ಕೇದಾರನಾಥ ಮಾರ್ಗದಲ್ಲಿ ಭೂಕುಸಿತ – ಸಿಲುಕಿಕೊಂಡಿದ್ದ 800 ಯಾತ್ರಿಕರ ರಕ್ಷಣೆ

Public TV
1 Min Read
Kedarnath Landslide 1

ಡೆಹ್ರಾಡೂನ್: ಕೇದಾರನಾಥ (Kedarnath) ಮಾರ್ಗದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ (Landslide) ಸಿಲುಕಿಕೊಂಡಿದ್ದ ಸುಮಾರು 800 ಯಾತ್ರಿಕರನ್ನು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡಗಳು ರಕ್ಷಿಸಿವೆ.

ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಭಾರೀ ಮಳೆಯಿಂದಾಗಿ (Heavy Rain) ರುದ್ರಪ್ರಯಾಗ-ಕೇದಾರನಾಥ ಸಂಪರ್ಕಿಸುವ 107ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ. ಪರಿಣಾಮ ಗೌರಿಕುಂಡ್‌ನಿಂದ ಸೋನ್‌ಪ್ರಯಾಗ್‌ಗೆ ಸಂಪರ್ಕಿಸುವ ಪ್ರಮುಖ ರಸ್ತೆಯ 50 ಮೀ. ಭಾಗವು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ.ಇದನ್ನೂ ಓದಿ: ಮುಡಾ ಹಗರಣ ನಿವೃತ್ತ ನ್ಯಾ. ಪಿ.ಎನ್.ದೇಸಾಯಿ ಆಯೋಗದ ವರದಿ ಸಲ್ಲಿಕೆ

ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಕೆ.ರಾಜ್‌ವಾರ್ ಅವರ ಮಾಹಿತಿ ಪ್ರಕಾರ, ಗೌರಿಕುಂಡ್‌ನಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಮುಂಕಟಿಯಾ ಸ್ಲೈಡಿಂಗ್ ಝೋನ್ ಬಳಿ ಭೂಕುಸಿತ ಸಂಭವಿಸಿದೆ. ಈ ವೇಳೆ ಸಾವಿರಾರು ಯಾತ್ರಿಕರು ಸಿಲುಕಿಕೊಂಡಿದ್ದರು. ಕೂಡಲೇ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡದ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ, ಯಾತ್ರಿಕರನ್ನು ಸುರಕ್ಷಿತವಾಗಿ ಸೋನ್‌ಪ್ರಯಾಗ್‌ಗೆ ಸ್ಥಳಾಂತರಿಸಿದರು. ಭೂಕುಸಿತದಿಂದಾಗಿ ಕೇದಾರನಾಥ ಯಾತ್ರೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ರಸ್ತೆಯನ್ನು ಸರಿಪಡಿಸಲು ಕನಿಷ್ಠ 2-3 ದಿನಗಳು ಬೇಕಾಗಬಹುದು ಎಂದು ತಿಳಿಸಿದ್ದಾರೆ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (ಎಸ್‌ಇಒಸಿ) ಪ್ರಕಾರ, ಮಳೆಯಿಂದಾಗಿ ಉತ್ತರಾಖಂಡದಾದ್ಯಂತ ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿ ಒಟ್ಟು 94 ರಸ್ತೆಗಳು ಬಂದ್ ಆಗಿವೆ. ಸದ್ಯ ಎಸ್‌ಡಿಆರ್‌ಎಫ್ ಪರ್ಯಾಯ ಮಾರ್ಗದ ಮೂಲಕ ಯಾತ್ರಿಕರ ಸಂಚಾರವನ್ನು ಸುಗಮಗೊಳಿಸುತ್ತಿದೆ. ಈ ಋತುವಿನಲ್ಲಿ ಇದುವರೆಗೆ 14.4 ಲಕ್ಷಕ್ಕೂ ಅಧಿಕ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಜು.29ರಂದು ಒಂದೇ ದಿನದಲ್ಲಿ 2,253 ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದೆ.

ಮಳೆಗಾಲದಲ್ಲಿ ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಆಗಾಗ್ಗೆ ಭೂಕುಸಿತ ಮತ್ತು ಇತರ ನೈಸರ್ಗಿಕ ವಿಪತ್ತುಗಳು ಸಂಭವಿಸುತ್ತವೆ. ಇದರಿಂದಾಗಿ ಯಾತ್ರಾ ಮಾರ್ಗಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಆದರೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯ ಪೊಲೀಸ್ ತಂಡಗಳ ಸಮನ್ವಯದ ಕಾರ್ಯಾಚರಣೆಯಿಂದ ಯಾತ್ರಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲಾಗಿದೆ.ಇದನ್ನೂ ಓದಿ:ಸಚಿವ ಕೆ.ಎನ್.ರಾಜಣ್ಣಗೆ ಹನಿಟ್ರ್ಯಾಪ್ ಯತ್ನದಲ್ಲಿ ಹುರುಳಿಲ್ಲ – ಐಜಿಪಿಗೆ ಸಿಐಡಿ ವರದಿ

Share This Article