ ಲಕ್ಷಾಂತರ ಭಕ್ತರು ಒಂದೇ ಸ್ಥಳದಲ್ಲಿ ಸೇರುತ್ತಾರೆ ಎಂದು 16, 17 ಮತ್ತು 18 ಮೂರು ದಿನಗಳ ಮಾದಪ್ಪನ ಬೆಟ್ಟಕ್ಕೆ ಸಾರ್ವಜನಿಕರು ಹಾಗೂ ಭಕ್ತಾಧಿಗಳ ಪ್ರವೇಶವನ್ನ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.